ಶನಿವಾರಸಂತೆ: ‘ಒಂದು ವೇಳೆ ಅಸ್ಸಾಂನಲ್ಲಿ ಸಂತೃಪ್ತ ಬದುಕು ನಡೆಸುವಂತಹ ವಾತಾವರಣ ಇದ್ದಿದ್ದರೆ ಅಲ್ಲಿನ ಕಾರ್ಮಿಕರು ಕೆಲಸ ಹುಡುಕಿಕೊಂಡು ಇಲ್ಲಿಗೆ ಏಕೆ ಬರುತ್ತಿದ್ದರು’ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ಗೌಡ ಪ್ರಶ್ನಿಸಿದರು.
ಇಲ್ಲಿನ ಶನಿವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಅಸ್ಸಾಂನಿಂದ ಬಂದ ಕಾರ್ಮಿಕರಿಗೆ ಕೆಲಸ ನೀಡಿ ಕೊಡಗಿನ ಜನರು ರಕ್ಷಿಸಿದ್ದಾರೆ. ಅವರಿಗೆ ಅಲ್ಲಿ ಸಿಗದ ಕಾರಣ ಅವರು ಇಲ್ಲಿಗೆ ಬಂದಿದ್ದಾರೆ. ಈಗ ಅಂತಹ ಅಸ್ಸಾಂ ಮುಖ್ಯಮಂತ್ರಿಯನ್ನು ಇಲ್ಲಿಗೆ ಬಿಜೆಪಿ ಕರೆತಂದು ಪ್ರಚಾರ ನಡೆಸಿದೆ. ಅದಕ್ಕಾಗಿಯೇ ಅಸ್ಸಾಂ ಕಾರ್ಮಿಕರು ಅವರ ಭಾಷಣ ಕೇಳಲು ಬರಲಿಲ್ಲ‘ ಎಂದು ವ್ಯಂಗ್ಯವಾಡಿದರು.
‘ನಾನು ಹೊರಗಿನವನು ಎಂದು ಹೇಳುವ ಶಾಸಕರು ಈ ದಿನ ಪ್ರಚಾರಕ್ಕೆ ಅರಕಲಗೂಡು ತಾಲ್ಲೂಕಿನ ಜನರನ್ನು ಸೇರಿಸಿದ್ದು ಏಕೆ. ಇವರ ಬಳಿ ಜನಬೆಂಬಲ ಇಲ್ಲವೇ’ ಎಂದೂ ಪ್ರಶ್ನಿಸಿದರು.
ಈ ವೇಳೆ ಬಿಜೆಪಿಯ ಹಲವು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರಿದರು. ಕಾಂಗ್ರೆಸ್ ಮುಖಂಡ ಚಂದ್ರಮೌಳಿ, ಹರಪಳ್ಳಿ ರವೀಂದ್ರ, ವಕೀಲ ಜಯೇಂದ್ರ, ಎನ್.ಕೆ ಅಪ್ಪಸ್ವಾಮಿ. ರಂಗಸ್ವಾಮಿ, ದುಂಡಳ್ಳಿ ಬೋಜಪ್ಪ ಇದ್ದರು.
ಶನಿವಾರಸಂತೆಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು