ಕಲಬುರ್ಗಿ: ಸಂಪೂರ್ಣ ಜಜ್ಜಿ ಹೋಗಿದ್ದ ಕೈಯನ್ನು ಶಸ್ತ್ರಚಿಕಿತ್ಸೆ ಮೂಲಕ ಮರು ಜೋಡಣೆ ಮಾಡುವಯಲ್ಲಿ ಇಲ್ಲಿನ ಮನೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.
ಶಹಾಪುರ ತಾಲ್ಲೂನ ತಡಿಬಡಿ ಗ್ರಾಮದ 36 ವರ್ಷದಭೀಮರಾಯ ಅವರ ಕೈ ಕಬ್ಬಿನ ರಸ ತೆಗೆಯುವ ಯಂತ್ರದಲ್ಲಿ ಸಿಕ್ಕಿಕೊಂಡು ಸಂಪೂರ್ಣ ಜಜ್ಜಿ ಹೋಗಿತ್ತು. ಕೈಯಲ್ಲಿನ ಎಲ್ಲ ಎಲುಬು, ನರಗಳು ಕತ್ತರಿಸಿಹೋಗಿದ್ದವು. ಒಂದು ನರ ಮಾತ್ರ ಉಳಿದಿತ್ತು. ‘ಇಂಥ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಮೊಣಕೈನಿಂದ ಮುಂದಿನ ಭಾಗವನ್ನು ಕತ್ತರಿಸಿ ತೆಗೆಯುವುದು ಅನಿವಾರ್ಯ ಎಂದು ಕೆಲ ವೈದ್ಯರು ತಿಳಿಸಿದ್ದರು. ಆದರೆ, ಈ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡ ಇಲ್ಲಿನ ಹುಮನಾಬಾದ್ ರಿಂಗ್ ರಸ್ತೆಯಲ್ಲಿರುವ ಮನೂರ ಆಸ್ಪತ್ರೆಯ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ಮಾಡಿದ್ದಾರೆ’ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಫಾರೂಕ್ ಮನೂರ ತಿಳಿಸಿದ್ದಾರೆ.
‘ದೇಹದ ಬೇರೆ ಅಂಗದಲ್ಲಿನ ನರ ತೆಗೆದು ಕೈಗೆ ಜೋಡಿಸಲಾಗಿದೆ. ಜಜ್ಜಿಹೋಗಿದ್ದ ಎಲುಬುಗಳನ್ನು ಮರುಜೋಡಣೆ ಮಾಡಲಾಗಿದೆ. 15 ದಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಈ ಶಸ್ತ್ರಚಿಕಿತ್ಸೆ ಮಾಡಲು ಸುಮಾರು ₹ 10 ಲಕ್ಷ ಖರ್ಚಾಗಿದೆ. ರೋಗಿಯು ಬಡವನಾಗಿದ್ದರಿಂದ ಕೇವಲ ₹ 1.10 ಲಕ್ಷ ಬಿಲ್ ಮಾಡಿದ್ದೇವೆ’ ಎಂದೂ ಅವರು ತಿಳಿಸಿದ್ದಾರೆ.
ಈ ಶಸ್ತ್ರಿಚಿಕಿತ್ಸೆ ತಂಡದಲ್ಲಿ ಡಾ.ಫಾರೂಕ್ ಮನೂರ, ಡಾ.ವಿವೇಕ, ಡಾ.ಅನೀಲ್ಕುಮಾರ, ಡಾ.ಪವನ್ ಪಾಟೀಲ, ಡಾ.ಅನೀಲ್ ಶ್ರಮ ವಹಿಸಿದ್ದಾರೆ.