ಗದಗ: ‘ನನಗಂತೂ ಜಗದೀಶ್ ಶೆಟ್ಟರ್ ಬಿಜೆಪಿಗೆ ಬರಬೇಕು ಎಂಬ ಅಪೇಕ್ಷೆ ಇದೆ. ಅವರು ಆತ್ಮೀಯ ಸ್ನೇಹಿತರು. ಅವರ ತಂದೆ ಜನಸಂಘದ ಕಾಲದಿಂದ ಬಂದವರು. ಅವರ ಮೈಯಲ್ಲಿ ಹಿಂದುತ್ವದ ರಕ್ತ ಹರಿಯುತ್ತಿದೆ’ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ತಿಳಿಸಿದರು.
‘ಶೆಟ್ಟರ್ ಕಾಂಗ್ರೆಸ್ಗೆ ಹೋದಾಗ ನನಗೆ ತುಂಬ ನೋವಾಗಿತ್ತು. ಬಹಿರಂಗವಾಗಿ ಪತ್ರವನ್ನೂ ಬರೆದಿದ್ದೆ. ಕಾಂಗ್ರೆಸ್ ಸೇರಿದ ಕಾರಣಕ್ಕೆ ಬಿಜೆಪಿ ವಿರುದ್ಧ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಇನ್ನು ಸ್ವಲ್ಪ ದಿನದಲ್ಲೇ ನಮ್ಮ ಕಡೆಗೆ ಬರುತ್ತಾರೆ’ ಎಂದು ಅವರು ಸುದ್ದಿಗಾರರಿಗೆ ಹೇಳಿದರು
‘ದೇಶದಲ್ಲಿ ಕಾಂಗ್ರೆಸ್ ದುರಸ್ತಿ ಮಾಡಲು ಸಾಧ್ಯವಿಲ್ಲ. ಇದನ್ನು ಖಾಸಗಿಯಾಗಿ ಶೆಟ್ಟರ್ ಅವರನ್ನೇ ಕೇಳಿ. ಕರ್ನಾಟಕ ಬಿಟ್ಟರೆ ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ? ಅಲ್ಲೊಂದು, ಇಲ್ಲೊಂದು, ಮತ್ತೊಂದು ಅಂತ ಹುಡುಕಬೇಕಷ್ಟೇ’ ಎಂದು ಲೇವಡಿ ಮಾಡಿದರು.