ಕೋಲಾರ: ‘ಕೊರೊನಾ ಸೋಂಕಿನಿಂದ ಜಗತ್ತು ತಲ್ಲಣಗೊಂಡಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ದೇಶದ ಜನರಿಗೆ ಕೋವಿಡ್ ಲಸಿಕೆ ನೀಡಿರುವುದು ಐತಿಹಾಸಿಕ ದಿನವಾಗಿದೆ’ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ಇಲ್ಲಿ ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ‘ಪ್ರಧಾನಮಂತ್ರಿಗಳ ಆತ್ಮ ನಿರ್ಭರ್ ಭಾರತದ ಆಶಯದಂತೆ ವಿಜ್ಞಾನಿಗಳ ಪರಿಶ್ರಮದ ಫಲವಾಗಿ ದೇಸಿ ನಿರ್ಮಿತ ಕೋವಿಡ್ ಲಸಿಕೆ ಸಿದ್ಧಗೊಂಡಿದೆ’ ಎಂದರು.
‘ಮೊದಲ ಹಂತದಲ್ಲಿ ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಮೊದಲನೇ ಡೋಸ್ ಲಸಿಕೆ ಹಾಕಿದ ನಂತರ 4 ವಾರದ ಬಳಿಕ 2ನೇ ಡೋಸ್ ಲಸಿಕೆ ನೀಡಲಾಗುತ್ತದೆ’ ಎಂದು ವಿವರಿಸಿದರು.
‘ಜಿಲ್ಲೆಗೆ ಸದ್ಯ 8 ಸಾವಿರ ಡೋಸ್ ಕೋವಿಶೀಲ್ಡ್ ಲಸಿಕೆ ಪೂರೈಕೆಯಾಗಿದೆ. ಹಂತ ಹಂತವಾಗಿ ಮತ್ತಷ್ಟು ಲಸಿಕೆ ಸರಬರಾಜು ಆಗಲಿದೆ. ಈಗಾಗಲೇ 12,680 ಮಂದಿ ನೋಂದಣಿಯಾಗಿದ್ದು, ಅವರಿಗೆ ಲಸಿಕೆ ನೀಡಲಾಗುವುದು. ಆರೋಗ್ಯ ಇಲಾಖೆ ವೈದ್ಯಕೀಯ ಸಿಬ್ಬಂದಿ ಒಗ್ಗೂಡಿ ಒಂದು ತಂಡವಾಗಿ ಲಸಿಕೆ ಅಭಿಯಾನ ಯಶಸ್ವಿಗೊಳಿಸಬೇಕು’ ಎಂದು ಕಿವಿಮಾತು ಹೇಳಿದರು.
‘ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯ ಆರಂಭವಾಗಿರುವುದು ಸಂತಸ ತಂದಿದೆ. ಕೊರೊನಾ ಮಹಾಮಾರಿ ಪೂರ್ತಿಯಾಗಿ ಹೋಗಲಿದೆ ಎನ್ನುವ ಆಶಾಭಾವನೆ ಮೂಡಿದೆ. ದೇಶದಲ್ಲೇ ಲಸಿಕೆ ಕಂಡುಹಿಡಿದು ನೀಡುತ್ತಿರುವ ವಿಜ್ಞಾನಿಗಳ ಶ್ರಮ ಶ್ಲಾಘನೀಯ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್ಕುಮಾರ್, ಆರ್ಸಿಎಚ್ ಡಾ.ವಿಜಯಕುಮಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ ಹಾಜರಿದ್ದರು.