ಮೈಸೂರು: ‘ಇಲ್ಲಿನ ಕೆಆರ್ಎಸ್ ರಸ್ತೆಯಲ್ಲಿರುವ ಜಯದೇವ ಹೃದ್ರೋಗ ಸಂಸ್ಥೆಯ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಹೃದಯ ಶಸ್ತ್ರಚಿಕಿತ್ಸೆ ಇಲ್ಲದೆ ರೋಗಿಯೊಬ್ಬರಿಗೆ ಯಶಸ್ವಿಯಾಗಿ ಟಿಎವಿಐ– ಅಯೋರ್ಟಿಕ್ ಕವಾಟ ಬದಲಾವಣೆ ಚಿಕಿತ್ಸೆ ನೀಡಲಾಗಿದೆ’ ಎಂದು ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್. ಸದಾನಂದ್ ತಿಳಿಸಿದ್ದಾರೆ.
ಕೊಳ್ಳೇಗಾಲದ 81 ವರ್ಷದ ನಿವೃತ್ತ ಉಪನ್ಯಾಸಕ ಚನ್ನಮಾದೇಗೌಡ ಅವರಿಗೆ ಡಾ.ಬಿ. ದಿನೇಶ್, ಡಾ.ಪ್ರಶಾಂತ್ ದ್ವಿವೇದಿ ನೇತೃತ್ವದ ತಂಡ ಯಶಸ್ವಿಯಾಗಿ ಅಯೋರ್ಟಿಕ್ ಕವಾಟವನ್ನು ಅಳವಡಿಸಲಾಗಿದೆ. ಸಾಮಾನ್ಯವಾಗಿ ಈ ಸಮಸ್ಯೆಗೆ ತೆರೆದ ಹೃದಯ ಚಿಕಿತ್ಸೆ ಮಾಡುತ್ತೇವೆ. ಆದರೆ, ವಯಸ್ಸಾದವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗದವರಿಗೆ ತೊಡೆಯ ರಕ್ತನಾಳದ ಮೂಲಕ ಅಯೋರ್ಟಿಕ್ ಕವಾಟವನ್ನು ಹೃದಯಕ್ಕೆ ಜೋಡಿಸಲಾಗುತ್ತದೆ. ಈ ಚಿಕಿತ್ಸೆಗೆ ₹ 16 ಲಕ್ಷ ವೆಚ್ಚವಾಗುತ್ತದೆ. ಇದರಲ್ಲಿ ₹ 1 ಲಕ್ಷ ರಿಯಾಯಿತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಡಾ.ಬಿ. ದಿನೇಶ್ ಮಾತನಾಡಿ, ‘ಈ ಶಸ್ತ್ರಚಿಕಿತ್ಸೆಯಿಂದ ಎದೆಯ ಮೇಲೆ ಯಾವುದೇ ತರಹದ ಗಾಯಗಳಾಗುವುದಿಲ್ಲ. ಶಸ್ತ್ರಚಿಕಿತ್ಸೆ ಆದ ಮೂರೇ ದಿನದಲ್ಲಿ ಸಾಮಾನ್ಯರಂತೆ ಓಡಾಡಬಹುದು. ಈ ಚಿಕಿತ್ಸೆ ರೋಗಿಗಳಿಗೆ ವರದಾನವಾಗಿದೆ. ವಿಮೆ, ಇ.ಎಸ್.ಐ., ಸಿ.ಜಿ.ಎಚ್.ಎಸ್. ಲಭ್ಯವಿರುವ ರೋಗಿಗಳು ಸದ್ಬಳಕೆ ಮಾಡಿಕೊಳ್ಳಬಹುದು’ ಎಂದರು.