ತೀರ್ಥಹಳ್ಳಿ: ಮೈಸೂರು ರಂಗಾಯಣದ ಹಿರಿಯ ಕಲಾವಿದರು ಅಭಿನಯಿಸುವ ‘ಮುಟ್ಟಿಸಿಕೊಂಡವನು’ ನಾಟಕ ಪ್ರದರ್ಶನ ಸೊಪ್ಪುಗುಡ್ಡೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನ. 21ರಂದು ಸಂಜೆ 6.30ಕ್ಕೆ ಆಯೋಜಿಸಲಾಗಿದೆ ಎಂದು ನಟಮಿತ್ರರು ತಂಡದ ಅಧ್ಯಕ್ಷ ಸಂದೇಶ ಜವಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಸಮಾಜದಲ್ಲಿನ ಜಾತಿ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಪಿ.ಲಕೇಶ್ ಕಥೆ ಆಧರಿಸಿ ನಾಟಕ ವಿನ್ಯಾಸಗೊಳಿಸಲಾಗಿದೆ. ಹಳ್ಳಿಗಾಡಿನ ರೈತಾಪಿ ಜನರಲ್ಲಿ ಸಹಜವಾದ ಒಳ್ಳೆಯತನ, ಮುಗ್ದತೆಗಳು ಹೇಗೆ ನಮ್ಮ ಜಾತಿ ವ್ಯವಸ್ಥೆಯ ಕ್ರೂರ, ಅನಿಷ್ಟಗಳ ಕೈಯಲ್ಲಿ ಸಿಕ್ಕು ನಲಗುತ್ತವೆ ಎಂಬುದನ್ನು ನಾಟಕ ರೂಪದಲ್ಲಿ ಪ್ರೇಕ್ಷಕರ ಮುಂದಿಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
‘ಸಮಾಜವನ್ನು ಸುತ್ತಿಕೊಂಡಿರುವ ಮೌಢ್ಯ ವಿವರಿಸುತ್ತ ಜಾತಿಯ ಸುಳಿಯಿಂದ ಹೊರಬರಲಾಗದೆ ಬಾಸಿಂಗ, ಸಿದ್ಲಿಂಗಿ, ತಿಮ್ಮಪ್ಪ ಮೂವರೂ ತತ್ತರಿಸುವ ಕಥಾ ವಸ್ತುವೇ ‘ಮುಟ್ಟಿಸಿಕೊಂಡವನು’. ಜಾತಿ ವ್ಯವಸ್ಥೆಗೂ ಮೀರಿ ಇರುವ ಒಳ್ಳೆಯತನ ಕೊನೆಗೂ ಗೆಲ್ಲುತ್ತದೆ ಎಂಬುದನ್ನು ನಾಟಕ ಸಾರುತ್ತದೆ’ ಎಂದರು.
ಮೈಸೂರು ರಂಗಾಯದ ಹಿರಿಯ ಕಲಾವಿದೆ ಕೆ.ಆರ್.ನಂದಿನಿ ರಂಗರೂಪಕ್ಕೆ ಇಳಿಸಿ ನಿರ್ದೇಶನ ಮಾಡಿದ್ದಾರೆ. ಎಚ್.ಕೆ. ದ್ವಾರಕನಾಥ್ ವಿನ್ಯಾಸ ಮಾಡಿದ್ದು, ಪ್ರಶಾಂತ್ ಹಿರೆಮಠ್ ಸಂಗೀತ ನೀಡಿದ್ದಾರೆ. ತೀರ್ಥಹಳ್ಳಿಯ ಕಲಾವಿದ ಮಹೇಶ್ ಕಲ್ಲತ್ತಿ ಬೆಳಕಿನ ವಿನ್ಯಾಸ ಮಾಡಿದ್ದಾರೆ. ನಾಟಕ ಉಚಿತವಾಗಿ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.