ಹಾವೇರಿ: ‘ಶ್ರೀಕಾಂತ ಪೂಜಾರಿ ವಿರುದ್ಧ 16 ಪ್ರಕರಣಗಳಿವೆ ಎಂದು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಪೊಲೀಸರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ರಾಜ್ಯದ ಜನರ ಕ್ಷಮೆ ಕೇಳಬೇಕು’ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
ಬ್ಯಾಡಗಿ ತಾಲ್ಲೂಕು ಮೋಟೆಬೆನ್ನೂರು ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿ, ‘ಶ್ರೀಕಾಂತ ವಿರುದ್ಧ 16 ಪ್ರಕರಣಗಳು ಇರಲಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ ಮತ್ತು ಜಾಮೀನು ಕೂಡಾ ಕೊಟ್ಟಿದೆ. 1992ರ ರಾಮಮಂದಿರ ಪ್ರಕರಣ ಮಾತ್ರ ಆತನ ಮೇಲಿದೆ. ‘ಶ್ರೀಕಾಂತ್ ವಿರುದ್ಧ ಯಾವುದೇ ವ್ಯಕ್ತಿ ದೂರು ನೀಡಿಲ್ಲ, ಎಫ್.ಐ.ಆರ್ ಪ್ರತಿಯೂ ಇಲ್ಲ. ಹೀಗಾಗಿ ಆತನನ್ನು ಬಂಧಿಸಿದ್ದೇ ಮಹಾಪರಾಧ’ ಎಂದು ಕಿಡಿಕಾರಿದರು.
‘ಸಿಎಂ ಮತ್ತು ಗೃಹಸಚಿವರು ಭಂಡತನದಿಂದ ಕೊಟ್ಟ ಕೇಸಿದು. ಈ ತೀರ್ಪಿನಿಂದ ನ್ಯಾಯಾಲಯದ ಮೇಲಿನ ಗೌರವ ಹೆಚ್ಚಾಗಿದೆ. ರಾಜ್ಯದ ಇತಿಹಾಸದಲ್ಲೇ ಸಿಎಂ ಮತ್ತು ಗೃಹ ಸಚಿವರು ಕೋರ್ಟ್ಗೆ ಸುಳ್ಳು ಮಾಹಿತಿ ಕೊಟ್ಟಿರಲಿಲ್ಲ’ ಎಂದು ಕುಟುಕಿದರು.
ರಾಮ ಬೇಕು, ವಾಲ್ಮೀಕಿ ಬೇಡವಾ? ಎಂಬ ಕಾಂಗ್ರೆಸ್ ಟೀಕೆಗೆ, ‘ಕಾಂಗ್ರೆಸ್ನವರಿಗೆ ವಾಲ್ಮೀಕಿ ಈಗ ನೆನಪಾಗಿದ್ದಾರೆ. ರಾಮಮಂದಿರ ಎಂದರೆ ಕಾಂಗ್ರೆಸ್ನವರಿಗೆ ಮುಳ್ಳು ಚುಚ್ಚಿದಂತಾಗುತ್ತದೆ. ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರ ವಾಲ್ಮೀಕಿ ಹೆಸರನ್ನು ಇಟ್ಟು ಗೌರವ ನೀಡಿದೆ’ ಎಂದು ಹೇಳಿದರು.