ನರೇಗಲ್: ಪಟ್ಟಣದ ನಿವಾಸಿ ಹಾಗೂ ಗದಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ನ ಉಪನ್ಯಾಸಕ ಕಾಶಿನಾಥ ಪಿ. ಸಾಲಿಮಠ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಪರೀಕ್ಷಾ ಪೇ ಚರ್ಚಾ ಮಾಲಿಕೆಯಲ್ಲಿ ಆಹ್ವಾನಿಸಿದ ಪ್ರಬಂಧ ಮೆಚ್ಚಿ ಅಭಿನಂದನಾ ಪತ್ರ ಕಳುಹಿಸಿದ್ದಾರೆ.
ಭಾರತದ ಪರಂಪರೆ, ಇತಿಹಾಸ ಕಲೆ, ಸಂಸ್ಕೃತಿ, ವೈವಿಧ್ಯತೆಯನ್ನು ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸಲು ಬಳಸಬೇಕಾದ ನಾವಿಣ್ಯಯುತ ಬೋಧನಾ ಕೌಶಲಗಳ ಕುರಿತು ಇಂಗ್ಲಿಷ್ನಲ್ಲಿ ಪ್ರಬಂಧ ಮಂಡಿಸಿದ್ದರು. 2047ರ ಮುಂದಿನ 25 ವರ್ಷಗಳ ಸದೃಢ ಭಾರತ ಕಟ್ಟು ದೃಢ ಸಂಕಲ್ಪಕ್ಕೆ ಕಾಲೇಜು ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಈಗಿನಿಂದಲೇ ಪರಂಪರೆ ಹಾಗೂ ಯಶಸ್ವಿ ವಿಧಾನಗಳನ್ನು ಬಳಸುವ ಕುರಿತು ಪ್ರಬಂಧದಲ್ಲಿ ವಿಶ್ಲೇಷಿಸಲಾಗಿತ್ತು ಎಂದು ಸಾಲಿಮಠ ‘ಪ್ರಜಾವಾಣಿ’ಗೆ ತಿಳಿಸಿದರು.
ಬದಲಾಗುತ್ತಿರುವ ಕಾಲದೊಂದಿಗೆ ಕ್ರೀಡೆ, ತಂತ್ರಜ್ಞಾನ, ನಾವಿನ್ಯತೆ, ಸ್ಮಾರ್ಟ್ ಆಪ್ ಗಳು ಸೇರಿದಂತೆ ಅನೇಕ ಹೊಸ ಅವಕಾಶಗಳು ಯುವ ಜನರಿಗೆ ಲಭ್ಯವಿವೆ. ಅವುಗಳು ಅನಂತ ಸಾಧ್ಯತೆಗಳನ್ನು ಹೊಂದಿವೆ. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಸಾಮರ್ಥ್ಯಗಳನ್ನು ಉತ್ತಮವಾಗಿ ಬಳಸಿಕೊಂಡು ತನಗಾಗಿ, ದೇಶಕ್ಕಾಗಿ ಕನಸು ಕಾಣಲು ಅದನ್ನು ನನಸಾಗಿಸಲು ಶಿಕ್ಷಕರ ಮಾರ್ಗದರ್ಶನ ಅಮೂಲ್ಯವಾಗಿದೆ. ರಾಷ್ಟ್ರ ಮತ್ತು ವಿದ್ಯರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಬಂಧಕರ ಅಭಿಪ್ರಾಯಗಳು ಅಮೂಲ್ಯವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರಶಂಸನಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.