ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಂತ್ರಣಕ್ಕೆ ಬಾರದ ಕೊರೊನಾ: ನಿಲ್ಲದ ಲೂಟಿ

ಪ್ಲಾಸ್ಮಾ ರಕ್ತದಾನ ಕೇಂದ್ರದ ಉದ್ಘಾಟನೆಯಲ್ಲಿ ಸಿದ್ದರಾಮಯ್ಯ ವಾಗ್ದಾಳಿ: ಎಚ್ಚರಿಕೆಯ ಪಾಠ
Last Updated 19 ಸೆಪ್ಟೆಂಬರ್ 2020, 2:04 IST
ಅಕ್ಷರ ಗಾತ್ರ

ಮೈಸೂರು: ‘ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ರಾಜ್ಯದಾದ್ಯಂತ ದಿನೇ ದಿನೇ ಹೆಚ್ಚುತ್ತಿರುವುದು ಒಂದೆಡೆಯಾದರೆ; ಮತ್ತೊಂದೆಡೆ ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ಲೂಟಿ ನಿಲ್ಲದಾಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ಇಲ್ಲಿ ವಾಗ್ದಾಳಿ ನಡೆಸಿದರು.

ಕೆಪಿಸಿಸಿಯ ವೈದ್ಯರ ಘಟಕ ನಗರದ ಉದಯಗಿರಿಯಲ್ಲಿರುವ ಕೂಬಾ ಕೋವಿಡ್ ಹೆಲ್ತ್‌ಕೇರ್‌ ಸೆಂಟರ್‌ನಲ್ಲಿ ಆರಂಭಿಸಿದ ಪ್ಲಾಸ್ಮಾ ರಕ್ತದಾನ ಕೇಂದ್ರಕ್ಕೆ ಚಾಲನೆ ನೀಡಿದ ಅವರು, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತ್ರ ಇದ್ಯಾವುದಕ್ಕೂ ನನಗೂ ಸಂಬಂಧವೇ ಇಲ್ಲ ಎಂಬಂತೆ ನವಿಲಿಗೆ ಮೇವು ಹಾಕಿಕೊಂಡು ಕುಳಿತಿದ್ದಾರೆ’ ಎಂದು ಲೇವಡಿ ಮಾಡಿದರು.

‘ಕೋವಿಡ್ ನಿಯಂತ್ರಿಸುವಲ್ಲಿ ಮೋದಿ, ಯಡಿಯೂರಪ್ಪ ಇಬ್ಬರೂ ವಿಫಲರಾಗಿದ್ದಾರೆ. ಅಮೆರಿಕ ನಂತರದ ಸ್ಥಾನ ಭಾರತದ್ದಾಗಿದೆ. 52 ಲಕ್ಷ ಜನರಿಗೆ ಸೋಂಕು ತಗುಲಿದೆ. 21 ದಿನದಲ್ಲಿ ಕೊರೊನಾ ವೈರಸ್ ನಿರ್ಮೂಲನೆ ಮಾಡುವುದಾಗಿ ಪ್ರಧಾನಿ ಹೇಳಿದ್ದರು. ಆದರೆ ಐದಾರು ತಿಂಗಳು ಕಳೆದರೂ ನಿಯಂತ್ರಣಕ್ಕೆ ಬಂದಿಲ್ಲ. ದೇಶವನ್ನೇ ಹಾಳು ಮಾಡುತ್ತಿದ್ದಾರೆ. ದಕ್ಷಿಣ ಕೊರಿಯಾ, ನ್ಯೂಜಿಲೆಂಡ್‌ನಲ್ಲಿ ಈ ಸೋಂಕು ಶ್ಯೂನಕ್ಕಿಳಿದಿದೆ’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

‘ಮೈಸೂರಿನಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಸರ್ಕಾರ ಇದೂವರೆಗೂ ಪ್ಲಾಸ್ಮಾ ರಕ್ತದಾನ ಕೇಂದ್ರ ತೆರೆದಿಲ್ಲ. ಕೋವಿಡ್ ನಿಯಂತ್ರಿಸಿ ಎಂದರೇ ಎಲ್ಲದರಲ್ಲೂ ಲೂಟಿ ಮಾಡಲು ನಿಂತಿದ್ದಾರೆ. ಅಧಿವೇಶನದ ಮೊದಲ ದಿನವೇ ಈ ವಿಷಯ ಪ್ರಸ್ತಾಪಿಸಿ, ತರಾಟೆಗೆ ತೆಗೆದುಕೊಳ್ಳುವೆ’ ಎಂದು ಅವರು ಹೇಳಿದರು.

ಪ್ಲಾಸ್ಮಾ ರಕ್ತದಾನ ಜೀವದಾನ: ‘ಒಮ್ಮೆ ಕೊರೊನಾ ಸೋಂಕು ಬಂದರೇ, ಮತ್ತೆ ಬರೋಲ್ಲ ಅನ್ನೋದು ಸುಳ್ಳು. ಕೋವಿಡ್‌ ಬಗ್ಗೆ ಲಸಿಕೆ ಬರೋವರೆಗೂ ಭಯವಿರಬೇಕು. ಜೊತೆಗೆ ಎಚ್ಚರವಿರಬೇಕು’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ಕನಿಷ್ಠ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಸುವುದನ್ನು ಬಿಟ್ಟರೇ, ಸದ್ಯಕ್ಕೆ ಇದಕ್ಕೆ ಬೇರಾವ ಮದ್ದಿಲ್ಲ. ರೋಗ ನಿರೋಧಕ ಶಕ್ತಿ ಇರೋರಿಗೆ ಸೋಂಕು ಬೇಗ ತಗುಲಲ್ಲ. ವಿವಿಧ ಕಾಯಿಲೆಗಳಿರುವವರು, 60 ವರ್ಷ ಮೇಲ್ಪಟ್ಟವರು ಹುಷಾರಾಗಿರಬೇಕು’ ಅಂತ ಕಿವಿಮಾತು ಹೇಳಿದರು.

‘ಹಳೇ ರೋಗಿ ಹೊಸ ಡಾಕ್ಟರ್‌ಗಿಂತ ಮೇಲೂ ಎಂಬಂತೆ, ನಾನು ಆಸ್ಪತ್ರೆಯಲ್ಲಿ ಎಲ್ಲವನ್ನೂ ವಿಚಾರಿಸಿಕೊಂಡಿದ್ದೇನೆ. ಉಸಿರಾಟದಲ್ಲಿ ಸ್ವಲ್ಪ ತೊಂದರೆಯಾದರೂ ನಿರ್ಲಕ್ಷಿಸಬೇಡಿ. ಧೈರ್ಯವಾಗಿದ್ದರೆ ಏನೂ ಆಗಲ್ಲ. 60 ವರ್ಷ ಮೇಲ್ಪಟ್ಟವರು ಪ್ಲಾಸ್ಮಾ ರಕ್ತದಾನ ಮಾಡುವಂತಿಲ್ಲ. ಪ್ಲಾಸ್ಮಾ ರಕ್ತದಾನದಿಂದ ಮತ್ತೊಬ್ಬರ ಪ್ರಾಣ ಉಳಿಯಲಿದೆ’ ಎಂದು ತಿಳಿಸಿದರು.

ಶಾಸಕ ತನ್ವೀರ್‌ ಸೇಠ್, ಮಾಜಿ ಶಾಸಕರಾದ ವಾಸು, ಸೋಮಶೇಖರ್ ಉಪಸ್ಥಿತರಿದ್ದರು.

ಕೋವಿಡ್‌: ಎಚ್ಚರಿಕೆ ಪಾಲಿಸಿದ ಸಿದ್ದರಾಮಯ್ಯ
ಕೂಬಾ ಕೋವಿಡ್‌ ಹೆಲ್ತ್‌ ಕೇರ್‌ ಸೆಂಟರ್‌ನಲ್ಲಿ ಪ್ಲಾಸ್ಮಾ ರಕ್ತದಾನ ಕೇಂದ್ರ ಉದ್ಘಾಟಿಸಿದ ಬಳಿಕ ವೇದಿಕೆಗೆ ಬಂದ ಸಿದ್ದರಾಮಯ್ಯ ಕನಿಷ್ಠ ಅಂತರ ಕಾಪಾಡಿಕೊಂಡರು. ಕೈಗೆ ಗ್ಲೌಸ್, ಮಾಸ್ಕ್, ಫೇಸ್‌ ಮಾಸ್ಕ್ ಧರಿಸಿದ್ದರು. ಪದೇ ಪದೇ ಸ್ಯಾನಿಟೈಸ್ ಮಾಡಿಕೊಂಡರು. ಸಂಘಟಕರು ಹಾರ ಹಾಕಲು ಮುಂದಾದರೂ ಸ್ವೀಕರಿಸಲಿಲ್ಲ.

ತಮ್ಮ ಭಾಷಣದಲ್ಲಿ ಆರೋಗ್ಯದ ಕಾಳಜಿಯನ್ನು ಒತ್ತಿ ಹೇಳಿದರು. ಪೋಡಿಯಂ ಬಳಿ ತೆರಳಿ ಮಾತನಾಡದೆ, ಕುಳಿತಲ್ಲೇ ಮಾತನಾಡಿದರು. ಮೈಕ್ ಸ್ಯಾನಿಟೈಸ್‌ ಮಾಡಿಕೊಂಡ ಬಳಿಕವೇ ಬಳಸಿದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT