ಕೊಪ್ಪಳ: ಕೊವೀಡ್ ಮಾರ್ಗಸೂಚಿ ಪಾಲನೆ ಹಿನ್ನೆಲೆಯಲ್ಲಿ ಪೊಲೀಸರು ವಿವಿಧೆಡೆ ಮಾರ್ಗಗಳನ್ನು ಬಂದ್ ಮಾಡಿ ಅನಗತ್ಯ ಸಂಚಾರ ನಡೆಸದಂತೆ ತಡೆವೊಡ್ಡಿದರು.
ಗದಗ ಮಾರ್ಗದ ಮೂಲಕ ನಗರವನ್ನು ಸಂಪರ್ಕಿಸುವ ಜಿಲ್ಲಾ ಕ್ರೀಡಾಂಗಣದ ಬಳಿ ಚೆಕ್ ಪೋಸ್ಟ್ ಸ್ಥಾಪಿಸಿ ಬಿಗಿ ಬಂದೋಬಸ್ತ್ ಮಾಡಲಾಗುತ್ತು.
ಕಳೆದ 14 ದಿನಗಳ ಹಾಗೆ ದಿನದೂಡಿದ್ದ ಜನರಿಗೆ ಕಠಿಣ ಲಾಕ್ಡೌನ್ ಅನುಭವ ಉಂಟಾಗುತ್ತಿದ್ದು ಅನಗತ್ಯ ಸಂಚಾರ ತಡೆಯುವ ಉದ್ದೇಶದಿಂದ ವಿವಿಧಡೆ ಕಾವಲು ಕಾಯುತ್ತಿದ್ದಾರೆ.
ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ: ಬೆಳಿಗ್ಗೆಯಿಂದಲೇ ಜವಾಹರ ರಸ್ತೆ, ಜೆಪಿ ಮಾರುಕಟ್ಟೆ ಬಳಿ, ಕೇಂದ್ರ ಬಸ್ ನಿಲ್ದಾಣದ ಎದುರು ಜನ ಖರೀದಿಗೆ ಮುಗಿಬಿದ್ದರು. ಅವಧಿ ಮುಗಿದ ನಂತರ ತೆರಳದ ಜನರನ್ನು ಪೊಲೀಸರು ಲಾಠಿ ಪ್ರಹಾರ ನೆಡಸುವ ಮೂಲಕ ಚದುರಿಸಿದರು.
ಕಚೇರಿ, ಆಸ್ಪತ್ರೆಗೆ ತೆರಳುವವರು ಗುರುತಿನ ಚೀಟಿ ತೋರಿಸಿ ಮುಂದೆ ಹೋಗುವಂತೆ ಆಯಿತು. ನಗರದ ಆಯಕಟ್ಟಿನ ಜಾಗದಲ್ಲಿ ಕಾವಲು ಕಾಯುತ್ತಿದ್ದು, ಒಳದಾರಿಯ ಮೂಲಕ ಜನರು ಓಡಾಡುತ್ತಿರುವುದು ಕಂಡುಬಂತು.
ಬಿಗಿಯಾದ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು, ಎಸ್. ಪಿ.ಟಿ.ಶ್ರೀಧರ್ ನೇತೃತ್ವದಲ್ಲಿ ವಿವಿಧೆಡೆ ಪೊಲೀಸ್ ವಾಹನಗಳು ಪರಿಶೀಲನೆ ನಡೆಸಿದರು.
ಶಾಸಕರಿಂದಜಾಗೃತಿ ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಕುಷ್ಟಗಿ ಪಟ್ಟಣದ ವಿವಿಧ ಮಾರುಕಟ್ಟೆ ಪ್ರದೇಶಗಳಲ್ಲಿ ಖರೀದಿಗೆಹ ಮುಗಿಬಿದ್ದಿದ್ದ ಜನರಿಗೆ ಸ್ವತಃ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ರಸ್ತೆಗೆ ಇಳಿದು ಕೊರೊನಾ ಜಾಗೃತಿ ಮೂಡಿಸಿದರು.
ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಮಾಸ್ಕ್ ಹಾಕಿಕೊಳ್ಳುವಂತೆ, ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.