ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯದ ಜಾಗೃತಿಗೆ ವಾಲ್ಮೀಕಿ ಜಾತ್ರೆ: ಪ್ರಸನ್ನಾನಂದ‌ ಸ್ವಾಮೀಜಿ

Published 5 ಜನವರಿ 2024, 4:15 IST
Last Updated 5 ಜನವರಿ 2024, 4:15 IST
ಅಕ್ಷರ ಗಾತ್ರ

ರಾಮನಗರ: ‘ನೂರಾರು ವರ್ಷಗಳಿಂದ ಶೋಷಣೆಗೊಳಗಾಗಿರುವ ಸಮುದಾಯಗಳ ಜಾಗೃತಿಗಾಗಿ ವಾಲ್ಮೀಕಿ ಜಾತ್ರೆ ಹಮ್ಮಿಕೊಳ್ಳಲಾಗಿದೆ. ಇದು ಸಾಂಪ್ರದಾಯಿಕ ಜಾತ್ರೆಯಾಗಿರದೆ ಸಮುದಾಯದ ಜನರ ಜಾಗೃತಿಗಾಗಿ ನಡೆಯುತ್ತಿರುವ ವೈಚಾರಿಕ ಜಾತ್ರೆಯಾಗಿದೆ’ ಎಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ‌ ಸ್ವಾಮೀಜಿ ಹೇಳಿದರು.

ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಮನಗರ ಯುವ ಘಟಕವು ನಗರದ ಚೈತನ್ಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ 6ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಯ (ಫೆ. 8 ಮತ್ತು 9) ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಜಾತ್ರೆಯ ಆಶಯಗಳನ್ನು ಜನರಿಗೆ ತಿಳಿಸಲು ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿ ಹೋಗಿ ಜಾತ್ರೆಗೆ ಕರೆಯುತ್ತಿದ್ದೇನೆ’ ಎಂದರು.

‘ನಮ್ಮ ಸಹೋದರ ಸಮುದಾಯಗಳು ಈಗಲೂ ಶೋಚನೀಯ ಸ್ಥಿತಿಯಲ್ಲಿವೆ. ಅವರನ್ನು ಸಹ ನಮ್ಮೊಂದಿಗೆ ಕರೆದೊಯ್ಯಬೇಕಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನಮಗೆ ಕೊಟ್ಟಿರುವ ಸಂವಿಧಾನಬದ್ದ ಹಕ್ಕುಗಳನ್ನು ಆಳುವ ಸರ್ಕಾರಗಳು ಕೊಡದಿದ್ದರೆ, ಹೋರಾಟ ಅನಿವಾರ್ಯ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.

‘ಜಾತಿ ಕಾರಣಕ್ಕಾಗಿ ಊರಾಚೆ ಇಡಲಾಗಿದ್ದ ನಮ್ಮ ಸಮುದಾಯಗಳನ್ನು ಗುರುತಿಸಿದ ಅಂಬೇಡ್ಕರ್, ನಮ್ಮ ಅಭಿವೃದ್ಧಿಗೆ ವಿಶೇಷ ಸೌಲಭ್ಯಗಳನ್ನು ಕೊಟ್ಟರು. ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಉಳಿದಂತೆ ಕಡೆಗಣಿಸುತ್ತಾರೆ. ಹಣ ಮತ್ತು ಹೆಂಡ ಕೊಟ್ಟರೆ ಮತ ಹಾಕುತ್ತಾರೆಎಂಬ ಮನಸ್ಥಿತಿ ಅವರದ್ದು. ಇದೇ ಕಾರಣಕ್ಕೆ ಜಾತಿ ಹೆಸರಿನಲ್ಲಿ ಮೋರ್ಚಾಗಳನ್ನು ಮಾಡುವ ರಾಜಕೀಯ ಪಕ್ಷಗಳು, ನಮ್ಮವರಿಂದಲೇ ನಮ್ಮನ್ನು ತುಳಿಯುವ ಕೆಲಸ ಮಾಡುತ್ತಾರೆ. ಈ ಬಗ್ಗೆ ಎಚ್ಚರಿಕೆ ಅಗತ್ಯ’ ಎಂದು ತಿಳಿಸಿದರು.

‘ಕಿತ್ತೂರು ಕರ್ನಾಟಕದಲ್ಲಿ ಅವ್ಯಾಹತವಾಗಿ ನಮ್ಮ ಸಮುದಾಯದ ಹೆಸರಿನಲ್ಲಿ ನಾಯಕ, ತಳವಾರ ಹಾಗೂ ಗೋಂಡ ಜಾತಿ‌ ಹೆಸರಿನಲ್ಲಿ ನಕಲಿ‌ ಜಾತಿ ಪ್ರಮಾಣಪತ್ರ ವಿತರಿಸಲಾಗುತ್ತಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಜೊತೆಗೆ, ಸಮುದಾಯ ಕೂಡ ಇದರ ವಿರುದ್ಧ ಎಚ್ಚೆತ್ತುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಗ್ರಾಮಗಳ ಮಟ್ಟದಲ್ಲಿ ಸಮುದಾಯದವರು ಸಭೆ ನಡೆಸಿ, ಜಾತ್ರೆಗೆ ಹೆಚ್ಚಿನ ಜನರನ್ನು ಕರೆತರಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದ ಗಣ್ಯರು ಜಾತ್ರೆಯ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದರು. ಮಹಾಸಭಾ ವತಿಯಿಂದ ಸ್ವಾಮೀಜಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಉಪನ್ಯಾಸಕಿ ಡಾ. ಶಾರದಾ ಬಡಿಗೇರಿ, ಮುಖಂಡರಾದ ದಾಸ ನಾಯಕ, ಶಿವಪ್ಪ, ನರಸಿಂಹಯ್ಯ, ವೆಂಕಟಮ್ಮ, ಲಕ್ಷ್ಮಮ್ಮ, ಲಲಿತಮ್ಮ, ಚಂದನ, ಉಮೇಶ್, ಆನಂದ್, ರಮೇಶ್, ರಾಜು ಹಾಗೂ ಇತರರು ಇದ್ದರು.

Quote - ರಾಜ್ಯದ 4ನೇ ದೊಡ್ಡ ಸಮುದಾಯವಾದ ನಾವು ತಳ ಸಮುದಾಯಗಳನ್ನು ಸೂಜಿ–ದಾರದಂತೆ ಪೋಣಿಸಿಕೊಂಡು ಮುಂದೆ ಸಾಗಬೇಕು. ಆಗ ಮಾತ್ರ ನಮ್ಮ ಪ್ರಗತಿ ಸಾಧ್ಯ. ಇಲ್ಲದಿದ್ದರೆ ಪ್ರಬಲರ ಅಡಿಯಾಳಾಗಿ ಇರಬೇಕಾಗುತ್ತದೆ – ಪ್ರಸನ್ನಾನಂದ‌ ಸ್ವಾಮೀಜಿ ವಾಲ್ಮೀಕಿ ಗುರುಪೀಠ

Cut-off box - ‘ಪರಿಶಿಷ್ಟರ ಜಾತಿ ಪ್ರಮಾಣಪತ್ರಕ್ಕೆ ಪೈಪೋಟಿ’ ‘ಒಂದು ಕಾಲದಲ್ಲಿ ಪರಿಶಿಷ್ಟ ಜಾತಿಗಳ ಜನರಿಂದ ಮುಟ್ಟಿಸಿಕೊಳ್ಳದ ಸಮುದಾಯದವರು ಇದೀಗ ತಮ್ಮನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿಸಿ ಎಂದು ಆಗ್ರಹಿಸುತ್ತಿದ್ದಾರೆ. ನಮ್ಮವರ ಹೆಸರಿನಲ್ಲಿ ಪ್ರಮಾಣಪತ್ರ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಈ ಬಗ್ಗೆ ಸಮುದಾಯದವರು ಜಾಗೃತರಾಗಬೇಕು. ಪರಿಶಿಷ್ಟ ಪಟ್ಟಿಯಲ್ಲಿರುವ ನಮ್ಮ ಸಹೋದರ ಜಾತಿಗಳನ್ನು ಅಸೂಯೆ ಮತ್ತು ತಾತ್ಸಾರ ಭಾವದಿಂದ ನೋಡದೆ ಎಲ್ಲರನ್ನು ಒಳಗೊಳ್ಳಬೇಕು. ಸ್ವಾಮೀಜಿ ಅವರ ನೇತೃತ್ವದಲ್ಲಿ ಸಂವಿಧಾನದತ್ತ ಸೌಲಭ್ಯ ಪಡೆಯಲು ಹೋರಾಟ ನಡೆಸಬೇಕು. ಸಮುದಾಯದವರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು’ ಎಂದು ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಅಂಜನಾಪುರ ವಾಸು ನಾಯಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT