ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹187 ಕೋಟಿಯಲ್ಲಿ ಸಿಎಂ ಪಾಲು ಎಷ್ಟು?: ಆರ್. ಅಶೋಕ

Published 1 ಜೂನ್ 2024, 0:11 IST
Last Updated 1 ಜೂನ್ 2024, 0:11 IST
ಅಕ್ಷರ ಗಾತ್ರ

ಶಿವಮೊಗ್ಗ: ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕ ರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವೇನು ಎಂಬುದು ಸ್ಪಷ್ಟವಾಗ ಬೇಕು. ₹ 187 ಕೋಟಿಯಲ್ಲಿ ಅವರಿಗೆ ಎಷ್ಟು ಪಾಲು ಸಂದಾಯವಾಗಿದೆ?’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಪ್ರಶ್ನಿಸಿದರು.

ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ.ಚಂದ್ರ ಶೇಖರನ್‌ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸಿದ್ದರಾಮಯ್ಯ ಅವರೇ ಹಣಕಾಸು ಖಾತೆ ನಿಭಾಯಿಸುತ್ತಾರೆ. ಹಣಕಾಸು ಸಚಿವಾಲಯದ ಅನುಮತಿ ಇಲ್ಲದೇ ಇಷ್ಟೊಂದು ದೊಡ್ಡ ಮೊತ್ತದ ಹಣ ಬೇನಾಮಿ ಖಾತೆಗಳಿಗೆ ವರ್ಗಾವಣೆ ಮಾಡಲು ಸಾಧ್ಯವೇ ಇಲ್ಲ’ ಎಂದರು.

‘ಹಗರಣದಲ್ಲಿ ಒಬ್ಬ ಮಂತ್ರಿ ಮಾತ್ರವಲ್ಲ, ಅನೇಕ ಮಂತ್ರಿಗಳು ಭಾಗಿಯಾಗಿದ್ದಾರೆ. ಇದಕ್ಕೆ ಮುಖ್ಯಮಂತ್ರಿಯ ಸಹಕಾರವೂ ಇದೆ’ ಎಂದು ಆರೋಪಿಸಿದ ಆರ್‌.ಅಶೋಕ್‌, ‘ನಿಗಮದ ಹಣ ಕಳವು ಮಾಡಿದವರು ಆರಾಮಾಗಿ ಓಡಾಡಿಕೊಂಡಿದ್ದಾರೆ. ಅವರೆಲ್ಲ ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡುತ್ತಾರೆ ಎಂಬ ಭಯದಿಂದಲೇ ಬಂಧಿಸದೇ ಬಿಟ್ಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದಾಗಲೆಲ್ಲ ಅಧಿಕಾರಿಗಳ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆ ನಡೆದಿರುವುದು ಕಾಣುತ್ತೇವೆ. ನಾವು ಆ ಭಾಗ್ಯ ಈ ಭಾಗ್ಯ ಕೊಟ್ಟೆವು ಎನ್ನುತ್ತಾರೆ. ಭಾಗ್ಯ, ಭಾಗ್ಯ ಅನ್ನುತ್ತಲೇ ನಿಷ್ಠಾವಂತ ಅಧಿಕಾರಿಗಳ ಬದುಕುವ ಭಾಗ್ಯವನ್ನೇ ಸಿದ್ದರಾಮಯ್ಯ ಕಿತ್ತುಕೊಂಡುಬಿಟ್ಟಿದ್ದಾರೆ’ ಎಂದು ಹರಿಹಾಯ್ದರು.

‘ಚಂದ್ರಶೇಖರನ್‌ ಕುಟುಂಬದವರು ಕೇಳದೇ ಇದ್ದರೂ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಇದೆಲ್ಲವೂ ಹಗರಣ ಮುಚ್ಚಿಹಾಕುವ ಷಡ್ಯಂತ್ರ. ಈಗ ಸಿಬಿಐ ತನಿಖೆಗೆ ಬ್ಯಾಂಕ್‌ನವರೇ ವಿನಂತಿ ಮಾಡಿದ್ದಾರೆ. ಹೇಗಿದ್ದರೂ ಸತ್ಯ ಹೊರಬರಲಿದೆ. ಸರ್ಕಾರದ ಮಾನ ಮರ್ಯಾದೆ ಉಳಿಸಿಕೊಳ್ಳಲಾದರೂ ಸಿಬಿಐ ತನಿಖೆಗೆ ಕೊಟ್ಟು ಕೈ ತೊಳೆದುಕೊಳ್ಳಲಿ’ ಎಂದರು.

‘ಪರಮೇಶ್ವರ ಅಸಹಾಯಕ ಗೃಹ ಸಚಿವ’

ಶಿವಮೊಗ್ಗ: ಪ್ರಕರಣದ ತನಿಖೆ ಸಿಬಿಐಗೆ ಕೊಡುವುದಿಲ್ಲ ಎಂಬ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್.ಅಶೋಕ, ‘ಪರಮೇಶ್ವರ ಒಬ್ಬ ಅಸಹಾಯಕ ಗೃಹಸಚಿವ. ದಾರಿಯಲ್ಲಿ ಹೋಗುವವರೆಲ್ಲ ಅವರ ಖಾತೆ ನಿರ್ವಹಿಸುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಆಯಾ ಜಿಲ್ಲೆಗಳ ಮಂತ್ರಿಗಳು ಕೈ ಆಡಿಸುತ್ತಾರೆ. ಹೀಗಾಗಿ ಅವರಿಗೆ ಇಲಾಖೆಯ ಬಗ್ಗೆ ಆಸಕ್ತಿಯೂ ಇಲ್ಲ. ಗಮನವೂ ಇಲ್ಲ’ ಎಂದರು.

ಪ್ರಾಮಾಣಿಕ ಅಧಿಕಾರಿ ಸರ್ಕಾರದ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದೇ ಕಾಂಗ್ರೆಸ್‌ನ ಒಂದು ವರ್ಷದ ಸಾಧನೆ. ಮೊದಲ ವಿಕೆಟ್ (ಸಚಿವ ಬಿ.ನಾಗೇಂದ್ರ ರಾಜೀನಾಮೆ) ಪತನವಾಗುವವರೆಗೂ ನಾವು ಬಿಡುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT