ರಾಯಚೂರು: ಕನ್ನಡ ರಾಜ್ಯೋತ್ಸವದ ನಿಮಿತ್ತ ಲಕ್ಷ ಕಂಠಗಳ ಕನ್ನಡ ಗೀತಗಾಯನ ನಗರದಾದ್ಯಂತ ಗುರುವಾರ ಅನುರಣಿಸಿತು.
ಜಿಲ್ಲಾಧಿಕಾರಿ ಕಚೇರಿ ಅವರಣ, ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರ, ಹಾಗೂ ಎಸ್ ಎಸ್ ಆರ್ ಜಿ ಮಹಿಳಾ ಕಾಲೇಜು ಆವರಣದಲ್ಲಿ ಸೇರಿದ್ದ ನೂರಾರು ವಿದ್ಯಾರ್ಥಿಗಳು ಹಾಗೂ ಕನ್ನಡ ಅಭಿಮಾನಿಗಳು ಏಕಕಾಲಕ್ಕೆ ಕನ್ನಡ ಗೀತ ಗಾಯನ ಮೊಳಗಿಸಿದರು.
ಆರಂಭದಲ್ಲಿ ನಾಡಗೀತೆ ಗಾಯನದ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಆನಂತರ 'ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯಶಿವ' ' ಜೋಗದ ಸಿರಿ ಬೆಳಕಿನಲ್ಲಿ...' ಹಾಗೂ 'ಹಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಗೀತೆಗಳನ್ನು ಒಂದಾದ ನಂತರ ಒಂದು ಸುಶ್ರಾವ್ಯವಾಗಿ ಗಾಯನ ಮಾಡಿದ್ದು ವಿಶೇಷವಾಗಿತ್ತು.
ಏಕಕಾಲದಲ್ಲಿ ನೂರಾರು ಖಂಡಗಳಲ್ಲಿ ತುಂಬಿದ ಕನ್ನಡ ಗೀತೆಗಳು ಕೇಳುವುದಕ್ಕೆ ಆನಂದವಾಗಿತ್ತು. ಕಾರ್ಯಕ್ರಮದಲ್ಲಿ ಸೇರಿದ್ದ ಎಲ್ಲರೂ ಕನ್ನಡ ಭಾಷೆ ಉಳಿಸುವ ಬಳಸುವ ಬಗ್ಗೆ ಸಂಕಲ್ಪ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾಗಿತ್ತು.
ಶಾಸಕ ಡಾ. ಶಿವರಾಜ್ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಮಂಗಳಾ ನಾಯಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.