ಕೊಪ್ಪಳ: ಜಿಲ್ಲೆಯ ಕುಕನೂರು ತಾಲ್ಲೂಕಿನ ಭಾನಾಪುರ ಬಳಿ ಶನಿವಾರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐದು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೊಪ್ಪಳದಲ್ಲಿ ಆಯೋಜನೆ ಆಗಿದ್ದ ಕುಟುಂಬದವರ ಜನ್ಮದಿನದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಯಲಬುರ್ಗಾ ತಾಲ್ಲೂಕಿನ ಬಿನ್ನಾಳ ಗ್ರಾಮಕ್ಕೆ ವಾಪಸ್ ಹೋಗುವಾಗ ಅವಘಡ ಸಂಭವಿಸಿದೆ. ಸ್ಕಾರ್ಪಿಯೋ ವಾಹನ ನಜ್ಜುಗುಜ್ಜಾಗಿದೆ.
ವಾಹನದಲ್ಲಿ ಒಟ್ಟು ಒಂಬತ್ತು ಜನ ಇದ್ದರು.
ನಿವೃತ್ತ ಸೈನಿಕ ಶರಣಪ್ಪ ಕೊಪ್ಪದ ಅವರ ಮೊಮ್ಮಗಳ ಜನ್ಮದಿನದ ಸಮಾರಂಭದಲ್ಲಿ ಪಾಲ್ಗೊಂಡು ವಾಪಸ್ ಹೋಗುವಾಗ ಈ ಘಟನೆ ಜರುಗಿದೆ.
ಬಿನ್ನಾಳ ಗ್ರಾಮದ ದೇವಪ್ಪ ಕೊಪ್ಪದ (62), ಗಿರಿಜಮ್ಮ (45), ಶಾಂತಮ್ಮ (32), ಪಾರ್ವತಮ್ಮ(32), ಕಸ್ತೂರಿ (22) ಮೃತಪಟ್ಟವರು.
ಪಲ್ಲವಿ (28), ಪುಟ್ಟರಾಜ (7),ಚಾಲಕ ಹರ್ಷವರ್ಧನ (35) ಹಾಗೂ ಭೂಮಿಕಾ (5) ಗಂಭೀರವಾಗಿ ಪಾಲ್ಗೊಂಡಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಚೆಕ್ ಪೋಸ್ಟ್, ಟೋಲ್ ಗಳ ಮೇಲೆ ನಿಗಾ
ಕೊಪ್ಪಳ: ಜಿಲ್ಲೆಯ ಭಾನಾಪುರ ಸಮೀಪ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಟ್ ಆ್ಯಂಡ್ ರನ್ ಮಾಡಿದ ವಾಹನ ಸವಾರನ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷಿ ಗಿರಿ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ್ಮ ದಿನಾಚರಣೆ ಸಂಬಂಧ ಬಿನ್ನಾಳ ಗ್ರಾಮದಿಂದ 9 ಜನರು ಕೊಪ್ಪಳಕ್ಕೆ ಬಂದಿದ್ದರು. ಮರಳಿ ಸ್ವ ಗ್ರಾಮಕ್ಕೆ ತೆರಳುವಾಗ ಈ ದುರ್ಘಟನೆ ನಡೆದಿದೆ. ವಾಹನದಲ್ಲಿ ಒಟ್ಟು 9 ಜನ ಇದ್ದರು. ಈ ಪೈಕಿ ಐದು ಜನ ಮೃತ ಪಟ್ಟಿದ್ದಾರೆ. ಭಾನಾಪುರ ಬಳಿಯ ಗೊಂಬೆ ತಯಾರಿಕಾ ಫ್ಯಾಕ್ಟರಿ ಹತ್ತಿರ ಘಟನೆ ನಡೆದಿದೆ. ಗಾಯಗೊಂಡ ನಾಲ್ಕು ಜನರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಈ ಪೈಕಿ ಒಬ್ಬರು ಗಂಭೀರವಾಗಿದ್ದಾರೆ ಎಂದರು.
ಮೃತರು ಪೊಲೀಸ್ ಇಲಾಖೆಯ ಡಿಎಆರ್ ಸಿಬ್ಬಂದಿಯ ಸಂಬಂಧಿ ಆಗಿದ್ದಾರೆ. ಸ್ಕಾರ್ಪಿಯೊಗೆ ಲಾರಿ ಅಥವಾ ಟಿಪ್ಪರ್ ಗುದ್ದಿ ಹೋಗಿರುವ ಶಂಕೆಯಿದೆ.
ಟೋಲ್ ಗೇಟ್ ಹಾಗೂ ಉಳಿದ ಜಿಲ್ಲೆಯ ನೈಟ್ ಪೊಲೀಸ್ ಸಿಬ್ಬಂದಿಗೂ ವಾಹನ ಪತ್ತೆಗೆ ಸೂಚನೆ ನೀಡಿದ್ದೇವೆ. ಸಮಗ್ರ ತನಿಖೆಯದ ಈ ಅಪಘಾತ ಪ್ರಕರಣದಲ್ಲಿ ಯಾರದ್ದು ತಪ್ಪಿದೆ ಎಂಬುದು ಎಲ್ಲ ರೀತಿಯ ತನಿಖೆಯಿಂದ ತಿಳಿದು ಬರಲಿದೆ ಎಂದರು.
ಜಿಲ್ಲಾಸ್ಪತ್ರೆಗೆ ಭೇಟಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.