ಬಂಗಾರಪೇಟೆ: ತಾಲ್ಲೂಕಿನ ಸೂಲಿಕುಂಟೆ ಪಂಚಾಯಿತಿ ವ್ಯಾಪ್ತಿಯ ಅಕ್ಷತ್ರಗೊಲ್ಲಹಳ್ಳಿಯ ಸರ್ವೆ ನಂ. 12ರ 2 ಎಕರೆ 34 ಗುಂಟೆ ಪೈಕಿ ಅಂಬೇಡ್ಕರ್ ಭವನ ಹಾಗೂ ಪ್ರತಿಮೆ ನಿರ್ಮಾಣಕ್ಕಾಗಿ 10 ಗುಂಟೆ ಜಮೀನು ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಪ್ರಜಾಶಕ್ತಿ ಸೇವಾ ಸಂಘದ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ಕಾವರನಹಳ್ಳಿ ಜಿ. ಬ್ಯಾಟಪ್ಪ ಅವರು ಶಿರಸ್ತೇದಾರ್ ಚಂದ್ರಶೇಖರ್ ಮೂಲಕ ಮುಖ್ಯ ಕಾರ್ಯದರ್ಶಿಗೆ ಮನವಿ ನೀಡಿದರು.
ಸ್ವಾತಂತ್ರ್ಯ ಬಂದು ಆರೂವರೆ ದಶಕವಾದರೂ ದಲಿತರಿಗೆ ಮನ್ನಣೆ ದೊರೆತಿಲ್ಲ. ಜಾತಿಭೇದ ಇನ್ನೂ ಹೋಗಿಲ್ಲ. ಮೀಸಲು ಕ್ಷೇತ್ರದಲ್ಲೇ ಇಂತಹ ಪರಿಸ್ಥಿತಿ ಇರುವುದು ದುರಂತವೇ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡ ಪ್ರೇಮ್ಕುಮಾರ್ ಮಾತನಾಡಿ, ಇದೇ ಗ್ರಾಮದ ಕೆಲವರು ಜಾತಿ ನಿಂದನೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಸದರಿ ಜಮೀನನ್ನು ವಶಪಡಿಸಿಕೊಳ್ಳುವುದಕ್ಕೆ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಸೂಲಿಕುಂಟೆ ಗ್ರಾಮ ಪಂಚಾಯಿತಿಯಿಂದ ಪಿಐಡಿ ಸಂಖ್ಯೆಯಿಲ್ಲದೆ ಸರ್ಕಾರಿ ಜಾಗಕ್ಕೆ ಇ-ಖಾತೆ ಮಾಡಲಾಗುತ್ತಿದೆ. ಈ ತನಕ ಸುಮಾರು 10 ಮನೆಗಳಿಗೆ ಖಾತೆ ಮಾಡಲಾಗಿದೆ ಎಂದರು.
ರೈತ ಸಂಘದ ಮುಖಂಡ ತಿಮ್ಮಾಪುರ ನಾಗರಾಜ್, ಆಂಜಪ್ಪ, ಕೋಕಿಲ, ಜಯಮ್ಮ, ನಾಗರಾಜ್, ಹಾಗೂ ಗ್ರಾಮಸ್ಥರು ಇದ್ದರು.