ಹೊಳೆನರಸೀಪುರ: ತಾಲ್ಲೂಕಿನ ಸೂರನಹಳ್ಳಿ ಸಮೀಪದ ಕೊಲ್ಲಿಹಳ್ಳದ ಬಳಿ ನೂರಾರು ಶ್ವಾನ ಹಾಗೂ ಹಂದಿ ತಲೆ ಬುರುಡೆ ಭಾನುವಾರ ಪತ್ತೆಯಾಗಿದ್ದು, ಆತಂಕ ಮತ್ತು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಕೊಲ್ಲಿಹಳ್ಳದ ನಿರ್ಜನ ಪ್ರದೇಶದಲ್ಲಿ ರುಂಡದ ಭಾಗ ಮಾತ್ರ ಪತ್ತೆಯಾಗಿದ್ದು, ಮಾಂಸಕ್ಕಾಗಿ ಕೊಂದು ಅವುಗಳ ಬುರುಡೆಗಳನ್ನು ತಂದು ಬಿಸಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
‘ಸಂಬಂಧ ಪಟ್ಟ ಇಲಾಖೆಯವರು ತನಿಖೆ ನಡೆಸಿ ಶ್ವಾನ, ಹಂದಿ ಸಂಹಾರ ರಹಸ್ಯ ಬಯಲು ಮಾಡಬೇಕು’ ಎಂದು ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ.
‘ಸ್ಥಳಕ್ಕೆ ತಜ್ಞರು ಭೇಟಿ ನೀಡಿ ತಪಾಸಣೆ ನಡೆಸಿದ್ದು, ಹಂದಿ ಬುರುಡೆ ಪತ್ತೆಯಾಗಿದೆ. ಈ ಸಂಬಂಧ ತನಿಖೆ ನಡೆಸಲಾಗುವುದು’ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೋಹನ್ ಕೃಷ್ಣ ತಿಳಿಸಿದರು.