ಬದುಕು ಬದಲಿಸಿದ ಅಂಜೂರ: ಕೈಹಿಡಿದ ಆನ್ಲೈನ್ ಮಾರುಕಟ್ಟೆ

ಅಳವಂಡಿ: ಸಮೀಪದ ಡಂಬ್ರಳ್ಳಿ ಗ್ರಾಮದ ರೈತ ಆನಂದರಡ್ಡಿ ಲಾಕ್ಡೌನ್ ಕಾರಣ ತಮ್ಮ ಜಮೀನಿನಲ್ಲಿ ಬೆಳೆದ ಅಂಜೂರ ಹಣ್ಣನ್ನು ಆನ್ಲೈನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಾಭಗಳಿಸಿ ಇತರ ರೈತರಿಗೆ ಮಾದರಿಯಾಗಿದ್ದಾರೆ.
ಎರಡು ವರ್ಷಗಳ ಹಿಂದೆ ಗ್ರಾಮದ ಹೊರವಲಯದ ತಮ್ಮ 2.5 ಎಕರೆ ಜಮೀನಿನಲ್ಲಿ ₹15 ರಂತೆ 800 ಅಂಜೂರ ಹಣ್ಣಿನ ಗಿಡ ನಾಟಿ ಮಾಡಿದ್ದರು. ಕೊಟ್ಟಿಗೆ ಗೊಬ್ಬರ, ಉಳುಮೆ, ಗುಂಡಿ ತೆಗೆಯುವುದು ಸೇರಿ ₹1.70 ಲಕ್ಷ ಖರ್ಚು ಮಾಡಿದ್ದರು.
ಮೊದಲನೇ ವರ್ಷ ಇಳುವರಿ ಕಡಿಮೆಯಾದರೂ ಕೆ.ಜಿಗೆ ₹30ರ ದರದಲ್ಲಿ ಮಾರಾಟ ಮಾಡಿದ್ದರಿಂದ ಅಂದಾಜು ₹1 ಲಕ್ಷ ಗಳಿಸಿದ್ದಾರೆ. ನಂತರದ ವರ್ಷದಲ್ಲಿ ಗೊಬ್ಬರ ಖರ್ಚು ಹೊರತುಪಡಿಸಿ, ಇತರೆ ಖರ್ಚು ಕಡಿಮೆಯಾಗಿದೆ. 2ನೇ ವರ್ಷ ಕೆಜಿಗೆ ₹40 ಸಿಕ್ಕಿದ್ದರಿಂದ ಲಾಭದತ್ತ ಮುಖಮಾಡಿದ್ದಾರೆ.
ಮೂರನೇ ಇಳುವರಿ ಬರುವ ಸಂದರ್ಭದಲ್ಲಿಯೇ ಲಾಕ್ಡೌನ್ ಜಾರಿಯಾದ್ದರಿಂದ ಹಾನಿ ಆಗುವ ಆತಂಕ ಕಾಡಿತ್ತು. ಆದರೆ ಆನ್ಲೈನ್ ಮೂಲಕ ಅಂಜೂರಕ್ಕೆ ಬೇಡಿಕೆ ಬಂದಿದ್ದರಿಂದ ಕೆಜಿಗೆ ₹60ರಂತೆ ಮಾರಾಟ ಮಾಡಿದ್ದಾರೆ. ಅಲ್ಲದೆ ಗ್ರಾಮದ ಸುತ್ತಮುತ್ತಲಿನ ಗ್ರಾಹಕರ ಬೇಡಿಕೆಗಳನ್ನು ಆಧರಿಸಿ ಮೊಬೈಲ್ ಮೂಲಕ ಸಂಪರ್ಕಿಸಿ ಮನೆ, ಮನೆಗೆ ₹30 ಕ್ಕೆ ಕೆಜಿಯಂತೆ ಹಣ್ಣುಗಳನ್ನು ತಲುಪಿಸುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ದೇಶದಾದ್ಯಂತ ಕೊರೊನಾ ಹಾವಳಿ ಹೆಚ್ಚಿದೆ. ಮೇಲಿಂದ ಮೇಲೆ ಲಾಕ್ಡೌನ್ ಆಗುತ್ತಿರುವುದರಿಂದ ಹೆಚ್ಚಿನ ಲಾಭ ಗಳಿಸುವ ಅವಕಾಶ ಕೈತಪ್ಪಿ ಹೋಗಿದೆ.
ಆನ್ಲೈನ್ ಮಾರುಕಟ್ಟೆ ಹೇಗೆ: ಅವಶ್ಯಕತೆ ಇರುವ ಜನರಿಗೆ ಸಾಮಾಜಿಕ ಜಾಲತಾಣದ ಮೂಲಕ ಬೇಡಿಕೆಗೆ ಅನುಸಾರವಾಗಿ ವೈಯಕ್ತಿಕವಾಗಿ ತಲುಪಿಸುವುದು, ತೋಟಗಾರಿಕೆ ಇಲಾಖೆಯ ರೈತ ಸಂತೆ, ಹಣ್ಣಿನ ಆನ್ಲೈನ್ ಮಾರುಕಟ್ಟೆ, ವಿವಿಧ ಔಷಧಕ್ಕೆ ಸರಬರಾಜು ಮಾಡುವ ಕಂಪನಿಗಳನ್ನು ಸಂಪರ್ಕಿಸಿ ಮಾರಾಟ ಮಾಡುವುದು.
ಹಣ್ಣಿನ ಬೆಳೆ, ವಿಶೇಷತೆ ಕುರಿತು ಮೊದಲೇ ಮಾಹಿತಿ ಹಂಚಿಕೊಂಡು ಮುಂಗಡ ಹಣ ಪಾವತಿಸಿದರೆ ಅವರಿಗೆ ನೇರವಾಗಿ ಅಂಜೂರಗಳನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಿಕೊಡಲಾಗಿತ್ತು.
ಆನಂದ ರಡ್ಡಿ ಗ್ರಾಮದ ಪ್ರಗತಿಪರ ಕೃಷಿಕರಾಗಿದ್ದಾರೆ. ತಮ್ಮ ಜಮೀನಿನಲ್ಲಿ ಹಲವಾರು ಪ್ರಯೋಗಗಳ ಮೂಲಕ ರೈತ ವಲಯದಲ್ಲಿ ಹೆಸರು ಮಾಡಿದ್ದಾರೆ ಎನ್ನುವುದು ಜನರ ಅಭಿಪ್ರಾಯ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.