ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ತಂತ್ರಜ್ಞಾನ ಕೌಶಲ ಕಲಿಕೆ ಅಗತ್ಯ: ಪ್ರೊ. ಎಸ್.ಆರ್. ನಿರಂಜನ

Published 28 ಜನವರಿ 2024, 4:51 IST
Last Updated 28 ಜನವರಿ 2024, 4:51 IST
ಅಕ್ಷರ ಗಾತ್ರ

ಕಲಬುರಗಿ: ‘ಡಿಜಿಟಲ್ ತಂತ್ರಜ್ಞಾನ ಬಳಕೆಯೊಂದಿಗೆ ಬೋಧನೆಯಲ್ಲಿ ಕೌಶಲ ಕಲಿಕೆ ಹಾಗೂ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ಮತ್ತು ಕೌಶಲಪೂರ್ಣ ಕಲಿಕೆಗೆ ಆದ್ಯತೆ ನೀಡುತ್ತಿರುವುದರಿಂದ ನಮಗಿಂತಲೂ ಅಮೆರಿಕ, ಸಿಂಗಾಪೂರ್, ಆಸ್ಟ್ರೇಲಿಯ, ಜರ್ಮನಿ ಮತ್ತು ಚೀನಾ ದೇಶಗಳು ಶೈಕ್ಷಣಿಕ ಹಾಗೂ ತಾಂತ್ರಿಕವಾಗಿ ಮುಂದುವರಿಯಲು ಸಾಧ್ಯವಾಗಿದೆ’ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಪ್ರೊ. ಎಸ್.ಆರ್. ನಿರಂಜನ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಹಾಗೂ ಡಾ. ಪಿ.ಎಸ್. ಶಂಕರ್ ಪ್ರತಿಷ್ಠಾನ ಸಹಯೋಗದಲ್ಲಿ ಆಯೋಜಿಸಿದ್ದ ‘ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶೈಕ್ಷಣಿಕ ಉತ್ಕೃಷ್ಟತೆಯ ಕಡೆಗೆ ಉನ್ನತ ಶಿಕ್ಷಣದ ಭ್ರಾತೃತ್ವ ಕಲಿಕೆ ಉತ್ತಮಗೊಳಿಸು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳಿವೆ. ಜಾಗತಿಕ ಶಿಕ್ಷಣ ಮತ್ತು ತಂತ್ರಜ್ಞಾನ ಬಳಕೆಯೊಂದಿಗೆ ವಿದ್ಯಾರ್ಥಿಗಳಲ್ಲಿ ಕಲಿಕೆಯನ್ನು ಉತ್ತೇಜಿಸಬೇಕು. ಜಾಗತಿಕ ಮನ್ನಣೆಗೆ ಪೂರಕವಾಗಿ ಅಗತ್ಯ ತಂತ್ರಜ್ಞಾನ ಮತ್ತು ಕೌಶಲ ತರಬೇತಿಗೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಚರ್ಚೆ ಮತ್ತು ಸಂವಾದ ನಡೆಸಿ ಜ್ಞಾನದ ಬಲವರ್ಧನೆಗೆ ಪ್ರೇರೇಪಿಸಬೇಕು’ ಎಂದರು.

‘ಗುಣಮಟ್ಟದ ಶಿಕ್ಷಣ ಮತ್ತು ತಂತ್ರಜ್ಞಾನದಿಂದ ಮಾತ್ರ ಬಡತನ ಮತ್ತು ಹಸಿವನ್ನು ನೀಗಿಸಲು ಸಾಧ್ಯವಿದೆ. 1960ರಲ್ಲಿ ಆಹಾರ ಭದ್ರತೆ ಮತ್ತು ಬಿಕ್ಕಟ್ಟನ್ನು ಎದುರಿಸಿದ ಪರಿಣಾಮ ಇಂದಿಗೂ ಅದರ ಸಮಸ್ಯೆಯಿಲ್ಲ. ಮುಂದಿನ ದಿನಗಳಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಯುವಕರಿಗೆ ತಂತ್ರಜ್ಞಾನದ ಬಳಕೆ, ಉದ್ಯೋಗ ಕೌಶಲ, ವೃತ್ತಿಪರತೆ ಜ್ಞಾನ ಒದಗಿಸಿ ಉದ್ಯೋಗ ಭದ್ರತೆ ಸಿಗುವ ರೀತಿ ವಿದ್ಯಾರ್ಥಿಗಳನ್ನು ಶಿಕ್ಷಕರು ತಯಾರಿಗೊಳಿಸಬೇಕು’ ಎಂದರು.

‘ಪ್ರಸ್ತುತ ಶಿಕ್ಷಣದ ಅನಿವಾರ್ಯತೆ ಮತ್ತು ಉದ್ಯೋಗ ಸವಾಲುಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಅಗತ್ಯವಿದೆ. ಮಾನವ ಸಂಪನ್ಮೂಲದ ಕೊರತೆ ಹಾಗೂ ಸಾಂಸ್ಥಿಕ ಶಿಕ್ಷಣದ ಪೂರ್ವ ಯೋಜನೆ ತಯಾರಿ ಇಲ್ಲದಿದ್ದರೆ ಗುಣಮಟ್ಟದ ಶಿಕ್ಷಣ ನೀಡುವುದು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಕೆಬಿಎನ್ ವಿಶ್ವವಿದ್ಯಾಲಯದ ಗೌರವ ಪ್ರಾಧ್ಯಾಪಕ ಡಾ. ಪಿ.ಎಸ್. ಶಂಕರ್ ಮಾತನಾಡಿ, ‘ಭಾರತೀಯ ಶಿಕ್ಷಣ ವ್ಯವಸ್ಥೆಗೆ ಹೆಚ್ಚು ಮಹತ್ವವಿದೆ. ಶಿಕ್ಷಣ ಮತ್ತು ಪಾಲ್ಗೊಳ್ಳುವಿಕೆ ಮೂಲಕ ಹಲವಾರು ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಲು ಸಾಧ್ಯವಾಗುತ್ತದೆ. ಬೋಧನಾ ಮತ್ತು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದಿಂದ ಅಗಾಧ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಇಂದಿನ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ ಮಹತ್ವದಾಗಿದೆ’ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸಿ, ‘ಇಂದಿನ ಜಾಗತಿಕ ಸವಾಲುಗಳನ್ನು ಸ್ವೀಕರಿಸಲು ಅಗತ್ಯವಿರುವ ಹೊಸ ಆಲೋಚನೆ ಜೊತೆಗೆ ಅಂತರ್ ಮತ್ತು ಬಹುಶಿಸ್ತೀಯ ವಿಷಯಗಳ ಚಿಂತನೆ ಮಾಡಬೇಕಿದೆ. ವಿನೂತನ ಕೌಶಲ ಮತ್ತು ವೃತ್ತಿ ಜ್ಞಾನ ಗಳಿಸುವುದು ಮತ್ತು ವಿದ್ಯಾರ್ಥಿಗಳಿಗೆ ಕಲಿಸುವುದು ಇಂದಿನ ಶಿಕ್ಷಣ ವ್ಯವಸ್ಥೆಗೆ ಅಳವಡಿಸಿಕೊಂಡು ಬೋಧಕರು ಮುಂದೆ ಸಾಗಬೇಕಿದೆ’ ಎಂದರು.

ಡಾ. ಪಿ.ಎಸ್. ಶಂಕರ್ ಪ್ರತಿಷ್ಠಾನದ ಅಧ್ಯಕ್ಷೆ ಅಂಬಿಕಾ ಶಂಕರ್, ಕಲಬುರಗಿ ಉನ್ನತ ಶಿಕ್ಷಣ ಸಂಸ್ಥೆ ಜಂಟಿ ನಿರ್ದೇಶಕ ಪ್ರೊ. ಪ್ರಕಾಶ ಹೊಸಮನಿ, ಗುಲಬರ್ಗಾ ವಿಶ್ವವಿದ್ಯಾಲಯದ ಐಕ್ಯೂಎಸಿ ನಿರ್ದೇಶಕ ಪ್ರೊ. ಬಿ.ಆರ್. ಕೆರೂರ್, ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥ ಪ್ರೊ. ಎನ್.ಬಿ. ನಡುವಿನಮನಿ ಉಪಸ್ಥಿತರಿದ್ದರು.

ಕುಲಸಚಿವ ಬಿ.ಶರಣಪ್ಪ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಬಡಶೇಷಿ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ನಾಲ್ಕು ತಾಂತ್ರಿಕ ಗೋಷ್ಠಿಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT