ಕನಕಪುರ: ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಮೊದಲನೆ ದಿನವಾದ ಬುಧವಾರ ತಾಲ್ಲೂಕಿನ 1,475 ವಿದ್ಯಾರ್ಥಿಗಳು ಬರೆದರು.
ತಾಲ್ಲೂಕಿನಲ್ಲಿ ಎಲ್ಲಾ ಪಿಯು ಕಾಲೇಜುಗಳನ್ನು ಸೇರಿಸಿ ಮೂರು ಪರೀಕ್ಷಾ ಕೇಂದ್ರವನ್ನಾಗಿ ಮಾಡಲಾಗಿತ್ತು. ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿ ವ್ಯಾಪ್ತಿಯ ಪಿ.ಯು ಕಾಲೇಜುಗಳಿಗೆ ಜೈನ್ ಕಾಲೇಜಿನಲ್ಲಿ ಸೆಂಟರ್ ಕೊಡಲಾಗಿತ್ತು.
ಸಾತನೂರು, ಕೋಡಿಹಳ್ಳಿ, ದೊಡ್ಡಾಲಹಳ್ಳಿ, ಹುಣಸನಹಳ್ಳಿ, ಚಿಕ್ಕಮುದುವಾಡಿ ಸೇರಿಸಿ ಕನಕಪುರದ ಎಕ್ಸ್ ಮುನಿಷಿಪಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೆಂಟರ್ ಮಾಡಲಾಗಿತ್ತು. ರೂರಲ್ ಪದವಿ ಪೂರ್ವ ಕಾಲೇಜಿಗೆ ರೂರಲ್ ಪದವಿ ಕಾಲೇಜಿನಲ್ಲೇ ಸೆಂಟರ್ ಮಾಡಲಾಗಿತ್ತು.
ಎಕ್ಸ್ ಮುನ್ಸಿಪಲ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 656 ವಿದ್ಯಾರ್ಥಿಗಳು ಪಿಯು ಪರೀಕ್ಷೆಯನ್ನು ತೆಗೆದುಕೊಂಡಿದ್ದು 55 ಮಂದಿ ಗೈರು ಹಾಜರಾಗಿದ್ದರು. 601 ವಿದ್ಯಾರ್ಥಿಗಳು ಮೊದಲ ದಿನದ ಪರೀಕ್ಷೆ ಬರೆದರು.
ಜೈನ್ ಕಾಲೇಜಿನಲ್ಲಿ 353 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು 20 ವಿದ್ಯಾರ್ಥಿಗಳು ಗೈರು ಹಾಜರಾಗಿ 333 ವಿದ್ಯಾರ್ಥಿಗಳು ಪರೀಕ್ಷೆ ಬರದರು.
ರೂರಲ್ ಕಾಲೇಜಿನಲ್ಲಿ 554 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು ಅವರಲ್ಲಿ 13 ವಿದ್ಯಾರ್ಥಿಗಳು ಗೈರಾಗಿ 541 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಮೊದಲ ದಿನದ ಪರೀಕ್ಷೆಯಲ್ಲಿ ಇತಿಹಾಸ, ಭೌತಶಾಸ್ತ್ರ, ಮೂಲಗಣಿತ ವಿಷಯಗಳಿಗೆ ಪರೀಕ್ಷೆ ನಡೆಯಿತು.
ಮೇಲ್ವಿಚಾರಣೆಗಾಗಿ ತಾಲ್ಲೂಕು ಜಾಗೃತದಳ, ವಿಶೇಷ ಜಾಗೃತದಳವನ್ನು ರಚನೆ ಮಾಡಿದ್ದು ತಂಡಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಅಕ್ರಮ ನಡೆಯದಂತೆ ಕಾರ್ಯ ನಿರ್ವಹಿಸಿದವು.
ವೇತನ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸಿ ಪಿ ಯು ಉಪನ್ಯಾಸಕರು ನಡೆಸುತ್ತಿರುವ ಮುಷ್ಕರವನ್ನು ಮುಂದುವರಿಸಿದ್ದು ಬುಧವಾರ ನಡೆದ ಪರೀಕ್ಷಾ ಕೇಂದ್ರಗಳಲ್ಲಿ ಉಪನ್ಯಾಸಕರುಗಳು ಕಪ್ಪುಪಟ್ಟಿಯನ್ನು ಕಟ್ಟಿಕೊಂಡೇ ಕರ್ತವ್ಯ ನಿರ್ವಹಿಸಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು.
ಪರೀಕ್ಷೆಯಲ್ಲಿ 20 ಪುಟಗಳ ಬುಕ್ಲೆಟ್ ಬದಲಾಗಿ ಈ ಬಾರಿ 40 ಪುಟಗಳ ಬುಕ್ಲೆಟ್ ಕೊಟ್ಟಿರುವುದರಿಂದ ಅರ್ಧಕ್ಕೂ ಹೆಚ್ಚು ವಿದ್ಯಾರ್ಥಿಗಳು 20 ಪುಟಗಳನ್ನು ಮಾತ್ರ ಬಳಕೆ ಮಾಡಿ ಉಳಿದ 20 ಪುಟಗಳನ್ನು ಖಾಲಿ ಬಿಟ್ಟರು. ಇಷ್ಟೊಂದು ಪುಟಗಳ ಬುಕ್ಲೆಟ್ ಕೊಡುವ ಅವಶ್ಯಕತೆಯಿರಲಿಲ್ಲವೆಂದು ಹೆಸರೇಳಲು ಇಚ್ಚಿಸದ ವಿದ್ಯಾರ್ಥಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.