ಮೈಸೂರು: ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಬಡವರ ಮನೆಯ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಬಾರದು ಎಂದು ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ಯುಸಿಐ) ಕಾರ್ಯಕರ್ತರು ಇಲ್ಲಿನ ಪಾಲಿಕೆ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
ಕೋವಿಡ್ ನಂತರ ಬಡವರು ಮತ್ತು ಮಧ್ಯಮ ವರ್ಗದವರ ಜೀವನ ದುಸ್ತರಗೊಂಡಿದೆ. ಕಾರ್ಮಿಕರಿಗೆ ವೇತನ ಕಡಿತಗೊಂಡು ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಬೆಲೆ ಏರಿಕೆ ಹಿಂದೆಂದಿಗಿಂತಲೂ ಹೆಚ್ಚಾಗಿ ಜನರ ಜೀವನ ಕಷ್ಟಕರವಾಗಿ ಪರಿಣಮಿಸಿದೆ. ಇಂತಹ ಹೊತ್ತಿನಲ್ಲಿ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಪಾಲಿಕೆ ಸಿಬ್ಬಂದಿ ಬಡವರ ಮನೆಯ ಕುಡಿಯುವ ನೀರಿನ ಸಂಪರ್ಕವನ್ನೇ ಕಡಿತ ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಜೀವನ ನಿರ್ವಹಣೆ ದುಬಾರಿಯಾಗಿರುವ ಈ ಹೊತ್ತಿನಲ್ಲಿ ಕಾರ್ಮಿಕರು, ಆಟೊ ಚಾಲಕರು, ಬಡವರು, ಮಧ್ಯಮವರ್ಗದವರ ಬಳಿ ನೀರಿನ ಶುಲ್ಕ ಪಾವತಿಸಲು ಹಣ ಇಲ್ಲ. ಕುಡಿಯುವ ನೀರಿಗೆ ತತ್ವಾರ ಉಂಟಾಗುವ ಸ್ಥಿತಿ ಇದೆ ಎಂದು ಅವರು ಕಿಡಿಕಾರಿದರು.
ಕಾರ್ಖಾನೆಗಳು, ವಾಣಿಜ್ಯೋದ್ಯಮಿಗಳು, ಶ್ರೀಮಂತರು, ರಾಜಕಾರಣಿಗಳು ಲಕ್ಷಗಟ್ಟಲೆ ಬಿಲ್ನ್ನು ಬಾಕಿ ಉಳಿಸಿಕೊಂಡಿದ್ದಾರೆ. ಮೊದಲು ಇವರ ನೀರಿನ ಸಂಪರ್ಕ ಕಡಿತ ಮಾಡಬೇಕು. ಆದರೆ, ಪಾಲಿಕೆ ಇವರನ್ನು ಬಿಟ್ಟು ಕೇವಲ ಬಡವರು ಮತ್ತು ಮಧ್ಯಮವರ್ಗದವರನ್ನೇ ಗುರಿಯಾಗಿಸಿಕೊಂಡಿದೆ ಎಂದು ದೂರಿದರು.