ಮೈಸೂರು: ಶಕ್ತಿ ಯೋಜನೆ ಜಾರಿಗೊಂಡ ಬಳಿಕ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಆದರೆ, ಅದಕ್ಕೆ ತಕ್ಕಂತೆ ಬಸ್ಗಳು ಹೆಚ್ಚಾಗಿಲ್ಲ. ಇದರಿಂದಾಗಿ ಬೆಳಿಗ್ಗೆ–ಸಂಜೆ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಲಿದ್ದು, ವಿದ್ಯಾರ್ಥಿಗಳು ಬಸ್ ಏರಲು ಪ್ರಯಾಸಪಡುತ್ತಿದ್ದಾರೆ.
ದಾಖಲಾತಿ ಪ್ರಕ್ರಿಯೆ ಮುಗಿದಿರುವುದರಿಂದ ಬಸ್ಗಳು ವಿದ್ಯಾರ್ಥಿಗಳಿಂದ ತುಂಬುತ್ತಿವೆ. ಕಡಿಮೆ ಬಸ್ಗಳಿರುವುದರಿಂದ ನೂಕುನುಗ್ಗಲಿನಲ್ಲೇ ಪರದಾಡಿಕೊಂಡು ತೆರಳುವ ದೃಶ್ಯ ಸಾಮಾನ್ಯವಾಗಿದೆ.
ನಗರದ ಕೇಂದ್ರೀಯ ಬಸ್ ನಿಲ್ದಾಣ, ರಾಮಸ್ವಾಮಿ ವೃತ್ತ, ಅಗ್ರಹಾರ ವೃತ್ತ, ಮಹಾರಾಣಿ ಕಲಾ ಕಾಲೇಜು ಮೊದಲಾದ ಕಡೆಗಳಲ್ಲಿ ವಿದ್ಯಾರ್ಥಿಗಳು ಬೆಳಿಗ್ಗೆ ಹಾಗೂ ಸಂಜೆ ನೂಕುನುಗ್ಗಲಿನಲ್ಲಿ ಬಸ್ ಏರಲು ಪ್ರಯಾಸ ಪಡುತ್ತಿದ್ದ ದೃಶ್ಯ ಗುರುವಾರ ಕಂಡುಬಂದಿತು. ಕೆಲವು ವಿದ್ಯಾರ್ಥಿನಿಯರು ಫುಟ್ಬೋರ್ಡ್ ಮೇಲೆಯೂ ನಿಂತು ಪ್ರಯಾಣಿಸಬೇಕಾಯಿತು. ಬಸ್ಗಳ ಒಳಗೆ ಪ್ರಯಾಣಿಕರು ಕಿಕ್ಕಿರಿದು ತುಂಬುತ್ತಿದ್ದು, ಕಂಡಕ್ಟರ್ಗಳು ಎಲ್ಲರಿಗೂ ಟಿಕೆಟ್ ನೀಡಲು ಪರದಾಡುತ್ತಿದ್ದಾರೆ.
‘ವಿದ್ಯಾರ್ಥಿಗಳಿಗೆ ಈ ಹಿಂದೆಯೂ ಸಮಸ್ಯೆ ಇತ್ತು. ಈಗ ಹೆಚ್ಚಾಗಿದೆ. ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಲು ಪರದಾಡಬೇಕು. ಕೆಲವೊಮ್ಮೆ ಮೊದಲ ತರಗತಿಗಳು ತಪ್ಪುತ್ತವೆ. ಪ್ರಯೋಗಾಲಯದ ತರಗತಿಗಳು ತಪ್ಪಿದರೆ ತೊಂದರೆಯಾಗುತ್ತದೆ’ ಎಂದು ಮಹಾರಾಣಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು.
ತಾಲ್ಲೂಕು ಕೇಂದ್ರಗಳಲ್ಲೂ ಕೊರತೆ: ನಂಜನಗೂಡು, ಶ್ರೀರಂಗಪಟ್ಟಣ, ತಿ. ನರಸೀಪುರ, ಹುಣಸೂರು, ಎಚ್.ಡಿ. ಕೋಟೆ, ಪಿರಿಯಾಪಟ್ಟಣ ಮೊದಲಾದ ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಪದವಿ ಕಲಿಕೆಗೆ ಬರುವ ವಿದ್ಯಾರ್ಥಿಗಳದ್ದೂ ಇದೇ ಕಥೆ.
ಬೆಳಿಗ್ಗೆ ಹಾಗೂ ಸಂಜೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳ ಕೊರತೆ ಇದೆ. ಈ ನಡುವೆ ಗ್ರಾಮೀಣ ಜನರೂ ಖಾಸಗಿ ಬಸ್ಗಳಿಂದ ಕೆಎಸ್ಆರ್ಟಿಸಿ ಬಸ್ಗಳತ್ತ ಬಂದಿದ್ದು, ಸಹಜವಾಗಿಯೇ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ.
ಬೆಳಿಗ್ಗೆ 8ರಿಂದ 9ರವರೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು ಬಸ್ ಹತ್ತುವುದೇ ಕಷ್ಟವಾಗುತ್ತಿದೆ. ಕಾಲೇಜಿಗೆ ತಡವಾಗುತ್ತದೆ ಎಂಬ ಕಾರಣಕ್ಕೆ ನಿಲ್ದಾಣದಿಂದ ನಡದೇ ಹೋಗುತ್ತಿದ್ದೇವೆ- ಸುಮಾ, ವಿದ್ಯಾರ್ಥಿನಿ ಮಹಾರಾಣಿ ಕಾಲೇಜು
ಈ ಕುರಿತು ಪ್ರತಿಕ್ರಿಯೆಗೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮೊಬೈಲ್ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.