ಹೊಳೆಹೊನ್ನೂರು: ‘ಜನ ಹಿತ ಮರೆತು ತುಘಲಕ್ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ದೂಳಿಪಟ ಮಾಡಬೇಕಿದೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಸಮೀಪದ ಸೂಗೂರಿನಲ್ಲಿ ಬುಧವಾರ ಹೊಳಲೂರು ಮಹಾಶಕ್ತಿ ಕೇಂದ್ರ ವತಿಯಿಂದ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವವರು ಭಯ ಪಡಬೇಕು. ಆ ರೀತಿಯ ಬಹುಮತಗಳೊಂದಿಗೆ ಬಿ.ವೈ. ರಾಘವೇಂದ್ರ ಗೆದ್ದು ಬರಲಿದ್ದಾರೆ. ರಾಜ್ಯ ಸರ್ಕಾರ ಸ್ಥಗಿತವಾಗಿದ್ದು ಸಂಪೂರ್ಣ ದಿವಾಳಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಯಾವೊಬ್ಬ ಮತದಾರರನೂ ಒಲವು ತೋರುತ್ತಿಲ್ಲ. ಕಾಂಗ್ರೆಸ್ಗೆ ದಿಕ್ಕು ದಿಸೆ ಇಲ್ಲ’ ಎಂದು ಟೀಕಿಸಿದರು.
‘ಮತದಾರರು ಜಾಗೃತರಾಗಿದ್ದಾರೆ. ಚುನಾವಣೆಗಳಲ್ಲಿ ಹಣ ಬಲ ಬಳಸಿ ಜಾತಿಯ ವಿಷ ಬೀಜ ಬಿತ್ತಿ ಗೆಲುವು ಸಾಧಿಸುವುದು ಸುಲಭವಲ್ಲ. ಪ್ರಧಾನಿ ನರೇಂದ್ರ ಮೊದಿ 10 ವರ್ಷಗಳಲ್ಲಿ ಒಂದು ದಿನವೂ ವಿಶ್ರಾಂತಿ ತೆಗೆದುಕೊಂಡಿಲ್ಲ. ವಿಶ್ವವೇ ದೇಶದ ಕಡೆ ತಿರುಗಿ ನೋಡುವಂತಾಗಿದೆ’ ಎಂದು ಹೇಳಿದರು.
ಶಾಸಕಿ ಶಾರದಾ ಪೂರ್ಯಾನಾಯ್ಕ, ಮಾಜಿ ಶಾಸಕ ಅಶೋಕ್ನಾಯ್ಕ, ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ, ವೈದ್ಯ ಧನಂಜಯ್ ಸರ್ಜಿ, ದಿನೇಶ್, ಷಣ್ಮುಖಪ್ಪ, ರವೀಶ್, ನವೀಲಯ್ಯ, ಷಡಾಕ್ಷರಪ್ಪ, ಬಸವರಾಜಪ್ಪ, ಅಶೋಕ್, ಶ್ರೀನಿವಾಸ್ ಇತರರಿದ್ದರು.