ಪ್ರಜಾವಾಣಿ ವಾರ್ತೆ
ವಿರಾಜಪೇಟೆ: ಪಟ್ಟಣದಲ್ಲಿ ನಡೆದ ‘ಬಂಟರ ಸಂಗಮ -2024’ ಜಿಲ್ಲಾ ಮಟ್ಟದ ಬಂಟರ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾಟದಲ್ಲಿ ಕೈಕೇರಿಯ ಯಂಗ್ ಬಂಟ್ಸ್ ಪ್ಯಾಂಥರ್ಸ್ ತಂಡ ಪ್ರಶಸ್ತಿ ಪಡೆದುಕೊಂಡಿತು.
ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಯಂಗ್ ಬಂಟ್ಸ್ ಪ್ಯಾಂಥರ್ಸ್ ತಂಡ 19 ರನ್ಗಳಿಂದ ಮಡಿಕೇರಿಯ ಚಕ್ರವರ್ತಿ ತಂಡವನ್ನು ಮಣಿಸಿತು. ಕ್ರಿಕೆಟ್ ಪಂದ್ಯಾಟದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ದಿಕ್ಷೀತ್, ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಶರತ್, ಉತ್ತಮ ಬೌಲರ್ ಪ್ರಶಸ್ತಿಯನ್ನು ಜಯಂತ್ ರೈ ಹಾಗೂ ಫೈನಲ್ನ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗಗನ್ ಆಳ್ವ ಪಡೆದುಕೊಂಡರು.
ಥ್ರೋಬಾಲ್ನಲ್ಲಿ ಮಡಿಕೇರಿಯ ಮಹಿಳಾ ತಂಡವು ಪ್ರಶಸ್ತಿ ಪಡೆದುಕೊಂಡರೆ, ನೀಲಿಮಾಡು ತಂಡವು ದ್ವಿತಿಯ ಸ್ಥಾನ ಪಡೆದುಕೊಂಡಿತು. ಹಗ್ಗಜಗ್ಗಾಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಮಡಿಕೇರಿಯ ಚಕ್ರವರ್ತಿ ತಂಡವು ಪ್ರಶಸ್ತಿ ಪಡೆದುಕೊಂಡರೆ, ವಿರಾಜಪೇಟೆಯ ಮಲ್ನಾಡು ಬಂಟ್ಸ್ ತಂಡ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿತು. ಮಹಿಳೆಯರ ವಿಭಾಗದಲ್ಲಿ ನಾಪೋಕ್ಲು ತಂಡ ಪ್ರಶಸ್ತಿಯನ್ನು ಪಡೆದುಕೊಂಡರೆ, ಮಡಿಕೇರಿಯ ಮಹಿಳಾ ತಂಡ ಎರಡನೇ ಸ್ಥಾನ ಪಡೆದುಕೊಂಡಿತು.
ಗುಂಡು ಎಸೆತ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ರಮೇಶ್ ರೈ ಪ್ರಥಮ, ಗಗನ್ ಆಳ್ವಾ ದ್ವಿತೀಯ ಹಾಗೂ ರಂಜಿತ್ ಶೆಟ್ಟಿ ತೃತೀಯ ಸ್ಥಾನವನ್ನು ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಶುಭಾ ಶೆಟ್ಟಿ ಪ್ರಥಮ, ರಾಶಿ ದ್ವಿತೀಯ ಹಾಗೂ ಭೂಮಿಕಾ ತೃತೀಯ ಸ್ಥಾನ ಪಡೆದುಕೊಂಡರು.
ಮಕ್ಕಳಿಗೆ ನಡೆದ ‘ಬಾಂಬ್ ಬ್ಲಾಸ್ಟಿಂಗ್’ ಸ್ಪರ್ಧೆಯಲ್ಲಿ ತಾನ್ಯ ರೈ ಪ್ರಥಮ, ಆತ್ಮಿಕಾ ರೈ ದ್ವಿತೀಯ ಹಾಗೂ ಸುಜಾತಾ ರೈ ತೃತೀಯ ಸ್ಥಾನ ಪಡೆದುಕೊಂಡರು. ಕಪ್ಪೆ ಜಿಗಿತದಲ್ಲಿ ವಿಹಾನ್ ರೈ ಪ್ರಥಮ, ಸಾರಾ ಶೆಟ್ಟಿ ದ್ವಿತೀಯ ಹಾಗೂ ಮಿರಲ್ ಆಳ್ವಾ ತೃತೀಯ ಸ್ಥಾನ ಪಡೆದುಕೊಂಡರು.
ನರ್ಸರಿ ವಿಭಾಗದ ಪುಟಾಣಿಗಳಿಗೆ ನಡೆದ ‘ಕಪ್ಪೆ ಜಿಗಿತ’ ಸ್ಪರ್ಧೆಯಲ್ಲಿ ಆರ್ವ್ ರೈ ಪ್ರಥಮ, ನೈನಾ ರೈ ದ್ವಿತೀಯ, ಜಶ್ವಿಕ್ ರೈ ತೃತೀಯ ಹಾಗೂ ಧ್ರುವ ರೈ ನಾಲ್ಕನೇ ಸ್ಥಾನ ಪಡೆದರು. ಬಾಲಕಿಯರ ಓಟದ ಸ್ಪರ್ಧೆಯಲ್ಲಿ ಜನನಿ ರೈ ಪ್ರಥಮ, ನಿರ್ವಿ ದ್ವಿತೀಯ ಹಾಗೂ ಇಂಚರ ರೈ ತೃತೀಯ ಬಹುಮಾನ ಪಡೆದುಕೊಂಡರು. ಬಾಲಕರ ವಿಭಾಗದಲ್ಲಿ ದರ್ಶಿಲ್ ಪ್ರಥಮ, ಶಶಿತ್ ರೈ ದ್ವಿತೀಯ ಹಾಗೂ ಸಂಚಿತ್ ತೃತೀಯ ಸ್ಥಾನ ಪಡೆದುಕೊಂಡರು.
ಸಮಾರೋಪ: ಬಂಟರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಡಿ.ಜಗದೀಶ್ ರೈ, ಪ್ರಧಾನ ಕಾರ್ಯದರ್ಶಿ ವಿ.ರವೀಂದ್ರ ರೈ, ಸೋಮವಾರಪೇಟೆ ತಾಲ್ಲೂಕು ಬಂಟರ ಸಂಘದ ಅಧ್ಯಕ್ಷ ಬಿ.ಬಿ.ಜನಾರ್ಧನ ಶೆಟ್ಟಿ, ಜಿಲ್ಲಾ ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ವಸಂತ್ ರೈ, ಮಡಿಕೇರಿ ನಗರ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ಶೆಟ್ಟಿ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ್ದ ವಿರಾಜಪೇಟೆ ತಾಲ್ಲೂಕು ಬಂಟರ ಸಂಘದ ಅಧ್ಯಕ್ಷ ಬಿ.ಎಸ್.ಲೀಲಾಧರ ರೈ ಅವರು ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನ್ಯಾಯಾಧೀಶರಾದ ಲತಾ, ಯೋಗಗುರು ಸೀತಾರಾಂ ರೈ, ಜಾದೂಗಾರ್ ವಿಕ್ರಂ ಶೆಟ್ಟಿ, ಪೊಲೀಸ್ ಕ್ರೀಡಾಪಟು ಜಿತೇಂದ್ರ ರೈ ಅವರನ್ನು ಸನ್ಮಾನಿಸಲಾಯಿತು.
ವಿರಾಜಪೇಟೆ ತಾಲ್ಲೂಕು ಬಂಟರ ಸಂಘದ ಗೌರವ ಅಧ್ಯಕ್ಷ ರಾಮಣ್ಣ ಶೆಟ್ಟಿ, ಉಪಾಧ್ಯಕ್ಷ ಪ್ರಕಾಶ್ ರೈ, ಕಾರ್ಯದರ್ಶಿ ಸಂಪತ್ ಶೆಟ್ಟಿ, ಮಹಿಳಾ ಘಟಕದ ಗೌರವ ಅಧ್ಯಕ್ಷೆ ಕುಸುಮಾ ಎನ್ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಬಿ.ಆರ್.ನೀತಾ ರೈ, ನಿರ್ದೇಶಕ ಬಿ.ಕೆ.ಸತೀಶ್ ರೈ, ಡಾ.ಹೇಮಂತ್ ಶೆಟ್ಟಿ, ಕೆ.ಡಿ.ಸತೀಶ್ ರೈ, ನಿರ್ದೇಶಕಿ ಶೋಭಾ ರೈ, ಬಿ.ಎ.ಸುರೇಶ್ ರೈ, ಶೀತಲ್ ರೈ, ಖಜಾಂಚಿ ಮದನ್ ಶೆಟ್ಟಿ, ಸುದೀಶ್ ರೈ, ಸತೀಶ್ ರೈ, ಕಾರ್ಯದರ್ಶಿ ಶಶಿಕಲಾ ಶೆಟ್ಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.