ರಾಯಚೂರು: ಗುಂತಕಲ್ನಿಂದ ವಿಜಯಪುರ ಹಾಗೂ ರಾಯಚೂರು ಗುಂತಕಲ್ ಪ್ಯಾಸೆಂಜರ್ ರೈಲು ಸಂಚಾರವನ್ನು ಆರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ಪದಾಧಿಕಾರಿಗಳು ರಾಯಚೂರು ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ ರಾಯಚೂರಿನ ವ್ಯವಸ್ಥಾಪಕರ ಮೂಲಕ ಗುಂತಕಲ್ ರೈಲ್ವೆ ವಿಭಾಗದ ವ್ಯವಸ್ಥಾಪಕರಿಗೆ ಗುರುವಾರ ಮನವಿ ಸಲ್ಲಿಸಿದರು.
ಕಳೆದ ಏಳು ತಿಂಗಳಿನಿಂದ ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಎಲ್ಲಾ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕೆಲವು ರೈಲುಗಳ ಸಂಚಾರವನ್ನು ಮಾತ್ರ ಆರಂಭಿಸಲಾಗಿದೆ. ಈಗ ಲಾಕ್ಡೌನ್ ಸಡಿಲಿಕೆಯಿಂದ ಪ್ಯಾಸೆಂಜರ್ ರೈಲನ್ನು ಗುಂತಕಲ್-ಹಿಂದೂಪುರದವರೆಗೆ ಸಂಚಾರ ಆರಂಭಿಸಲಾಗಿದೆ. ರಾಯಚೂರು ಭಾಗದ ಪ್ಯಾಸೆಂಜರ್ ರೈಲು ಸಂಚಾರ ಯಾಕೆ ಆರಂಭಿಸಿಲ್ಲ ಎಂದು ಗೊತ್ತಾಗಿಲ್ಲ ಎಂದು ದೂರಿದರು.
ಈ ಎರಡು ರೈಲುಗಳ ಮೂಲಕ ಬಡ, ಕೂಲಿ ಕಾರ್ಮಿಕರಿಗೆ ರೈತರು ಹೆಚ್ಚಾಗಿ ಸಂಚರಿಸುತ್ತಿದ್ದು, ಕೂಡಲೇ ಸರ್ಕಾರದ ಆದೇಶ, ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿ ಶೀಘ್ರ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಕುಮಾರ ಸಿ.ಕೆ ಜೈನ್, ಪದಾಧಿಕಾರಿ ಮಲ್ಲಿಕಾರ್ಜುನ, ಕೆ.ಕಿಶನರಾವ, ಆಸೀಫ್, ಸಂಜಯ, ವೈಷ್ಣವ, ಅಜೀಜ್, ಭೀಮೇಶ ಇದ್ದರು.