ಕಲಬುರ್ಗಿ: ಜಿಲ್ಲೆಯಾದ್ಯಂತ ಮಂಗಳವಾರ ತಡರಾತ್ರಿ ವ್ಯಾಪಕ ಮಳೆ ಸುರಿದ ಪರಿಣಾಮ ಜಿಲ್ಲೆಯ ಬಹುತೇಕ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿದೆ. ನದಿಗೆ ನೀರು ಹರಿಬಿಡಲಾಗುತ್ತಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಸೂಪರಿಂಟೆಂಡೆಂಟ್ ಎಂಜಿನಿಯರ್ ಜಗನ್ನಾಥ ಹಾಲಿಂಗೆ ತಿಳಿಸಿದ್ದಾರೆ.
ಬುಧವಾರ ಬೆಳಿಗ್ಗೆ 8 ಗಂಟೆಗೆ ಗಂಡೋರಿನಾಲಾ ಜಲಾಶಯಕ್ಕೆ ಒಳಹರಿವು 35,000 ಕ್ಯುಸೆಕ್ ಇದ್ದು, 30,000 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ.
ಆಳಂದ ತಾಲ್ಲೂಕಿನಲ್ಲಿರುವ ಅಮರ್ಜಾ ಜಲಾಶಯಕ್ಕೆ ಒಳಹರಿವು 15,000 ಕ್ಯುಸೆಕ್ ನೀರು ಇದ್ದು, 13,000 ಕ್ಯುಸೆಕ್ ನೀರನ್ನು ಬಿಡಲಾಗಿದೆ.
ಅಫಜಲಪುರ ತಾಲ್ಲೂಕಿನ ಸೊನ್ನ ಬ್ಯಾರೇಜಿಗೆ ಒಳಹರಿವು 70,000 ಕ್ಯುಸೆಕ್ ನೀರು ಇದ್ದು, ಅಷ್ಟೇ ಪ್ರಮಾಣದ ನೀರನ್ನು ಭೀಮಾ ನದಿಗೆ ಬಿಡಲಾಗಿದೆ.
ಬೆಣ್ಣೆತೋರಾ ಜಲಾಶಯಕ್ಕೆ ಒಳಹರಿವು 80,510 ಕ್ಯುಸೆಕ್ ಇದ್ದು, 59,350 ಕ್ಯುಸೆಕ್ ನೀರನ್ನು ಹರಿಬಿಡಲಾಗಿದೆ.
ಲೋವರ್ ಮುಲ್ಲಾಮಾರಿ ಜಲಾಶಯಕ್ಕೆ 38,500 ಕ್ಯುಸೆಕ್ ನೀರು ಒಳಹರಿವಿದ್ದು, 57,000 ಕ್ಯುಸೆಕ್ ನೀರು ಹೊರಬಿಡಲಾಗಿದೆ.
ಚಿಂಚೋಳಿ ತಾಲ್ಲೂಕಿನ ಚಂದ್ರಮಪಳ್ಳಿ ಜಲಾಶಯದ ಒಳ ಹರಿವು 6,395 ಕ್ಯುಸೆಕ್ ಇದ್ದರೆ, ಹೊರ ಹರಿವು 6,125 ಕ್ಯುಸೆಕ್ ಇದೆ.
ಅಪ್ಪರ ಮುಲ್ಲಾಮಾರಿ ಜಲಾಶಯದಲ್ಲಿ 13,020 ಕ್ಯುಸೆಕ್ ನೀರು ಒಳ ಹರಿವಿದ್ದು, ಅಷ್ಟೆ ಪ್ರಮಾಣದ ನೀರು ಹೊರ ಬಿಡಲಾಗಿದೆ.
ಮುಂದಿನ 3-4 ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಂಭವವಿದ್ದು, ನದಿ ಪಾತ್ರದ ಜನರು ನದಿ ಕಡೆಗೆ ಹೋಗಬಾರದು. ತಮ್ಮ ಜಾನುವಾರಗಳನ್ನು ಸಹ ನದಿ ದಂಡೆಗೆ ಬಿಡದಂತೆ ಹಾಗೂ ತುಂಬಾ ಎಚ್ಚರಿಕೆಯಿಂದಿರುವಂತೆ ಜಗನ್ನಾಥ ಹಾಲಿಂಗೆ ಮನವಿ ಮಾಡಿದ್ದಾರೆ.