ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್‌ವರ್ಕ್ ಸಮಸ್ಯೆ: ಮುಂದುವರಿದ ಪಾದಯಾತ್ರೆ

Last Updated 3 ಅಕ್ಟೋಬರ್ 2021, 3:57 IST
ಅಕ್ಷರ ಗಾತ್ರ

ಕಾರ್ಗಲ್: ‘ನೆಟ್‌ವರ್ಕ್ ಸಮಸ್ಯೆ ಪರಿಹಾರಕ್ಕೆ ದ್ವೀಪವಾಸಿಗಳು ನಡೆಸುತ್ತಿರುವ ಹೋರಾಟ ಪಕ್ಷಾತೀತ ಮತ್ತು ಜಾತ್ಯತೀತ. ಇದನ್ನು ಸರ್ಕಾರ ಲಘುವಾಗಿ ಪರಿಗಣಿಸಿದರೆ ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಹೋರಾಟ ಸಮಿತಿ ಸಂಚಾಲಕ ಪ್ರಶಾಂತ ಹೆಗಡೆ ಎಚ್ಚರಿಸಿದರು.

ಸಮೀಪದ ಕರೂರು ಹೋಬಳಿಯ ಕಟ್ಟಿನಕಾರು ಗ್ರಾಮದಿಂದ ಕೋಗಾರ್‌ವರೆಗೆ ನೆಟ್‌ವರ್ಕ್‌ಹೋರಾಟ ಸಮಿತಿ ಹಮ್ಮಿಕೊಂಡಿರುವ 13 ಕಿ.ಮೀ. ಪಾದಯಾತ್ರೆಯಲ್ಲಿ ಶನಿವಾರ ಮಾತನಾಡಿದರು.

ಕರೂರು ಹೋಬಳಿಯ ನೆಟ್‌ವರ್ಕ್ ಸಮಸ್ಯೆ ಬಗ್ಗೆ ವಿವಿಧ ಆಯಾಮಗಳೊಂದಿಗೆ ಸುಧೀರ್ಘವಾಗಿ ಮುನ್ನಡೆಯುತ್ತಿರುವ ಹೋರಾಟವನ್ನು ಕೆಲವರು ಸೀಮಿತವಾಗಿ ನೋಡುವಬದಲು ವಿಶಾಲವಾದ ದೃಷ್ಟಿಕೋನದೊಂದಿಗೆ ನೋಡಬೇಕು ಎಂದರು.

ತುಮರಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಮತ್ತು ಹೋರಾಟ ಸಮಿತಿಯ ಪ್ರಮುಖ ಜಿ.ಟಿ. ಸತ್ಯನಾರಾಯಣ ಮಾತನಾಡಿ, ‘ಮುಂಬರುವ ಜನವರಿ 26ರೊಳಗೆ ನೆಟ್‌ವರ್ಕ್ ಸಮಿತಿಯ ಹೋರಾಟಕ್ಕೆ ತಕ್ಕ ಫಲ ದೊರಕಬೇಕು. ಇಲ್ಲವಾದಲ್ಲಿ ಮುಂದೆ ಹೋರಾಟದ ಸ್ವರೂಪವನ್ನು ಬದಲಾಯಿಸಿ, ಜಿಲ್ಲಾಧಿಕಾರಿ ಕಚೇ‌ರಿ ಎದುರು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಮುಳುಗಡೆ ಸಂತ್ರಸ್ತರ ಬೇಡಿಕೆಯನ್ನು ಈಡೇರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನುದಾನದ ಕೊರತೆಯ ಕಾರಣ ನೀಡುವುದು ಸರಿಯಲ್ಲ. ನಾಡಿನ ಒಳಿತಿಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಇಲ್ಲಿಯ ನಿವಾಸಿಗಳ ಬವಣೆಯನ್ನು ನಿವಾರಿಸಬೇಕಾದದ್ದು ಆದ್ಯ ಕರ್ತವ್ಯ ಎಂದು ಒತ್ತಾಯಿಸಿದರು.

ಶರಾವತಿ ಸಂತ್ರಸ್ತರ ಹೋರಾಟ ವೇದಿಕೆಯ ಸಂಚಾಲಕ ತೀ.ನಾ.ಶ್ರೀನಿವಾಸ್ ಮಾತನಾಡಿ, ‘ರಚನಾತ್ಮಕ ಮತ್ತು ಸಂಘಟಿತ ಹೋರಾಟದಿಂದ ಮಾತ್ರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಶೇಖರ ಗಾಳೀಪುರ ಮಾತನಾಡಿದರು. ತಾಲ್ಲೂಕು ಪಂಚಾಯಿತಿ‌ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ನಾಗರಾಜ ಗೌಡ, ಸದಸ್ಯರಾದ ಪ್ರಭಾವತಿ ಚಂದ್ರಕಾಂತ್, ಹರೀಶ್ ಗಂಟೆ, ದೇವರಾಜ್, ಓಂಕಾರ ಜೈನ್, ಯೋಗರಾಜ, ಉದಯ ಕುಮಾರ್ ಜೈನ್, ಪದ್ಮರಾಜ, ವಿಜಯಕುಮಾರ್, ಶೇಖರ, ರಾಜಕುಮಾರ್ ಇದ್ದರು.

ತಹಶೀಲ್ದಾರ್ ಮನವಿ ಸ್ವೀಕರಿಸಿದರು. ಸಬ್ ಇನ್‌ಸ್ಪೆಕ್ಟರ್ ತಿರುಮಲೇಶ್ ಬಂದೋಬಸ್ತ್‌ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT