ಸಿರವಾರ: ಮಲ್ಲಟ ಹೋಬಳಿಯ ಮಲ್ಲಟ, ಬಲ್ಲಟಗಿ, ಬಸವಣ್ಣ ಕ್ಯಾಂಪ್ನಲ್ಲಿನ ಕೀಟನಾಶಕ ಮಾರಾಟ ಅಂಗಡಿಗಳ ಮೇಲೆ ಕೃಷಿ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ಕೀಟನಾಶಕಗಳನ್ನು ಪರಿಶೀಲಿಸಿದರು.
ದಾಳಿ ನಡೆಸಿ ಮಾತನಾಡಿದ ಕೃಷಿ ಅಧಿಕಾರಿ ಮಾರುತಿ ಅವರು,‘ಈಗಾಗಲೇ ಉತ್ತಮ ಮಳೆಯಿಂದ ರೈತರು ಭತ್ತ, ತೊಗರಿ, ಹತ್ತಿ ನಾಟಿ ಮಾಡಿದ್ದು, ಅದಕ್ಕೆ ಯಾವುದೇ ತೊಂದರೆ ಬರದಂತೆ ನೋಡಿಕೊಳ್ಳಲು ವಿವಿಧ ಬಗೆಯ ಕ್ರಿಮಿನಾಶಕಗಳನ್ನು ಬಳಸುತ್ತಾರೆ’ ಎಂದು ಅವರು ಈ ವೇಳೆತಿಳಿದರು.
‘ದಾಳಿಯಲ್ಲಿ ಅಂಗಡಿಯಲ್ಲಿರುವ ಕೀಟನಾಶಕದ ಗುಣಮಟ್ಟ, ಅವಧಿಯನ್ನು ಪರಿಶೀಲಿಸುವ ಜತೆಗೆ ಅನುಮಾನಾಸ್ಪದ ಕೀಟನಾಶಕಗಳ ಮಾದರಿಯನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲಾಗುವುದು’ ಎಂದು ಅವರು ಹೇಳಿದರು.
ಮಲ್ಲಟ ರೈತ ಸಂಪರ್ಕ ಕೇಂದ್ರದ ನಾಗರಾಜ ಕಂಬಾರ್ ಹಾಗೂ ರಾಜಭಕ್ಷ ಮಲ್ಲಟ ಇದ್ದರು.
ಮಾದರಿ ರವಾನೆ
ಗಿಲ್ಲೇಸೂಗೂರು (ಶಕ್ತಿನಗರ): ಇಲ್ಲಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಂಜುಳಾ ನೇತೃತ್ವದ ತಂಡ ಗ್ರಾಮದ ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
‘ಗಿಲ್ಲೇಸೂಗೂರು ಹೋಬಳಿಯಲ್ಲಿ ತೊಗರಿ, ಹತ್ತಿ ಮತ್ತು ಭತ್ತ ವ್ಯಾಪಕವಾಗಿ ಬೆಳೆಯಲಾಗಿದೆ. ಈ ಬೆಳೆಗಳಲ್ಲಿ ರೋಗ ಹಾಗೂ ಕೀಟಬಾಧೆ ಕಾಣಿಸಿಕೊಂಡಿದೆ. ರೈತರು ಉತ್ತಮ ಕೀಟನಾಶಕ ಖರೀದಿಸಿ, ಸಿಂಪಡಿಸಬೇಕು’ ಎಂದು ಅಧಿಕಾರಿಗಳು ತಿಳಿಸಿದರು.
ರೈತರಿಗೆ ಉತ್ತಮ ಗುಣಮಟ್ಟದ ಪರಿಕರಗಳು ಸಿಗಬೇಕು. ಆದ್ದರಿಂದ ಮಾರಾಟ ಮಳಿಗೆಗಳಲ್ಲಿ ಅನಧಿಕೃತ ಹಾಗೂ ಬಯೋ ಕೀಟನಾಶಕ ಮಾರಾಟ ಮಾಡಲಾಗುತ್ತಿದೆಯೇ ಎಂದು ಪರಿಶೀಲನೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.
‘ಗುಣಮಟ್ಟ ವಿಶ್ಲೇಷಣೆಗಾಗಿ ಮಳಿಗೆಗಳಲ್ಲಿ ಸಂಶಯಾಸ್ಪದ ಪರಿಕರಗಳ ಮಾದರಿಗಳನ್ನು ಪಡೆದುಕೊಳ್ಳಲಾಗಿದೆ. ಆದಾಗ್ಯೂ ಅನಧಿಕೃತವಾಗಿ ಹಾಗೂ ಬಯೋ ಕ್ರಿಮಿನಾಶಕ ಮಾರಾಟ ಮಾಡಿದಲ್ಲಿ ಕ್ರಮ ಜರುಗಿಸಲಾಗುವುದು. ರೈತರು ಖರೀದಿಸುವ ಪರಿಕರಗಳಿಗೆ ಕಡ್ಡಾಯವಾಗಿ ರಶೀದಿಗಳನ್ನು ನೀಡುವಂತೆ ಸೂಚಿಸಲಾಗಿದೆ’ ಎಂದು ಕೃಷಿ ಅಧಿಕಾರಿ ಮಂಜುಳಾ ಹೇಳಿದರು.