ಮೈಸೂರು: ರಾಜ್ಯಪಾಲ ಥಾವರ್ಚಂದ್ ಗೆಹ್ಲೋತ್ ಶನಿವಾರ ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫ್ಯುಚರ್ ಸ್ಕಿಲ್ಸ್’ ಕೇಂದ್ರದ ಉದ್ಘಾಟನೆ ಸಂದರ್ಭ ಕೆಲ ನಿಮಿಷ ಲಿಫ್ಟ್ ಒಳಗೆ ಬಂಧಿಯಾದರು.
ADVERTISEMENT
ADVERTISEMENT
ಅವರು ಕೇಂದ್ರದ ಉದ್ಘಾಟನೆಗೆಂದು ಮೊದಲ ಮಹಡಿಗೆ ತೆರಳಲು ಇತರ ಗಣ್ಯರೊಂದಿಗೆ ಲಿಫ್ಟ್ ಏರಿದರು. ಆರೇಳು ಜನರನ್ನು ಹೊತ್ತೊಯ್ಯುವ ಸಾಮರ್ಥ್ಯದ ಲಿಫ್ಟ್ನಲ್ಲಿ ಒಮ್ಮೆಲೆ ಹತ್ತಕ್ಕೂ ಹೆಚ್ಚು ಮಂದಿ ಏರಿದ ಕಾರಣ ಭಾರ ತಾಳಲಾರದೇ ಲಿಫ್ಟ್ ಮೇಲೇರುವ ಬದಲು ಬೇಸ್ಮೆಂಟ್ಗೆ ಇಳಿಯಿತು.
ಆತಂಕಗೊಂಡ ರಾಜ್ಯಪಾಲರ ಭದ್ರತಾ ಸಿಬ್ಬಂದಿ ಕೂಡಲೇ ಬೇಸ್ಮೆಂಟ್ಗೆ ತೆರಳಿ ಲಿಫ್ಟ್ ಬಾಗಿಲು ತೆರೆಯಲು ಪ್ರಯತ್ನಿಸಿದರಾದರೂ ಬಾಗಿಲು ತೆರೆದುಕೊಳ್ಳಲಿಲ್ಲ. ಅಲ್ಲಿನ ತಾಂತ್ರಿಕ ಸಿಬ್ಬಂದಿ ಕೂಡಲೇ ಎಚ್ಚೆತ್ತು ಕೆಲವು ನಿಮಿಷಗಳಲ್ಲಿ ಲಿಫ್ಟ್ ಸರಿಪಡಿಸಿದರು.
ಬೇಸ್ಮೆಂಟ್ನಲ್ಲಿ ಲಿಫ್ಟ್ನಿಂದ ಹೊರಬಂದ ರಾಜ್ಯಪಾಲರು ಮೆಟ್ಟಿಲು ಏರಿ ಮೊದಲ ಮಹಡಿಗೆ ತೆರಳಿದರು. ಉದ್ಘಾಟನೆ ಮುಗಿಸಿ ಲಿಫ್ಟ್ನಲ್ಲಿ ಕೆಳಗೆ ಇಳಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.