ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಜಾನಪದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಸಂಕಷ್ಟ

Published 3 ಆಗಸ್ಟ್ 2023, 4:23 IST
Last Updated 3 ಆಗಸ್ಟ್ 2023, 4:23 IST
ಅಕ್ಷರ ಗಾತ್ರ

ಸಿದ್ದು ಆರ್‌.ಜಿ.ಹಳ್ಳಿ

ಹಾವೇರಿ: ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅನುದಾನದ ಕೊರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. 2011ರಲ್ಲಿ ಸ್ಥಾಪನೆಗೊಂಡ ಈ ವಿಶ್ವವಿದ್ಯಾಲಯ, ದಶಕ ಕಳೆದರೂ ನಿರೀಕ್ಷಿತ ಪ್ರಗತಿ ಸಾಧಿಸದೆ ತೆವಳುತ್ತಿದೆ.

ಕಾಯಂ ಸಿಬ್ಬಂದಿಯ ಕೊರತೆ ಶೈಕ್ಷಣಿಕ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೆ, ಹಣಕಾಸಿನ ಕೊರತೆ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ತೊಡಕಾಗಿದೆ. 

ವಿಶ್ವವಿದ್ಯಾಲಯದಲ್ಲಿ 8 ನಿಕಾಯಗಳಿದ್ದು, 14 ಅಧ್ಯಯನ ವಿಭಾಗಗಳಿವೆ. ಪ್ರಸ್ತುತ 850 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಗತ್ಯ ಮೂಲಸೌಕರ್ಯವಿಲ್ಲದೆ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ.  

₹77 ಲಕ್ಷ ಕೊರತೆ 

ವಿಶ್ವವಿದ್ಯಾಲಯಕ್ಕೆ ಈ ವರ್ಷ ₹76 ಲಕ್ಷ ಅನುದಾನ ಮಂಜೂರಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನೆ, ವಿದ್ಯಾರ್ಥಿಗಳ ಶುಲ್ಕ, ಪುಸ್ತಕ ಮಾರಾಟದ ಆದಾಯ, ಸಿಬ್ಬಂದಿ ವಸತಿಗೃಹ ಬಾಡಿಗೆ, 12 ಮಾನ್ಯತೆ ಸಂಸ್ಥೆಗಳ ನೋಂದಣಿ ಶುಲ್ಕ ಸೇರಿದಂತೆ ವರ್ಷಕ್ಕೆ ₹1.37 ಕೋಟಿ ಸಂಪನ್ಮೂಲ ಸಂಗ್ರಹವಾಗುತ್ತದೆ (ಅನುದಾನವೂ ಸೇರಿ). 

ಲಭ್ಯ ಸಂಪನ್ಮೂಲದಲ್ಲಿ ವಿ.ವಿ.ಯನ್ನು ಮುನ್ನಡೆಸುತ್ತಿದ್ದೇವೆ. ಸರ್ಕಾರ ಅಗತ್ಯ ಅನುದಾನ ನೀಡಿದರೆ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ನೆರವಾಗುತ್ತದೆ.
ಪ್ರೊ.ಟಿ.ಎಂ. ಭಾಸ್ಕರ್‌, ಕುಲಪತಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ

ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ವೇತನಕ್ಕೆ ವಾರ್ಷಿಕ ₹1.21 ಕೋಟಿ ಖರ್ಚಾಗುತ್ತದೆ. ವಿಶ್ವವಿದ್ಯಾಲಯದ ವಿದ್ಯುತ್‌ ಬಿಲ್ಲು, ವಿದ್ಯಾರ್ಥಿನಿಲಯದ ಊಟೋಪಹಾರ, ವಾಹನಗಳ ಇಂಧನ, ಲೇಖನ ಸಾಮಗ್ರಿ, ಪೀಠೋಪಕರಣ, ಯಂತ್ರೋಪಕರಣ, ಕಚೇರಿ ಖರ್ಚು ಸೇರಿದಂತೆ ವಾರ್ಷಿಕವಾಗಿ ಒಟ್ಟು ₹2.15 ಕೋಟಿ ವೆಚ್ಚವಾಗುತ್ತದೆ. ಅಂದರೆ, ವಿಶ್ವವಿದ್ಯಾಲಯ ವಾರ್ಷಿಕವಾಗಿ ₹77 ಲಕ್ಷ ಹಣಕಾಸಿನ ಕೊರತೆಯನ್ನು ಎದುರಿಸುತ್ತಿದೆ. 

ನನೆಗುದಿಗೆ ಬಿದ್ದ ಯೋಜನೆಗಳು

ವಿಶ್ವವಿದ್ಯಾಲಯ ಆವರಣದಲ್ಲಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ₹1 ಕೋಟಿ, ಕುಲಪತಿಗಳ ಮನೆ ನಿರ್ಮಾಣಕ್ಕೆ ₹3 ಕೋಟಿ, ಆಯುರ್ವೇದ ಆಸ್ಪತ್ರೆ ನಿರ್ಮಾಣಕ್ಕೆ ₹1 ಕೋಟಿ, ಆಯುರ್ವೇದ ಗಿಡಮೂಲಿಕೆಗಳ ಸಸ್ಯಕಾಶಿಗೆ ₹1.5 ಕೋಟಿ, ತಂತಿ ಬೇಲಿ ಹಾಕಿಸಲು ₹1.5 ಕೋಟಿ, ಕಾಂಪೌಂಡ್‌ ನಿರ್ಮಾಣಕ್ಕೆ ₹2.5 ಕೋಟಿ, ಸ್ಟೇಡಿಯಂ ನಿರ್ಮಾಣಕ್ಕೆ ₹1.5 ಕೋಟಿ, ಗ್ರಂಥಾಲಯ ನಿರ್ಮಾಣಕ್ಕೆ ₹5 ಕೋಟಿ ಹೀಗೆ ಹಲವಾರು ಯೋಜನೆ ಮತ್ತು ಮೂಲಸೌಕರ್ಯಕ್ಕೆ ಅನುದಾನವಿಲ್ಲದೆ ವಿಶ್ವವಿದ್ಯಾಲಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. 

ವಿ.ವಿ ಆವರಣದಲ್ಲಿ ₹3.07 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಸ್ತು ಸಂಗ್ರಹಾಲಯ ಕಟ್ಟಡ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕೇಂದ್ರ ಸರ್ಕಾರದಿಂದ ₹1.22 ಕೋಟಿ ಅನುದಾನ  ಇನ್ನೂ ಬಿಡುಗಡೆಯಾಗಿಲ್ಲ. ಲಂಬಾಣಿ ದಾಖಲೀಕರಣ ಯೋಜನೆಗೆ ಲಂಬಾಣಿ ನಿಗಮದಿಂದ ₹21.87 ಲಕ್ಷ ಬಿಡುಗಡೆಯಾಗಬೇಕಿದೆ. ಗ್ರಾಮ ಚರಿತ್ರೆ ಕೋಶಕ್ಕೆ ₹2.55 ಕೋಟಿ ಮೊತ್ತ ಬರಬೇಕಿದೆ. ಹೀಗಾಗಿ ಹಲವು ಯೋಜನೆಗಳು ಕುಂಟುತ್ತಾ ಸಾಗಿವೆ. 

ಸಿಬ್ಬಂದಿ ಕೊರತೆ

ವಿಶ್ವವಿದ್ಯಾಲಯಕ್ಕೆ 52 ಹುದ್ದೆಗಳು ಮಂಜೂರಾಗಿದ್ದು, 25 ಹುದ್ದೆಗಳು ಭರ್ತಿಯಾಗಿವೆ. ಇನ್ನೂ 27 ಹುದ್ದೆಗಳು ಖಾಲಿ ಉಳಿದಿವೆ. ಕುಲಪತಿ ಮತ್ತು ಕುಲಸಚಿವರ ಹುದ್ದೆಗಳಿಗೂ ಕಾಯಂ ಸಿಬ್ಬಂದಿಯಿಲ್ಲ. 5 ಪ್ರಾದೇಶಿಕ ಅಧ್ಯಯನ ಕೇಂದ್ರಗಳು ಮತ್ತು ವಿಶ್ವವಿದ್ಯಾಲಯ ಉತ್ತಮವಾಗಿ ಕಾರ್ಯನಿರ್ವಹಿಸಲು ಹಾಗೂ ಸರ್ವತೋಮುಖ ಪ್ರಗತಿ ಸಾಧಿಸಲು 250 ಹುದ್ದೆಗಳು ಸೃಜನೆಯಾಗಬೇಕು ಹಾಗೂ ₹100 ಕೋಟಿ ವಿಶೇಷ ಪ್ಯಾಕೇಜ್‌ ಅನ್ನು ಸರ್ಕಾರ ಘೋಷಿಸಬೇಕು ಎನ್ನುತ್ತದೆ ವಿಶ್ವವಿದ್ಯಾಲಯದ ಆಡಳಿತ ವರ್ಗ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT