ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರೇಕೆರೂರು: ಹಂಸಬಾವಿ ಜಾನುವಾರು ಮಾರುಕಟ್ಟೆಗೆ ಜೀವಕಳೆ

ಕೃಷಿಯಲ್ಲಿ ಯಂತ್ರದ ಬಳಕೆ ಹೆಚ್ಚಿದರೂ ಕುಗ್ಗದ ಎತ್ತುಗಳ ಅಗತ್ಯ
Published 25 ಮೇ 2024, 5:33 IST
Last Updated 25 ಮೇ 2024, 5:33 IST
ಅಕ್ಷರ ಗಾತ್ರ

ಹಿರೇಕೆರೂರು: ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆ ಹಂಸಭಾವಿ ಗ್ರಾಮದ ಹೊಳಬಸವೇಶ್ವರ ಜಾನುವಾರು ಮಾರುಕಟ್ಟೆಗೆ ಮತ್ತೆ ಜೀವಕಳೆ ಬಂದಂತಾಗಿದೆ. ಅದರಲ್ಲೂ ತಾಲ್ಲೂಕಿನಾದ್ಯಂತ ಸುರಿದ ಮಳೆ ಬಿತ್ತನೆ ಕೃಷಿ ಚಟುವಟಿಗೆ ಭರ್ಜರಿ ಆರಂಭ ನೀಡಿದ ಬೆನ್ನಲ್ಲೇ ರೈತನ ಮಿತ್ರ ಜಾನುವಾರುಗಳಿಗೆ ಸಹ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಹಂಸಭಾವಿಯ ಹೊಳಬಸವೇಶ್ವರ ಜಾನುವಾರು ಸಂತೆಯಲ್ಲಿ ಜೋಡಿ ಎತ್ತುಗಳಿಗೆ ₹60 ರಿಂದ ₹ 90 ಸಾವಿರ ದರವಿದೆ. ಉತ್ತಮ ಜಾನುವಾರುಗಳು ₹1.20 ರಿಂದ ₹1.40 ಲಕ್ಷದವರೆಗೆ ಮಾರಾಟವಾಗುತ್ತಿವೆ. ಕೃಷಿಯಲ್ಲಿ ಯಂತ್ರದ ಬಳಕೆ ವ್ಯಾಪಕವಾಗಿ ಕಂಡುಬಂದರೂ ಎತ್ತುಗಳ ಅಗತ್ಯತೆ ಕಡಿಮೆಯೇನಿಸಿಲ್ಲ.

ಎತ್ತುಗಳು ದುಬಾರಿಯಾದರೂ ರೈತರು ಖರೀದಿ ಮಾಡುತ್ತಿದ್ದಾರೆ. ಇನ್ನೂ ಕೆಲವು ರೈತರು ಮುಂಗಾರು ಹಂಗಾಮಿನಲ್ಲಿ ಎತ್ತು ಖರೀದಿ ಮಾಡಿ ಬಿತ್ತನೆ ಕಾರ್ಯ ಮುಗಿದ ಮೇಲೆ ಮಾರಾಟ ಮಾಡುತ್ತಾರೆ. ಬಿತ್ತನೆ ಆದಮೇಲೆ ಎತ್ತುಗಳ ಕೆಲಸ ಕಡಿಮೆ ಇರುತ್ತದೆ. ಹೀಗಾಗಿ ರೈತರು ಎತ್ತುಗಳನ್ನು ಮಾರಾಟ ಮಾಡಿ ಮತ್ತೆ ಮುಂದಿನ ವರ್ಷದ ಮುಂಗಾರು ಹಂಗಾಮಿಗೆ ಖರೀದಿ ಮಾಡುತ್ತಾರೆ. ಹೀಗಾಗಿ ಪ್ರತಿವರ್ಷ ಮುಂಗಾರು ಹಂಗಾಮಿನಲ್ಲಿ ಎತ್ತುಗಳ ಬೆಲೆ ಏರಿಕೆಯಾಗಿರುತ್ತದೆ.

ಕಳೆದ ವರ್ಷದ ಮುಂಗಾರು ಹಾಗೂ ಹಿಂಗಾರು ಮಳೆ ಬಾರದ ಪರಿಣಾಮ ಜಾನುವಾರುಗಳಿಗೆ ಮೇವು, ನೀರಿನ ಸಮಸ್ಯೆಯಿಂದ ಅವುಗಳ ನಿರ್ವಹಣೆ ಕಷ್ಟಕರವಾಗಿದ್ದರಿಂದ ರೈತರ ಜೀವನಾಡಿ ಎತ್ತುಗಳಿಗೆ ಹೇಳಿಕೊಳ್ಳುವ ಬೇಡಿಕೆ ಮತ್ತು ಬೆಲೆ ಇಲ್ಲದಂತಾಗಿತ್ತು. ಪ್ರಸಕ್ತ ವರ್ಷ ಪೂರ್ವ ಮುಂಗಾರು ಮಳೆ ತಾಲ್ಲೂಕಿನಾದ್ಯಂತ ದರ್ಶನ ನೀಡಿದ ಹಿನ್ನೆಲೆ ರೈತರ ಮುಖದಲ್ಲಿ ಮತ್ತೆ ಮಂದಹಾಸ ಮೂಡಿದಂತಾಗಿದೆ. ಹೀಗಾಗಿ ಜಾನುವಾರು ಸಂತೆಯಲ್ಲಿ ಹಾವೇರಿ, ಶಿವಮೊಗ್ಗ ಜಿಲ್ಲೆ ಸೇರಿದಂತೆ ತಾಲ್ಲೂಕಿನ ಇತರೆ ಊರುಗಳಿಂದ ರೈತರು ಮುಂಜಾನೆಯಿಂದ ಮಧ್ಯಾಹ್ನದವರೆಗೂ ಎತ್ತುಗಳ ಖರೀದಿ ಜೋರಾಗಿ ನಡೆಯಿತು.

ಉಳುವ ಎತ್ತುಗಳ ಹುಡುಕಾಟ: ಜಾನುವಾರು ಸಂತೆಯಲ್ಲಿ ರೈತರು ಉಳುವ ಎತ್ತುಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಆದ್ದರಿಂದ ಮಾರುಕಟ್ಟೆಯಲ್ಲಿ ಉಳುವ ಉತ್ತಮ ಎತ್ತುಗಳಿಗೆ ಬೇಡಿಕೆ ಹೆಚ್ಚಾಗಿದ್ದು ಕಂಡುಬಂತು. ಸಂತೆಯಲ್ಲಿ ದಲ್ಲಾಳಿಗಳು ರೈತರು ಇಷ್ಟ ಪಟ್ಟ ಎತ್ತುಗಳ ಹಲ್ಲು, ಕಾಲು,ಅಂಗಾಗಳ ಪರೀಕ್ಷೆ ಮಾಡಿ ಎತ್ತುಗಳು ಉಳುಮೆ ಮಾಡಲು ಯೋಗ್ಯವಾಗಿವೆ ಎಂದು ಪರಿಶೀಲಿಸಿದ ನಂತರ ಎತ್ತು ಖರೀದಿಸಲು ರೈತರು ಮುಂದಾದರು.

ಬೇಸಿಗೆ ಸಂದರ್ಭದಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದ ಎತ್ತುಗಳಿಗೆ ಮುಂಗಾರು ಮಳೆ ಸಮೀಪಿಸುತ್ತಿದ್ದಂತೆಯೇ ಬೆಲೆ ಏರಿಕೆಯಾಗಿವೆ ಎರಡು ಹಲ್ಲು,ನಾಲ್ಕು ಹಲ್ಲು,ಎಂಟು ಹಲ್ಲುಗಳ ಎತ್ತುಗಳಿಗೆ ₹45 ಸಾವಿರದಿಂದ ₹1.30 ಲಕ್ಷದವರೆಗೂ ಎತ್ತುಗಳು ಮಾರಾಟವಾಗುತ್ತಿವೆ. ದುಬಾರಿ ಬೆಲೆಗೆ ಎತ್ತುಗಳನ್ನು ಕೊಂಡುಕೊಳ್ಳುವುದು ಹೊರೆಯಾಗಿ ಪರಿಣಮಿಸಿದೆ ಎಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಿಂದ ಬಂದಿದ್ದ ರೈತ ಮಲೇಶಪ್ಪ ನರೇರ್ ‘ಪ್ರಜಾವಾಣಿ’ಗೆ ಹೇಳಿದರು.

ಹಿರೇಕೆರೂರು ತಾಲ್ಲೂಕಿನ ಹಂಸಭಾವಿ ಗ್ರಾಮದ ಹೊಳಬಸವೇಶ್ವರ ಜಾನುವಾರು ಮಾರುಕಟ್ಟೆಯಲ್ಲಿ ಶುಕ್ರವಾರ ಜಾನುವಾರು ಸಂತೆ ಜರುಗಿತು ಪ್ರಜಾವಾಣಿ ಚಿತ್ರ
ಹಿರೇಕೆರೂರು ತಾಲ್ಲೂಕಿನ ಹಂಸಭಾವಿ ಗ್ರಾಮದ ಹೊಳಬಸವೇಶ್ವರ ಜಾನುವಾರು ಮಾರುಕಟ್ಟೆಯಲ್ಲಿ ಶುಕ್ರವಾರ ಜಾನುವಾರು ಸಂತೆ ಜರುಗಿತು ಪ್ರಜಾವಾಣಿ ಚಿತ್ರ

ಹಳೆಯ ಜಾನುವಾರು ಮಾರುಕಟ್ಟೆ

‘ಹಂಸಭಾವಿಯ ಹೊಳಬಸವೇಶ್ವರ ಜಾನುವಾರು ಮಾರುಕಟ್ಟೆ ಅತಿ ಹಳೆಯದಾದ ಜಾನುವಾರು ಮಾರುಕಟ್ಟೆಯಾಗಿದೆ. ಉತ್ತಮ ಗುಣಮಟ್ಟದ ಜಾನುವಾರುಗಳು ಇಲ್ಲಿ ಸಿಗುತ್ತವೆ. ಹೀಗಾಗಿ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಸಹ ರೈತ ಇಲ್ಲಿಗೆ ಬಂದು ಉಳುಮೆ ಮಾಡಲು ರೈತರು ಜಾನುವಾರುಗಳನ್ನು ಖರೀದಿಸುತ್ತಾರೆ’ ಎಂದು ಹೊಳಬಸವೇಶ್ವರ ದೇವಸ್ಥಾನದ ಕಾರ್ಯದರ್ಶಿ ಮೋಹನಗೌಡ ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT