ರಾಣೆಬೆನ್ನೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅನುದಾನರಹಿತ ಶಾಲಾ ಶಿಕ್ಷಕರಿಗೆ ₹ 5 ಸಾವಿರ ಪ್ಯಾಕೇಜ್ ಘೋಷಿಸಿರುವುದು ಸ್ವಾಗತಾರ್ಹ ಎಂದು ಕೆಪಿಸಿಸಿ ಶಿಕ್ಷಕರು ಹಾಗೂ ಪದವೀಧರರ ಘಟಕದ ರಾಜ್ಯ ಘಟಕದ ಅಧ್ಯಕ್ಷ ಡಾ. ಆರ್. ಎಂ.ಕುಬೇರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇವಲ ಶಾಲಾ-ಶಿಕ್ಷಕರಿಗೆಂದು ವರದಿಯಾಗಿದ್ದು, ಇದರಿಂದ ಪದವಿ-ಪೂರ್ವ ಕಾಲೇಜ್ ಹಾಗೂ ಪದವಿ ಕಾಲೇಜ್ನ ಉಪನ್ಯಾಸಕರನ್ನು ಈ ಸೌಲಭ್ಯದಿಂದ ಹೊರಗಿಡಲಾಗಿದೆ. ಇಂತಹ ತಾರತಮ್ಯದ ನಡೆ ಖಂಡನೀಯ ಎಂದರು.
ಶಿಕ್ಷಕರಿಗೆ ಸಹಾಯ ಮಾಡುವ ಒಳ್ಳೆಯ ಉದ್ದೇಶವಿದ್ದಲ್ಲಿ ಅನುದಾನ ರಹಿತ ಶಾಲಾ-ಕಾಲೇಜ್ ಮತ್ತು ಪದವಿ ಹಾಗೂ ವಿಶ್ವವಿದ್ಯಾ ಲಯದ ಎಲ್ಲಾ ಶಿಕ್ಷಕರಿಗೂ ಈ ಆರ್ಥಿಕ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಅನುದಾನಿತ ಶಾಲಾ-ಕಾಲೇಜುಗಳಲ್ಲಿ ನಿವೃತ್ತಿಯಿಂದ ಖಾಲಿ ಇರುವ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ತಾತ್ಕಾಲಿಕ ಶಿಕ್ಷಕರಿಗೂ ಈ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.