ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಮಾವು ಬೆಳೆ ವಿಮೆಗೆ ಬೆಳೆಗಾರರು ವಿಮುಖ!

ಅತಿ ಹೆಚ್ಚು ಮಾವು ಬೆಳೆಯುವ ಕೋಲಾರ ಜಿಲ್ಲೆಯಲ್ಲೇ ನಿರಾಸಕ್ತಿ–ಮಾನದಂಡ ಸರಿ ಇಲ್ಲವೆಂದು ದೂರು
Published 5 ಆಗಸ್ಟ್ 2023, 5:35 IST
Last Updated 5 ಆಗಸ್ಟ್ 2023, 5:35 IST
ಅಕ್ಷರ ಗಾತ್ರ

ಕೋಲಾರ: ರಾಜ್ಯದಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ಕೋಲಾರ ಜಿಲ್ಲೆಯಲ್ಲೇ ಈ ಬಾರಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ರೈತರು ನಿರಾಸಕ್ತಿ ತೋರಿದ್ದಾರೆ. ಬೆಳೆ ವಿಮೆ ಮಾನದಂಡ ಸರಿ ಇಲ್ಲ ಎಂಬುದು ಬೆಳೆಗಾರರ ದೂರು.

ಜುಲೈ 31ಕ್ಕೆ ನೋಂದಣಿ ಪ್ರಕ್ರಿಯೆ ಕೊನೆಗೊಂಡಿದ್ದು, ಕೇವಲ 2,541 ಹೆಕ್ಟೇರ್‌ ಮಾವು ಬೆಳೆ ಪ್ರದೇಶ ವ್ಯಾಪ್ತಿಗೆ 2,609 ಬೆಳೆಗಾರರು ವಿಮೆ ಮಾಡಿಸಿದ್ದಾರೆ. ಕಳೆದ ವರ್ಷ 3,600 ಹೆಕ್ಟೇರ್‌ ಪ್ರದೇಶಕ್ಕೆ‌ ಬೆಳೆ ವಿಮೆ ಮಾಡಿಸಿದ್ದರು.

ಜಿಲ್ಲೆಯಲ್ಲಿ 52 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಸುಮಾರು ಲಕ್ಷ ಬೆಳೆಗಾರರು ಮಾವು ಬೆಳೆಯುತ್ತಾರೆ. ಅದರಲ್ಲೂ ಶೇ 70ರಷ್ಟು ಮಾವು ಬೆಳೆ ಇರುವುದು ‘ಮಾವಿನ ನಗರಿ’ ಶ್ರೀನಿವಾಸಪುರದಲ್ಲಿ. ಆದಾಗ್ಯೂ ಬೆಳೆ ವಿಮೆಗೆ ನೋಂದಾಯಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಲೇ ಇದೆ.

ಅತಿವೃಷ್ಟಿ, ಅನಾವೃಷ್ಟಿ ಮೊದಲಾದ ಪ್ರಕೃತಿ ವಿಕೋಪಗಳ ಸಂದರ್ಭ ರೈತರಿಗೆ ಆಗುವ ನಷ್ಟ ತಪ್ಪಿಸುವ ಸಲುವಾಗಿ ಸರ್ಕಾರವು ಪ್ರಧಾನಮಂತ್ರಿ ಫಸಲ್‌ ಬಿಮಾ (ವಿಮಾ) ಯೋಜನೆಯನ್ನು ಜಾರಿಗೆ ತಂದಿದೆ.

‘ಈ ವರ್ಷ ಮಳೆಯ ಅನಿಶ್ಚಿತತೆ ಇದ್ದು, ಇಂತಹ ಸಂದರ್ಭಗಳಲ್ಲಿ ವಿಮೆ ಬೆಳೆಗಾರರ ನೆರವಿಗೆ ಬರಲಿದೆ. ಭಾರಿ ಪ್ರಚಾರ ಕಾರ್ಯಕ್ರಮಗಳ ನಡುವೆಯೂ ರೈತರು ವಿಮೆಗೆ ಆಸಕ್ತಿ ತೋರದಿರುವುದು ಬೇಸರದ ಸಂಗತಿ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್‌.ಆರ್‌.ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳೆ ವಿಮೆ ಮಾಡಿಸುವಂತೆ ನಾವು ಒತ್ತಡ ಮಾಡುವಂತಿಲ್ಲ. ಆದರೆ, ವಿಮೆಯ ಉಪಯೋಗದ ಬಗ್ಗೆ ಬೆಳೆಗಾರರಲ್ಲಿ ಜಾಗೃತಿ ಮೂಡಿಸಲು ನಾವು ಸಾಕಷ್ಟು ಪ್ರಚಾರ ಕಾರ್ಯ ಕೈಗೊಂಡಿದ್ದೆವು’ ಎಂದರು.

2023-24ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು  ಅಧಿಸೂಚಿಸಲಾಗಿತ್ತು. ಜುಲೈ 31ಕ್ಕೆ ವಿಮಾ ನೋಂದಣಿ ಕೊನೆಗೊಂಡಿದೆ. ಜಿಲ್ಲೆಯ ಬಂಗಾರಪೇಟೆ, ಕೆ.ಜಿ.ಎಫ್. ಕೋಲಾರ, ಮಾಲೂರು, ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲ್ಲೂಕುಗಳನ್ನು ಒಳಪಡಿಸಲಾಗಿತ್ತು.

ಬೆಳೆ ವಿಮೆ ಮಾಡಿಸಿದ್ದರೆ ಪ್ರಕೃತಿ ವಿಕೋಪದಿಂದ ಶೇ 100ರಷ್ಟು ನಷ್ಟ ಉಂಟಾದಾಗ ಹೆಕ್ಟೇರ್‌ಗೆ ₹ 80 ಸಾವಿರ ಸಿಗುತ್ತದೆ. ಅಗ್ರಿಕಲ್ಚರ್‌ ಇನ್ಸುರೆನ್ಸ್‌ ಕಂಪನಿಗೆ ರೈತರು ಪಾವತಿಸಬೇಕಿದ್ದ ವಿಮಾ ಕಂತಿನ ಮೊತ್ತ ಹೆಕ್ಟೇರ್‌ ₹ 4 ಸಾವಿರ.

ಹವಾಮಾನ ಅಂಶಗಳಾದ ತಾಪಮಾನ, ಗಾಳಿಯ ವೇಗ, ಮಳೆಯ ಪ್ರಮಾಣ, ಆದ್ರತೆ ಇತ್ಯಾದಿ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆ ವಿಮಾ ನಷ್ಟವನ್ನು ತೀರ್ಮಾನಿಸಲಾಗುತ್ತದೆ.

ಆಲಿಕಲ್ಲು ಪರಿಹಾರ: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಮಾವು ಬೆಳೆಗೆ ವಿಮೆ ಮಾಡಿಸಿರುವ ರೈತರು ಆಲಿಕಲ್ಲು ಮಳೆ ಬಿದ್ದ 72 ಗಂಟೆಯೊಳಗೆ ವಿಮೆ ಕಂಪನಿಯಲ್ಲಿ ಬೆಳೆ ಹಾನಿ ಬಗ್ಗೆ ನೋಂದಾಯಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಇದಲ್ಲದೇ, ಅಕಾಲಿಕ ಮಳೆಯಿಂದ ಮಾವಿಗೆ ಹಾನಿ ಆಗಿದ್ದರೆ ಎನ್‌ಡಿಆರ್‌ಎಫ್‌ನಡಿ 1 ಹೆಕ್ಟೇರ್‌ ಬೆಳೆಗೆ ₹ 22 ಸಾವಿರ ಸಿಗುತ್ತದೆ.

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಹಲವಾರು ವರ್ಷಗಳಿಂದ ಮಾವು ಬೆಳೆಗಾರರು ಬೆಳೆ ನಷ್ಟ, ಬೆಲೆ ಏರುಪೇರು, ವಿಮೆ ತೊಂದರೆ ಸೇರಿದಂತೆ ವಿವಿಧ ಸಮಸ್ಯೆ ಎದುರಿಸುತ್ತಿದ್ದಾರೆ. ಪರಿಹಾರ ಸರಿಯಾಗಿ ಸಿಗುತ್ತಿಲ್ಲ. ಹಲವಾರು ರೋಗಗಳಿಗೆ ಬೆಳೆ ತುತ್ತಾಗುತ್ತಿದೆ. ಮಾರುಕಟ್ಟೆ ಸಮಸ್ಯೆ ನಿವಾರಣೆಗೆ ಜೊತೆಗೆ ಸಂಸ್ಕರಣಾ ಘಟಕ, ಶಿಥಿಲೀಕರಣ ಘಟಕ ಸ್ಥಾಪಿಸಬೇಕಿದೆ.

‘ವಿಮೆ ಕಂತಿನ ಮೊತ್ತ ಪಾವತಿಸಿದ್ದರೂ ಕಂಪನಿಗಳು ಬೆಳೆ ನಷ್ಟ ಪರಿಹಾರವನ್ನು ಸರಿಯಾಗಿ ತುಂಬಿಕೊಡುವುದಿಲ್ಲ, ಹೋರಾಟ ಮಾಡಿ ಪರಿಹಾರ ಪಡೆಯಬೇಕಾದ ಪರಿಸ್ಥಿತಿ ಬರುತ್ತದೆ’ ಎಂದು ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪ ರೆಡ್ಡಿ ದೂರುತ್ತಾರೆ. 

ರಾಜ್ಯದಲ್ಲಿ 16 ಲಕ್ಷ ಟನ್‌ ಮಾವು ಬೆಳೆಯುತ್ತಾರೆ. ಇದರಲ್ಲಿ 10 ಲಕ್ಷ ಟನ್‌ ಕೋಲಾರ ಜಿಲ್ಲೆಯಿಂದಲೇ ಬರುತ್ತದೆ. ಅದರಲ್ಲೂ ಶ್ರೀನಿವಾಸಪುರ ತಾಲ್ಲೂಕಿನದ್ದು ಸಿಂಹಪಾಲು (6 ಲಕ್ಷ ಟನ್‌).

ಮಾವು ಬೆಳೆ ವಿಮೆಗೆ ಈ ಸಲ ಕಡಿಮೆ ನೋಂದಣಿ ಆಗಿದೆ. ಕಳೆದ ವರ್ಷ ಪರಿಹಾರ ಪಡೆಯಲು ಮಾನದಂಡ ಪೂರೈಕೆ ಆಗದ ಕಾರಣ ಕೆಲವರಿಗೆ ಶೂನ್ಯ ಪರಿಹಾರ ಬಂದಿದ್ದು ನಿರಾಸಕ್ತಿಗೆ ಕಾರಣ
-ಎಸ್‌.ಆರ್‌.ಕುಮಾರಸ್ವಾಮಿ ಉಪನಿರ್ದೇಶಕ ತೋಟಗಾರಿಕೆ ಇಲಾಖೆ
ವಿಮೆ ಕಂಪನಿಯವರು ತಮಗೆ ಬೇಕಾದಂತೆ ಕಾನೂನು ರೂಪಿಸಿಕೊಂಡಿರುತ್ತಾರೆ. ರೈತರ ತೊಂದರೆ ಬಗ್ಗೆ ಆಲೋಚನೆ ಮಾಡುವುದಿಲ್ಲ. ಬೆಳೆ ನಷ್ಟವನ್ನೂ ಸರಿಯಾಗಿ ಪಾವತಿಸುವುದಿಲ್ಲ
-ಚಿನ್ನಪ್ಪ ರೆಡ್ಡಿ ಅಧ್ಯಕ್ಷ ಜಿಲ್ಲಾ ಮಾವು ಬೆಳೆಗಾರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT