ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಹಂಗಾಮು ಬಿತ್ತನೆಗೆ ರೈತರ ಸಿದ್ಧತೆ: ಮಳೆಯ ನರ್ತನಕ್ಕೆ ಗರಿಗೆದರಿದ ಕೃಷಿ

ಕೃಷಿ ಇಲಾಖೆಯಿಂದಲೂ ತಯಾರಿ
Last Updated 19 ಮೇ 2021, 5:49 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾದ ಪರಿಣಾಮ, ಲಾಕ್‌ಡೌನ್‌ ನಡುವೆಯೂ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮುಂಗಾರು ಹಂಗಾಮಿಗಾಗಿ ಜಿಲ್ಲೆಯಾದ್ಯಂತ ‌ರೈತರು ಭೂಮಿಯನ್ನು ಹದಗೊಳಿಸುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ಕೃಷಿ ಇಲಾಖೆಯು ಈ ಬಾರಿ ಮುಂಗಾರು ಹಂಗಾಮಿಗೆ 3.30 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿಯನ್ನು ಹೊಂದಿದೆ. ಕೃಷಿ ಚಟುವಟಿಕೆಗೆ ಅಗತ್ಯವಾದ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ದಾಸ್ತಾನು ಮಾಡುವಲ್ಲಿ ಇಲಾಖೆ ನಿರತವಾಗಿದೆ.ಕಳೆದ ಬಾರಿ 3,30,713 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಮೂಲಕ ಶೇ 99ರಷ್ಟು ಸಾಧನೆ ಮಾಡಲಾಗಿತ್ತು.

ಮಳೆ ಮತ್ತು ನೀರಾವರಿ ಆಶ್ರಯದಲ್ಲಿ ಈ ಬಾರಿ 33,715 ಹೆಕ್ಟೇರ್‌ನಲ್ಲಿ ಭತ್ತ, 2,04,689 ಹೆಕ್ಟೇರ್‌ನಲ್ಲಿ ಗೋವಿನ ಜೋಳ, 19,519 ಹೆಕ್ಟೇರ್‌ನಲ್ಲಿ ಶೇಂಗಾ, 7,517 ಹೆಕ್ಟೇರ್‌ನಲ್ಲಿ ಸೋಯಾಬಿನ್‌, 53,735 ಹೆಕ್ಟೇರ್‌ನಲ್ಲಿ ಹತ್ತಿ ಬೆಳೆಯುವ ಗುರಿಯನ್ನು ನಿಗದಿಪಡಿಸಲಾಗಿದೆ.

ವರುಣನ ಕೃಪೆ:

ಜಿಲ್ಲೆಯಲ್ಲಿ 2,56,314 ಹೆಕ್ಟೇರ್‌ ಭೂಮಿ ಮಳೆಯನ್ನೇ ಆಶ್ರಯಿಸಿದೆ. ಜಿಲ್ಲೆಯಲ್ಲಿ ಜನವರಿಯಿಂದ ಮೇ ತಿಂಗಳವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿರುವುದನ್ನು ಹವಾಮಾನ ಇಲಾಖೆಯ ಅಂಕಿಅಂಶಗಳು ಸಾಬೀತುಪಡಿಸಿವೆ. ಜನವರಿಯಲ್ಲಿ 52 ಮಿ.ಮೀ, ಫೆಬ್ರುವರಿಯಲ್ಲಿ 20 ಮಿ.ಮೀ, ಮಾರ್ಚ್‌ನಲ್ಲಿ 5 ಮಿ.ಮೀ, ಏಪ್ರಿಲ್‌ನಲ್ಲಿ 62 ಮಿ.ಮೀ ಹಾಗೂ ಮೇ ತಿಂಗಳಲ್ಲಿ ಇದುವರೆಗೆ 66 ಮಿ.ಮೀಟರ್‌ ಮಳೆ ಸುರಿದಿದೆ.

ಬಿತ್ತನೆ ಬೀಜ ವಿತರಣೆ ಗುರಿ:

ಗೋವಿನಜೋಳ 12 ಸಾವಿರ ಕ್ವಿಂಟಲ್‌, ಭತ್ತ 5 ಸಾವಿರ ಕ್ವಿಂಟಲ್, ಜೋಳ 100 ಕ್ವಿಂಟಲ್, ತೊಗರಿ 900 ಕ್ವಿಂಟಲ್, ಹೆಸರು 400 ಕ್ವಿಂಟಲ್, ಶೇಂಗಾ 3200 ಕ್ವಿಂಟಲ್, ಸೂರ್ಯಕಾಂತಿ 50 ಕ್ವಿಂಟಲ್, ಸೋಯಾಅವರೆ 12 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜದ ವಿತರಣೆಯ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ.

ಬಿತ್ತನೆಗೆ ಸಜ್ಜು:

ಹಿರೇಕೆರೂರು, ಹಾನಗಲ್‌, ಬ್ಯಾಡಗಿ ತಾಲ್ಲೂಕುಗಳಲ್ಲಿ ಹತ್ತಿ ಮತ್ತು ಮುಸುಕಿನ ಜೋಳದ ಬಿತ್ತನೆ ಮೇ ಅಂತ್ಯದಿಂದ ಆರಂಭವಾಗುವ ನಿರೀಕ್ಷೆಯಿದೆ. ಶಿಗ್ಗಾವಿ, ಸವಣೂರು, ಹಾವೇರಿಯಲ್ಲಿ ಸೋಯಾಬಿನ್‌ ಬಿತ್ತನೆ ಜೂನ್‌ ಮೊದಲ ವಾರದಿಂದ ಆರಂಭವಾಗಲಿದೆ. ಹಾನಗಲ್‌ ತಾಲ್ಲೂಕಿನಲ್ಲಿ ಭತ್ತದ ಬಿತ್ತನೆ ಕಾರ್ಯ ಜುಲೈ 15ರಿಂದ ಚುರುಕುಗೊಳ್ಳುವ ನಿರೀಕ್ಷೆಯಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.

‘ಲಾಕ್‌ಡೌನ್‌ ಇರುವ ಕಾರಣ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ಪೊಲೀಸರು ಅನಗತ್ಯವಾಗಿ ತೊಂದರೆ ಕೊಡುತ್ತಿದ್ದಾರೆ. ರಸಗೊಬ್ಬರ ದರ ಏರಿಕೆಯಾಗಿರುವುದು ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತಿಲ್ಲ. ಗೋವಿನ ಜೋಳದ ದಾಸ್ತಾನು ಮನೆಗಳಲ್ಲಿದ್ದು, ಉತ್ತಮ ದರಕ್ಕೆ ಕಾಯುತ್ತಿದ್ದಾರೆ.ಈ ಬಾರಿ ಅಡ್ಡ ಮಳೆ ಜಾಸ್ತಿಯಾಗಿದ್ದು, ಮುಂಗಾರು ಮಳೆ ಕೈ ಕೊಡುವ ಆತಂಕ ಕಾಡುತ್ತಿದೆ’ ಎಂದು ಜಿಲ್ಲಾ ರೈತ ಸಂಘದ ವಕ್ತಾರ ಎಂ.ಎನ್‌.ನಾಯಕ ತಿಳಿಸಿದರು.

ಗ್ರಾಮ ಮಟ್ಟದಲ್ಲಿಯೇ ಎಲ್ಲ ರೈತರಿಗೂ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸಿಗುವಂತೆ ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕು
-ದೀಪಕ್‌ ಗಂಟಿಸಿದ್ದಪ್ಪನವರ, ಉಪಾಧ್ಯಕ್ಷ, ಜಿಲ್ಲಾ ರೈತ ಸಂಘ

ಮುಂಗಾರು ಹಂಗಾಮಿಗೆ ಅಗತ್ಯವಾದ ರಸಗೊಬ್ಬರ, ಬಿತ್ತನೆಬೀಜ ದಾಸ್ತಾನು ಮಾಡಲಾಗಿದೆ. ರೈತರಿಗೆ ಕೊರತೆಯಾಗದಂತೆ ವಿತರಿಸಲಾಗುವುದು
-ಬಿ.ಮಂಜುನಾಥ, ಕೃಷಿ ಜಂಟಿ ನಿರ್ದೇಶಕ

2021–22ನೇ ಸಾಲಿನ ರಸಗೊಬ್ಬರ ಹಂಚಿಕೆ, ಪೂರೈಕೆ, ವಿತರಣೆಯ ವಿವರ (ಮೆಟ್ರಿಕ್‌ ಟನ್‌ಗಳಲ್ಲಿ)

ರಸಗೊಬ್ಬರ; ಹಂಚಿಕೆ; ಹಳೆ ದಾಸ್ತಾನು+ಪೂರೈಕೆ; ವಿತರಣೆ; ಉಳಿಕೆ

ಯೂರಿಯಾ; 57,780;19,007;568;18,439

ಡಿಎಪಿ; 26,635;8,453;795;7,658

ಎಂಒಪಿ; 5,387;2,981;198;2,783

ಕಾಂಪ್ಲೆಕ್ಸ್‌; 34,968;17,537;89;17,448

ಎಸ್‌ಎಸ್‌ಪಿ; 290;169;123;46

ಒಟ್ಟು; 1,25,060;48,147;1,773;46,373

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT