ನಾಪೋಕ್ಲು: ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಹೋಬಳಿ ವ್ಯಾಪ್ತಿಯ ಹಲವೆಡೆ ತೋಟಗಳಲ್ಲಿ ಕಾಫಿಯ ಹೂಗಳು ಅರಳಿದ್ದು ಘಮಘಮಿಸುತ್ತಿವೆ.
ಸಾಮಾನ್ಯವಾಗಿ ಫೆಬ್ರುವರಿ ಕೊನೆಯ ವಾರದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ‘ಹೂಮಳೆ’ಯಾಗಿ ಕಾಫಿ ತೋಟಗಳಲ್ಲಿ ಹೂಗಳು ಅರಳುತ್ತಿದ್ದವು. ಇದೀಗ ಅಕಾಲಿಕ ಮಳೆಯಿಂದಾಗಿ ಅಲ್ಲಲ್ಲಿ ಕಾಫಿ ಹೂಗಳು ಭಾಗಶಃ ಅರಳಿದ್ದು, ಕಾಫಿ ಕೊಯ್ಲಿಗೆ ತೊಡಕಾಗಿದೆ.
ಮಳೆ ದೂರವಾಗಿ ಬಿಸಿಲು ಕಾಣಿಸಿಕೊಂಡಿರುವುದರಿಂದ ಕಾಫಿ ಬೆಳೆಗಾರರು ಕಾಫಿ ಕೊಯ್ಲು ಮಾಡಲು ಉತ್ಸುಕರಾಗಿದ್ದಾರೆ. ಆದರೆ, ಕಾಫಿಯ ತೋಟಗಳಲ್ಲಿ ಅರಳಿರುವ ಹೂಗಳು ಕೊಯ್ಲಿಗೆ ತೊಡಕಾಗಿರುವುದರಿಂದ ಕೆಲವೆಡೆ ಬೆಳೆಗಾರರು ಕೊಯ್ಲು ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ.
‘ಅರಳಿರುವ ಹೂಗಳು ಉದುರಿ ಮುಂದಿನ ವರ್ಷದ ಇಳುವರಿ ಮೇಲೆ ಪರಿಣಾಮ ಬೀರುವುದರಿಂದ ಕೊಯ್ಲು ಮಾಡಲಾಗುತ್ತಿಲ್ಲ. ಒಂದೆಡೆ ಬಿಸಿಲು ಕಾಣಿಸಿಕೊಂಡಿದ್ದು ಕಾಫಿ ಒಣಗಿಸಲು ಸೂಕ್ತವಾಗಿದ್ದರೆ, ಮತ್ತೊಂದಡೆ ಹೂಗಳು ಉದುರದಂತೆ ಎಚ್ಚರಿಕೆಯಿಂದ ಕೊಯ್ಲು ಮಾಡಬೇಕಾಗಿದೆ’ ಎಂದು ನೆಲಜಿ ಗ್ರಾಮದ ಬೆಳೆಗಾರ ನಂಜಪ್ಪ ಹೇಳಿದರು.
ಪ್ರತಿ ವರ್ಷ ಕಾಫಿ ಕೊಯ್ಲು ಪೂರ್ಣಗೊಂಡ ನಂತರ ಬೆಳೆಗಾರರು ಹೂ ಮಳೆಗಾಗಿ ಕಾತರಿಸುತ್ತಾರೆ. ಫೆಬ್ರುವರಿ 15ರ ನಂತರ ಮಳೆ ಬಂದರೆ ಸೂಕ್ತ ಎಂಬುದು ಬೆಳೆಗಾರ ಅಭಿಪ್ರಾಯ.
ನೀರಿನ ಸೌಕರ್ಯ ಉಳ್ಳವರು ನೀರಾವರಿ ಮೂಲಕ ಕಾಫಿ ಹೂವರಳಿಸಿ ಹೆಚ್ಚಿನ ಇಳುವರಿ ತೆಗೆಯುತ್ತಿದ್ದಾರೆ. ನಿಗದಿತ ಅವಧಿಯಲ್ಲಿ ಕಾಫಿಗೆ ನೀರುಡಿಸಿ ಬ್ಯಾಕಿಂಗ್ ನೀರನ್ನು ಒದಗಿಸಿ ಇಳುವರಿ ಹೆಚ್ಚಾಗುವಂತೆ ನೋಡಿಕೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಮಳೆ ಏರುಪೇರು ಆಗುತ್ತಿದ್ದು, ಸಣ್ಣ ಮತ್ತು ಮಧ್ಯಮ ಬೆಳೆಗಾರರು ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ.
ಈ ವರ್ಷ ಸುರಿದ ಅಕಾಲಿಕ ಮಳೆಯಿಂದ ಮುಂದಿನ ವರ್ಷ ಕಾಫಿ ಬೇಗನೆ ಹಣ್ಣಾಗಲಿದೆ. ಒಂದೇ ಗಿಡದಲ್ಲಿ ಕಾಫಿಕಾಯಿಗಳು, ಹಣ್ಣು ಇರುವ ಸಾಧ್ಯತೆಯಿದ್ದು ಕೊಯ್ಲಿಗೆ ತೊಡಕಾಗಲಿದೆ ಎಂದು ಮತ್ತೋರ್ವ ಬೆಳೆಗಾರ ಅಪ್ಪಚ್ಚು ಅಭಿಪ್ರಾಯಪಟ್ಟರು.
‘ಹೂ ಅರಳಿರುವ ಕಡೆ ಕೊಯ್ಲನ್ನು ಸ್ವಲ್ಪ ಮುಂದೂಡಬೇಕಾಗುತ್ತದೆ’ ಎಂದು ಕಾಫಿ ಮಂಡಳಿಯ ಉಪನಿರ್ದೇಶಕ ಚಂದ್ರಶೇಖರ್ ತಿಳಿಸಿದರು.
ಪ್ರತಿ ವರ್ಷ ಫೆಬ್ರುವರಿ, ಮಾರ್ಚ್ನಲ್ಲಿ ಅರಳುತ್ತಿದ್ದ ಕಾಫಿ ಹೂ ಜನವರಿ ಮೊದಲ ವಾರದಲ್ಲಿ ಸುರಿದ ಮಳೆ ಕಾಫಿ ಹಣ್ಣಿನ ಮಧ್ಯೆಯೆ ಹೂಗಳ ರಾಶಿ
ಈ ವರ್ಷದ ಮಳೆಯಿಂದ ಕಾಫಿ ಬೆಳೆಗಾರರು ಅತಂತ್ರ ಸ್ಥಿತಿಗೆ ಒಳಗಾಗಿದ್ದಾರೆ. ಕಳೆದ 3 ವರ್ಷಗಳಿಂದ ಬರುತ್ತಿರುವ ಅಕಾಲಿಕ ಮಳೆಯಿಂದಾಗಿ ಕಾಫಿ ಕೊಯ್ಲು ಮಾಡಲಾಗದೆ ತೋಟಗಳಲ್ಲೇ ಕಾಫಿ ನಾಶವಾಗುತ್ತಿದೆ-ಎ.ಎಂ.ಆನಂದ್ ಅಪ್ಪಶೆಟ್ಟಳ್ಳಿ ಶನಿವಾರಸಂತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.