ಕೊಪ್ಪಳ: ಭಾರತದ ವಿಜ್ಞಾನಿಗಳ ಚಂದ್ರಯಾನ-3 ಅದ್ಭುತ ಸಾಧನೆಯನ್ನು ಜಗತ್ತೇ ಮೆಚ್ಚಿಕೊಂಡಿದೆ. ಚಂದಿರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ನಿರ್ವಹಿಸಿದ ಪಾತ್ರದ ಬಗ್ಗೆ ಎಲ್ಲೆಡೆಯೂ ಮೆಚ್ಚುಗೆಯಾಗಿದೆ. ಆ ಸಾಧನೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನಗರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
ಓಜನಹಳ್ಳಿಗೆ ಹೋಗುವ ಮಾರ್ಗದಲ್ಲಿರುವ ಕಲಾಲ್ ವಾಲ್ಟರ್ ಫೀಲ್ಟರ್ ಬಳಿ ಗಜಾನನ ಕೆಜಿಎಫ್ ಗೆಳೆಯರ ಬಳಗ ಚಂದಿರನ ಅಂಗಳದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದು ಜನರ ಗಮನ ಸೆಳೆಯುತ್ತಿದೆ. ಇದೇ ರೀತಿ ನಗರದ ವಿವಿಧೆಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ನಿತ್ಯ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಇಲ್ಲಿನ ಕೋಟೆ ರಸ್ತೆಯಲ್ಲಿ ವಿನಾಯಕ ಮಿತ್ರಮಂಡಳಿಯಿಂದ ಚಂದ್ರಾರೂಢ ಗಜಾನನ, ಮಿಟ್ಟಿಕೇರಿ ಓಣಿಯಲ್ಲಿ ಏಕದಂತ ವಿನಾಯಕ ಮಿತ್ರ ಮಂಡಳಿಯಿಂದ ಗಣಾಧ್ಯಕ್ಷ, ದೇವರಾಜ್ ಅರಸ್ ಕಾಲೊನಿಯಲ್ಲಿ ಕೊಪ್ಪಳ ಕಾ ಸಾಮ್ರಾಟ್ ಗೆಳೆಯರ ಬಳಗದಿಂದ ಪಾರ್ವತಿನಂದನ, ಅಂಬೇಡ್ಕರ್ ಸರ್ಕಲ್ ಬಳಿಯ ಬಸವೇಶ್ವರ ನಗರದಲ್ಲಿ ಬುದ್ಧಿನಾಥ ಮಿತ್ರ ಮಂಡಳಿಯಿಂದ ಶಿವಸುತ, ಕೊಪ್ಪಳ ಕಾ ರಾಜಾ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿರುವ ಲಂಬೋಧರ, ವಡ್ಡರ ಓಣಿಯಲ್ಲಿ ಸಿದ್ಧರಾಮೇಶ್ವರ ವಿನಾಯಕ ಮಿತ್ರಮಂಡಳಿ, ಕಾವ್ಯಾನಂದ ಉದ್ಯಾನದಲ್ಲಿ ಹಿಂದೂ ಮಹಾ ಮಂಡಳಿಯಿಂದ, ಮೇದಾರ ಕೇತೇಶ್ವರ ಯುವಕ ಮಂಡಳಿಯಿಂದ ಪ್ರತಿಷ್ಠಾಪನೆಗೊಂಡಿರುವ ಗರುಡಾರೂಢ ವಿಷ್ಣು, ಲಕ್ಷ್ಮಿ ದೇವರನ್ನು ಒಳಗೊಂಡ ಏಕದಂತ ಮತ್ತು ಗಡಿಯಾರಕಂಬ ಗಜಾನನ ಮಿತ್ರಮಂಡಳಿಯಿಂದ ಪ್ರತಿಷ್ಠಾಪನೆಗೊಂಡಿರುವ ಪಂಜುರ್ಲಿ ದೈವದ ಹಿನ್ನೆಲೆ ಹೊಂದಿರುವ ಬೆನಕ ಹೀಗೆ ಅನೇಕ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಸಂಜೆಯಾಗುತ್ತಿದ್ದಂತೆಯೇ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಜಾಗದಲ್ಲಿ ಸಾಂಸ್ಕೃತಿಕ ಕಲರವ ಅನಾವರಣಗೊಳ್ಳುತ್ತದೆ. ಬಣ್ಣಬಣ್ಣದ ವಿದ್ಯುತ್ ದೀಪಗಳ ಹೊಳಪು, ಸಂಗೀತ ಕಾರ್ಯಕ್ರಮಗಳು ಎಲ್ಲರನ್ನೂ ಸೆಳೆಯುತ್ತಿವೆ. ಕೊಪ್ಪಳ ಕಾ ರಾಜಾ ಗೆಳೆಯರ ಬಳಗದಿಂದ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರದ ಪ್ರತಿಕೃತಿಯನ್ನು ನಿರ್ಮಿಸಲಾಗಿದ್ದು ಇದು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.