ಕನಕಪುರ: ‘ಕೋವಿಡ್ ಸೆಂಟರ್ಗಳೆಂದರೆ ಸಾರ್ವಜನಿಕರಿಗೆ ಎಲ್ಲೋ ಕೂಡಿಹಾಕಿಕೊಳ್ಳುತ್ತಾರೆ ಎಂಬ ಭಯಬೇಡ. ಧೈರ್ಯವಾಗಿ ಆರೈಕೆ ಕೇಂದ್ರಕ್ಕೆ ಬಂದು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ. ಇಲ್ಲಿ ಎಲ್ಲಾ ರೀತಿಯ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಹೂಕುಂದ ರಸ್ತೆಯಲ್ಲಿನ ವಸತಿ ನಿಲಯದಲ್ಲಿ ನಿರ್ಮಾಣ ಮಾಡಿರುವ ಕೋವಿಡ್ ಕೇರ್ ಸೆಂಟರ್ಗೆ ಮಂಗಳವಾರ ಭೇಟಿ ನೀಡಿ ಆರೈಕೆ ಕೇಂದ್ರದಲ್ಲಿರುವ ಸೋಂಕಿತರ ಆರೋಗ್ಯ ಮತ್ತು ಕೇಂದ್ರದ ಮೇಲ್ವಿಚಾರಣೆಯ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.
‘ಕೊರೊನಾ ಸೋಂಕಿನಿಂದ ಆಗುವ ಪರಿಣಾಮಕ್ಕಿಂತ ಭಯದಿಂದ ಆಗುವ ಪರಿಣಾಣವೇ ಹೆಚ್ಚು ಅಪಾಯಕಾರಿ. ಮೊದಲು ಭಯವನ್ನು ಬಿಡಿ, ಸೋಂಕಿನ ಲಕ್ಷಣಗಳು ಕಾಣುತ್ತಿದ್ದಂತೆ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಂಡು ಹತ್ತಿರದಲ್ಲಿರುವ ಕೋವಿಡ್ ಕೇರ್ ಸೆಂಟರ್ಗೆ ದಾಖಲಾಗಿ’ ಎಂದು ಸಲಹೆ ನೀಡಿದರು.
ಕೋಡಿಹಳ್ಳಿ, ದೊಡ್ಡಾಲಹಳ್ಳಿ ಮತ್ತು ಸಾತನೂರು ಗ್ರಾಮದಲ್ಲಿ ಪ್ರಾರಂಭಿಸಿರುವ ಆರೈಕೆ ಕೇಂದ್ರಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಹಾಗೂ ಸ್ಥಳೀಯ ಮುಖಂಡರ ಸಹಕಾರದಿಂದ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಕೇಂದ್ರಗಳಿಗೆ ಬರುವ ಸೋಂಕಿತರಿಗೆ ಯಾವುದೆ ಕೊರತೆ ಆಗದಂತೆ ನೋಡಿಕೊಳ್ಳಿ, ಹಣಕಾಸಿನ ನೆರವನ್ನು ಪಂಚಾಯಿತಿ ಮೂಲಕ ಪೂರೈಕೆ ಮಾಡುವುದಾಗಿ ತಿಳಿಸಿದರು.
ಕಳೆದ ಬಾರಿ ಪಂಚಾಯಿತಿ ಮುಖಾಂತರ ನಿರ್ವಹಣೆ ಮಾಡಿರಲಿಲ್ಲ, ಈ ಬಾರಿ ಪಂಚಾಯಿತಿ ಪಿಡಿಒ ಗಳಿಗೆ ಪೂರ್ಣ ಜವಾಬ್ದಾರಿ ಕೊಟ್ಟು ಟಾಸ್ಕ್ಪೋರ್ಸ್ ಸಮಿತಿಯು ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ. ಹೋಂ ಐಸೋಲೇಷನ್ನಲ್ಲಿ ಹೆಚ್ಚು ಕಂಪ್ಲೈಟ್ ಬರುತ್ತಿದ್ದವು. ಅದರಿಂದ ಸೋಂಕು ಹರಡುವಿಕೆ ಹೆಚ್ಚಾಗಿತ್ತು. ಅದನ್ನು ತಪ್ಪಿಸಿ ಆರೈಕೆ ಕೇಂದ್ರ ತೆರೆದಿದ್ದೇವೆ. ಸೋಂಕಿತರ ಧೈರ್ಯವಾಗಿ ಬಂದು ಆರೈಕೆ ಪಡೆಯಿರಿ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ನಂದಿನಿ, ಡಾ.ಜೋಯಲ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಂ.ಕೃಷ್ಣಮೂರ್ತಿ, ಉಪ ತಹಶೀಲ್ದಾರ್ ಎಚ್ರೇಸ್, ರಾಜಸ್ವನೀರಕ್ಷಕ ಮುನಿರಂಗಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ದಸ್ತಗೀರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಕ್ರಿಯಾ ನಾಯ್ಕ್, ಮುಖಂಡರಾದ ಚಂದ್ರಶೇಖರ್, ಕಿರಣ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.