ರಾಮನಗರ: ಸವಿತಾ ಸಮಾಜ ಒಗ್ಗಟ್ಟಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಇತರರಿಗೆ ಆದರ್ಶಪ್ರಾಯರಾಗಿ ಬೆಳೆಯಬೇಕು ಎಂದು ಸವಿತಾ ಸಮುದಾಯದ ಮುಖಂಡ ಶ್ರೀನಿವಾಸ್ ಕಿವಿಮಾತು ಹೇಳಿದರು.
ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸವಿತಾ ಮಹರ್ಷ ಜಯಂತಿ ಕಾರ್ಯಕ್ರಮದಲ್ಲಿ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಸವಿತಾ ಮಹರ್ಷಿಯು ರಥಸಮ್ತಿಯ ದಿನ ಮಾಘ ಮಾಸದ ಶುಕ್ಲ ಪಕ್ಷ ದಲ್ಲಿ ಜನಿಸಿದವರು. ಶಿವನ ಬಲಗಣ್ಣಿನಿಂದ ಜನಿಸಿದವರು ಎನ್ನುವುದು ನಂಬಿಕೆ. ಅಪಾರ ಜ್ಞಾನಭಂಡಾರ ಹೊಂದಿದ ಸವಿತಾ ಮಹರ್ಷಿ ನಾಲ್ಕನೇ ವೇದವಾದ ಸಾಮವೇದ ಕೃತಿ ರಚಿಸಿದ್ದಾರೆ. ಇವರ ಮಗಳಾದ ಗಾಯತ್ರಿದೇವಿಯು ಶ್ರೇಷ್ಠಮಂತ್ರವಾದ ಗಾಯತ್ರಿ ಮಂತ್ರವನ್ನು ರಚಿಸಿದ್ದಾರೆ ಎಂದು ಸ್ಮರಿಸಿದರು.
ಸವಿತಾ ಸಮಾಜದವರು ಸವಿತಾ ಮಹರ್ಷಿ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಪ್ರಗತಿ ಸಾಧಿಸಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು, ಸವಿತಾ ಸಮಾಜದ ಮುಖಂಡರಾದ ವೆಂಕಟರಾಮು, ರಘು, ಸತೀಶ್, ಇತರರು ಭಾಗವಹಿಸಿದ್ದರು.