ನರಗುಂದ: ‘ಉತ್ತರ ಕರ್ನಾಟಕದ ಮಠಗಳು ಜಾತ್ಯತೀತ ಕೇಂದ್ರಗಳಾಗಿವೆ. ಸಾಮರಸ್ಯಕ್ಕೆ ಸಾಕ್ಷಿಯಾಗಿವೆ. ಗ್ರಾಮೀಣ ಭಾಗದ ಭಕ್ತರ ಜೋಳದ ರೊಟ್ಟಿಯಿಂದ ಈ ಭಾಗದ ಮಠಗಳು ಗಟ್ಟಿಯಾಗಿ
ಬೆಳೆಯಲು ಸಾಧ್ಯವಾಗಿವೆ’ ಎಂದು ಗದಗನ ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಶ್ರೀ ಹೇಳಿದರು.
ತಾಲ್ಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಗುರುವಾರ ನಡೆದ ಶಾಂತಲಿಂಗ ಶ್ರೀಗಳು ಲೋಕ ಕಲ್ಯಾಣಾರ್ಥವಾಗಿ 1 ತಿಂಗಳ ಕಾಲ ಕೈಗೊಂಡ 14ನೇ ವರ್ಷದ ಮೌನಲಿಂಗಾನುಷ್ಠಾನ ಮಂಗಲೋತ್ಸವ ಹಾಗೂ ‘ವಿಶ್ವ ಮಾನವ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
‘ಗ್ರಾಮಸ್ಥರು ಪ್ರತಿ ದಿವಸ ಕೊಡುವ ಒಂದು ಜೋಳದ ರೊಟ್ಟಿಯಿಂದ ಅನ್ನದಾಸೋಹ ನಿರಂತರ ನಡೆಯುತ್ತಿದೆ’ ಎಂದರು.
‘ಶಿವಧ್ಯಾನದಿಂದ ಶಿವನ ಸ್ವರೂಪಿಗಳಾಗುತ್ತೇವೆ. ನಯ, ವಿನಯ, ಶಿಸ್ತು, ಸಂಯಮ, ಸೌಜನ್ಯ ಮನುಷ್ಯನ ನಿತ್ಯದ ನಡವಳಿಕೆಯಾಗಬೇಕು. ಇವುಗಳಿಂದ ಮನುಷ್ಯ ಜೀವಮಾನವೀಡಿ ಬದುಕುತ್ತಾನೆ’ ಎಂದು ಹೇಳಿದರು.
ನಿವೃತ್ತ ಪ್ರಾದೇಶಿಕ ಆಯುಕ್ತ ಎಂ. ಜಿ ಹಿರೇಮಠ ಮಾತನಾಡಿ, ‘ಮಠಮಾನ್ಯಗಳಲ್ಲಿ ವಿವೇಕ ಸಿಗುವಂತ ದೇಶ ಭಾರತ. ವಿಶ್ವದ ಯಾವುದೇ ಮೂಲೆಯಲ್ಲಿ ಹಿಂಸೆ ನಡೆದರೆ ಕೂಡಲೇ ಭಾರತ ಖಂಡಿಸುತ್ತದೆ, ಸಹಾಯ ಮಾಡುತ್ತದೆ. ಇದುವೇ ನಮ್ಮ ಸಂಸ್ಕೃತಿ. ಇದನ್ನು, ಉಳಿಸಿ ಬೆಳೆಸುವ ಕಾರ್ಯ ನಿತ್ಯ ನಡೆಯಲಿ’ ಎಂದು ತಿಳಿಸಿದರು.
ಕೊಣ್ಣೂರಿನ ಡಾ. ಶಿವಕುಮಾರ ಶಿವಾಚಾರ್ಯರು ಮಾತನಾಡಿದರು.
ಸಂಸದ ಪಿ.ಸಿ.ಗದ್ದಿಗೌಡ್ರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.
ಕಾರಂಜಿಮಠದ ಡಾ. ಶಿವಯೋಗಿ ದೇವರು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಗುರುಸಿದ್ಧವೀರ ಶಿವಾಚಾರ್ಯರು, ನರಗುಂದ ಶಿವಕುಮಾರ ಸ್ವಾಮೀಜಿ, ಘಟಪ್ರಭಾದ ವಿರುಪಾಕ್ಷ ಶ್ರೀ, ಗುರು ಮಡಿವಾಳೇಶ್ವರ ಸ್ವಾಮೀಜಿ, ಶಿರೋಳ ಯಚ್ಚರ ಸ್ವಾಮೀಜಿ, ಮಾಬುಸುಬಾನಿ ದರ್ಗಾದ ಬಾಬು ಅಜ್ಜನವರು, ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.