ಮೈಸೂರು: ದಾರಿಯಲ್ಲಿ ವ್ಯಕ್ತಿಯೊಬ್ಬರು ಬಿಟ್ಟು ಹೋಗಿದ್ದ ಸೂಟ್ಕೇಸ್, ಮಂಗಳವಾರ ನಾಟಕೀಯ ಬೆಳವಣಿಗೆಗೆ ಕಾರಣವಾಯಿತು.
ಬೆಳಿಗ್ಗೆ ನ್ಯೂ ಸಯ್ಯಾಜಿ ರಾವ್ ರಸ್ತೆಯಲ್ಲಿ ಸೆಂದಿಲ್ ಕುಮಾರ್ ಟೆಕ್ಸ್ಟೈಲ್ಸ್ ಬಳಿ ನೀಲಿ ಬಣ್ಣದ ಟ್ರಾವೆಲರ್ ಸೂಟ್ಕೇಸ್ ಕಂಡುಬಂತು. ಇದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿತು. ತಕ್ಷಣವೇ ಸಾರ್ವಜನಿಕರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದರು.
ಕೆ.ಆರ್.ಠಾಣೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಸೂಟ್ಕೇಸ್ ಸುತ್ತ ಬ್ಯಾರಿಕೇಡ್ ಅಳವಡಿಸಿದರು. ರಸ್ತೆ ಬಂದ್ ಮಾಡಿದರು. ಸುತ್ತಲೂ ಸೇರಿದ ಜನ, ‘ಬಾಂಬ್ ಏನಾದರೂ ಇದೆಯೇ’ ಎಂದು ಭಯದಿಂದಲೇ ನೋಡುತ್ತಾ ನಿಂತರು.
ಅಷ್ಟರಲ್ಲಿ ವ್ಯಾಪಾರಿಯೊಬ್ಬರು ಸೂಟ್ಕೇಸ್ ಹುಡುಕುತ್ತಾ ಬಂದರು. ಎರಡು ಸೂಟ್ಕೇಸ್ಗಳಲ್ಲಿ ಬಟ್ಟೆಗಳನ್ನು ತುಂಬಿಕೊಂಡು ವ್ಯಾಪಾರಕ್ಕೆ ಕಾರಿನಲ್ಲಿ ಬಂದಿದ್ದರು. ಟೆಕ್ಸ್ಟೈಲ್ಗೆ ಹೋಗಿ ತೋರಿಸಿದ್ದಾರೆ. ಬಳಿಕ ಒಂದು ಸೂಟ್ಕೇಸ್ಅನ್ನು ಕಾರಿನಲ್ಲಿಟ್ಟಿದ್ದಾರೆ. ಮೊಬೈಲ್ಗೆ ಕರೆ ಬಂದಿದ್ದರಿಂದ, ಮಾತನಾಡುವ ಭರದಲ್ಲಿ ಮತ್ತೊಂದು ಸೂಟ್ಕೇಸ್ ಬಿಟ್ಟು ಹೋಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ನೆನಪಿಸಿಕೊಂಡು ಅದೇ ಜಾಗಕ್ಕೆ ಬಂದಿದ್ದಾರೆ.
‘ಮರೆತು ಬಿಟ್ಟು ಹೋಗಿರುವುದಾಗಿ ಹೇಳಿದರು. ಮತ್ತೆ ಈ ರೀತಿ ಎಡವಟ್ಟು ಮಾಡದಂತೆ ಎಚ್ಚರಿಕೆ ನೀಡಿ ಕಳಿಸಲಾಗಿದೆ’ ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ತಿಳಿಸಿದರು.
ಸರಗಳ್ಳತನಕ್ಕೆ ವಿಫಲ ಯತ್ನ
ಮೈಸೂರುನಗರದಲ್ಲಿ ಮಂಗಳವಾರ ಎರಡು ಕಡೆ ಸರಗಳ್ಳತನಕ್ಕೆ ವಿಫಲ ಯತ್ನ ನಡೆದಿದೆ.
ರಾಮಕೃಷ್ಣನಗರ ವೃತ್ತ, ಶ್ರೀರಾಂಪುರ 2ನೇ ಹಂತದ ಹುಣಸೆಮರದ ಬಳಿ ನಡೆದುಕೊಂಡು ಹೋಗುತ್ತಿದ್ದ ವಯಸ್ಸಾದ ಮಹಿಳೆಯರಿಂದ ಸರ ಕಿತ್ತುಕೊಳ್ಳಲು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಪ್ರಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಿಲ್ಲ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.