ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೇಬೀಡು | ಮಳೆ: 2 ಮನೆ ಜಖಂ, ರಸ್ತೆಗೆ ಬಿದ್ದ ವಿದ್ಯುತ್ ಕಂಬ

Published 25 ಮೇ 2024, 15:31 IST
Last Updated 25 ಮೇ 2024, 15:31 IST
ಅಕ್ಷರ ಗಾತ್ರ

ಹಳೇಬೀಡು: ಬಿರುಗಾಳಿಯೊಂದಿಗೆ ಶುಕ್ರವಾರ ರಾತ್ರಿ ಸುರಿದ ಮಳೆಗೆ ಸಿದ್ದಾಪುರ ಗ್ರಾಮದಲ್ಲಿ ಮರ ಬಿದ್ದ ಪರಿಣಾಮ ಎರಡು ಮನೆಗಳಿಗೆ ಹಾನಿಯಾಗಿದೆ. ಫಸಲು ಬಿಡುತ್ತಿದ್ದ ತೆಂಗು, ಅಡಿಕೆ ಮರಗಳು ನೆಲಕ್ಕುರುಳಿವೆ.

ಸಿದ್ದಾಪುರ ಸೋಮಶೇಖರ ಮನೆ ಮೇಲೆ ತೇಗದ ಮರ ಬುಡ ಸಮೇತ ಬಿದ್ದಿದ್ದರಿಂದ ಮನೆಯ ಚಾವಣಿ ಹಾಗೂ ಗೋಡೆಗಳಿಗೆ ಹಾನಿಯಾಗಿದೆ. ಜಾನುವಾರು ಕೊಟ್ಟಿಗೆ, ಬಚ್ಚಲು ಮನೆ, ಅಡುಗೆ ಮನೆಗೆ ಹಾನಿಯಾಗಿದೆ. ಆರ್‌ಸಿಸಿ ಮನೆಯ ಹಿಂಭಾಗ ನಿರ್ಮಿಸಿರುವ ಕಡಿಯಾರ ಸಂಪೂರ್ಣ ಜಖಂ ಆಗಿದೆ. ಮರ ದನದ ಕೊಟ್ಟಿಗೆ ಮೇಲೆ ಬಿದ್ದರೂ ಜಾನುವಾರುಗಳಿಗೆ ತೊಂದರೆಯಾಗಿಲ್ಲ.

ಮರ ಬಿದ್ದಾಗ ಮನೆ ನಡುಗಿತು. ಭೂಕಂಪದ ಅನುಭವ ಆಯಿತು. ಕೈಕಾಲಿನಲ್ಲಿ ಶಕ್ತಿ ಇಲ್ಲದಂತಾಯಿತು. ರಾತ್ರಿಯಿಡೀ ನಿದ್ದೆ ಮಾಡದೆ ಕಳೆದೆವು ಎಂದು ಸೋಮಶೇಖರ್ ದಂಪತಿ ತಿಳಿಸಿದರು.

ಗ್ರಾಮದ ಪರಿಶಿಷ್ಟ ಜನಾಂಗದ ಕಾಲೊನಿಯಲ್ಲಿ ಲೀಲಾವತಿ ಶಿವಕುಮಾರ್ ಅವರ ಮನೆಯ ಮೇಲೆ ಸಿಲ್ವರ್ ಮರ ಬುಡ ಸಮೇತ ಬಿದ್ದಿದೆ. ಹೆಂಚಿನ ಮನೆ ಸಂಪೂರ್ಣ ಜಖಂ ಗೊಂಡಿದೆ. ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಮನೆಯ ಚಾವಣೆಗೆ ಹಾನಿಯಾಗಿದೆ.

ಸಾವುಕಾರ್ ರಾಜಣ್ಣ ಅವರ ತೋಟದಲ್ಲಿ ಫಸಲು ಬಿಡುತ್ತಿದ್ದ 15 ಅಡಿಕೆ ಮರ ಧರೆಗುರುಳಿದರೆ, ಪಟೇಲ್ ಸಿದ್ದಬಸವೇಗೌಡರ ತೋಟದಲ್ಲಿ 11 ಮರ ನೆಲಕಚ್ಚಿವೆ. ಗ್ರಾಮದಲ್ಲಿ 50ಕ್ಕೂ ಹೆಚ್ಚು ಅಡಿಕೆ ಮರ ಬಿದ್ದಿವೆ. ಕಟ್ಟೆಸೋಮನಹಳ್ಳಿ ರಸ್ತೆಯ ಸುರೇಶ್ ಜಮೀನಿನಲ್ಲಿ ತೇಗದ ಮರ ಬುಡ ಸಮೇತ ಬಿದ್ದಿದೆ. ಜಮೀನಿನಲ್ಲಿ ಬೆಳೆಯುತ್ತಿದ್ದ 12 ಗುಂಟೆ ಶುಂಠಿ ಬೆಳೆಗೆ ಹಾನಿಯಾಗಿದೆ.

ಹಳೇಬೀಡಿನಿಂದ ಹಾಸನಕ್ಕೆ ಸಂಪರ್ಕ ಕಲ್ಪಿಸುವ ಹಗರೆ ರಸ್ತೆಯಲ್ಲಿ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದು, ಕಂಬಗಳು ಮುರಿದು ಬಿದ್ದಿದ್ದು, ಭಾರಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಶುಕ್ರವಾರ ರಾತ್ರಿ ಸೆಸ್ಕ್ ಸಿಬ್ಬಂದಿ ತಕ್ಷಣ ವಿದ್ಯುತ್ ಸ್ಥಗಿತಗೊಳಿಸಿದ್ದರಿಂದ ಅನಾಹುತ ಸಂಭವಿಸಲಿಲ್ಲ. ಹತ್ತು ಕಂಬ ಮುರಿದು ಬಿದ್ದಿದ್ದು, ಸಂಪರ್ಕ ಸ್ಥಗಿತವಾಗಿದೆ ಎಂದು ಸಿದ್ದಾಪುರ ಗ್ರಾಮಸ್ಥರು ತಿಳಿಸಿದರು.

ಹೊಯ್ಸಳೇಶ್ವರ ದೇವಾಲಯದ ಉದ್ಯಾನದ ಕಾಡು ಜಾತಿಯ ದೊಡ್ಡ ಮರ ಕಾಂಪೌಂಡ್ ಮೇಲೆ ಬಿದ್ದು ಹಾನಿಯಾಗಿದೆ. ಕಾಂಪೌಂಡ್ ಪಕ್ಕದ ಮೂರು ಗೂಡಂಗಡಿಗಳು ಜಖಂ ಆಗಿವೆ. ಗೂಡಂಗಡಿಯಲ್ಲಿ ಚಹಾ ಮಾಡುತ್ತಿದ್ದ ಇಂದ್ರಮ್ಮ ಮರ ಬೀಳುವ ಶಬ್ಧ ಕೇಳಿ ಹೊರ ಬಂದಿದ್ದಾರೆ. ತಲೆಗೆ ಸಣ್ಣ ಪೆಟ್ಟು ಬಿದ್ದಿದೆ. ಗ್ರಾಹಕರು ದೂರ ಸರಿದಿದ್ದಾರೆ. ಕೂದಲೆಳೆಯ ಅಂತರದಲ್ಲಿ ಅಪಾಯ ತಪ್ಪಿದೆ.

ಬೆಣ್ಣೆಗುಡ್ಡದ ಆಂಜನೇಯ ಸ್ವಾಮಿ ಸಮುದಾಯ ಭವನದ ಚಾವಣಿಯ ಶೀಟ್‌ಗಳು ಗಾಳಿಯಲ್ಲಿ ಹಾರಿಹೋಗಿವೆ. ಮೇಲಂತಸ್ತಿನ ಗೋಡೆಗೂ ಹಾನಿಯಾಗಿದೆ.

ತಂಪೆರೆದ ಮಳೆಯಿಂದ ಸಾಕಷ್ಟು ಮಂದಿಯ ಮುಖದಲ್ಲಿ ಮಂದಹಾಸ ಕಂಡು ಬಂದಿದೆ. ಜೊತೆಗೆ ಗಾಳಿಯ ಹೊಡೆತಕ್ಕೆ ಮನೆ ಹಾಗೂ ತೋಟಗಳಲ್ಲಿ ಹಾನಿ ಆದವರಿಗೆ ಬೇಸರ ವ್ಯಕ್ತಪಡಿಸಿದರು.

ಶುಕ್ರವಾರ ರಾತ್ರಿ ಸುರಿದ ಗಾಳಿ– ಮಳೆಗೆ ಹಳೇಬೀಡು ಸಮೀಪದ ಸಿದ್ದಾಪುರ ಗ್ರಾಮದ ಸೋಮಶೇಖರ್ ಅವರ ಮನೆ ಮೇಲೆ ತೇಗದ ಮರ ಬಿದ್ದಿರುವುದು
ಶುಕ್ರವಾರ ರಾತ್ರಿ ಸುರಿದ ಗಾಳಿ– ಮಳೆಗೆ ಹಳೇಬೀಡು ಸಮೀಪದ ಸಿದ್ದಾಪುರ ಗ್ರಾಮದ ಸೋಮಶೇಖರ್ ಅವರ ಮನೆ ಮೇಲೆ ತೇಗದ ಮರ ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT