ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಕುಡಿಯುವ ನೀರು: 2 ದಿನಕ್ಕೆ ಒಮ್ಮೆ ವರದಿ

Published 11 ನವೆಂಬರ್ 2023, 6:27 IST
Last Updated 11 ನವೆಂಬರ್ 2023, 6:27 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ತೀವ್ರ ಬರ ಇರುವುದರಿಂದ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು. ಈ ಸಂಬಂಧ ಜಿಲ್ಲಾ ಆಡಳಿತಕ್ಕೆ ಎರಡು ದಿನಗಳಿಗೆ ಒಮ್ಮೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ (ಕೆಡಿಪಿ) ಬರ ನಿರ್ವಹಣೆ ಬಗ್ಗೆ ಸುಧೀರ್ಘ ಚರ್ಚೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಎಚ್ಚರಿಕೆಯಿಂದ ಇರುವಂತೆ ನಿರ್ದೇಶಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಪಿಡಿಒ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಒಟ್ಟಾಗಿ ಎರಡು ದಿನಕ್ಕೆ ಒಮ್ಮೆ ಯಾವ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬ ಬಗ್ಗೆ ಚರ್ಚಿಸಿ ವರದಿ ನೀಡಬೇಕು. ವರದಿ ಬಂದ ತಕ್ಷಣ ಜಿಲ್ಲಾ ಆಡಳಿತ ಕ್ರಮ ಕೈಗೊಳ್ಳುತ್ತದೆ. ಬರದ ತೀವ್ರತೆ ಕಡಿಮೆ ಆಗುವವರೆಗೂ ವರದಿ ನೀಡುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಹೇಳಿದರು.

ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕೆಲಸ ಸಿಗದೆ ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಉದ್ಯೋಗ ನೀಡಬೇಕು ಎಂದು ಸೂಚಿಸಿದರು.

ಕಾರ್ಯಪಡೆ: ಹಿಂದಿನ ಸಭೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸದ ಬಗ್ಗೆ ಪ್ರಸ್ತಾಪಿಸಿದ್ದರೂ ಈವರೆಗೂ ಕ್ರಮ ಕೈಗೊಳ್ಳದ ಬಗ್ಗೆ ಶಾಸಕರಾದ ಬಿ.ಸುರೇಶ್‌ಗೌಡ, ಸಿ.ಬಿ.ಸುರೇಶ್‌ಬಾಬು, ಕೆ.ಷಡಾಕ್ಷರಿ, ಎಂ.ಟಿ.ಕೃಷ್ಣಪ್ಪ, ಎಚ್.ಡಿ.ರಂಗನಾಥ್ ಸೇರಿದಂತೆ ಬಹುತೇಕ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ‘ಐದು ಮಂದಿ ಅಧಿಕಾರಿಗಳ ಕಾರ್ಯಪಡೆಯನ್ನು ತಕ್ಷಣ ರಚಿಸಬೇಕು. ದೂರುಗಳು ಬಂದಿರುವ ಸ್ಥಳಗಳಿಗೆ ಈ ತಂಡ ಭೇಟಿನೀಡಿ ಒಂದು ವಾರದಲ್ಲಿ ವರದಿ ನೀಡಬೇಕು. ಈ ವರದಿ ಆಧಾರದ ಮೇಲೆ ನೀರಿನ ಘಟಕಗಳು ಕಾರ್ಯನಿರ್ವಹಿಸುವಂತೆ ಮಾಡಬೇಕು’ ಎಂದು ಜಿ.ಪಂ ಸಿಇಒಗೆ ಸೂಚಿಸಿದರು.

ಇದಕ್ಕೆ ವಿವರಣೆ ನೀಡಿದ ಜಿ.ಪಂ ಸಿಇಒ ಜಿ.ಪ್ರಭು, ‘ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 1,466 ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಿದ್ದು, ಅದರಲ್ಲಿ 1,421 ಘಟಕಗಳು ಕೆಲಸ ಮಾಡುತ್ತಿವೆ. ಪ್ರತಿ ಘಟಕದ ನಿರ್ವಹಣೆಗೆ ಪ್ರತಿ ತಿಂಗಳು ಜಿ.ಪಂನಿಂದ ₹3 ಸಾವಿರ ಹಣ ನೀಡಲಾಗುತ್ತಿದೆ. ಖಾಸಗಿ ಸಂಸ್ಥೆಗಳು 91 ಘಟಕಗಳನ್ನು ನಿರ್ಮಿಸಿದ್ದು, ಅವುಗಳಲ್ಲಿ 41 ಕೆಲಸ ಮಾಡುತ್ತಿಲ್ಲ. ಎಲ್ಲವನ್ನೂ ಇಲಾಖೆ ವ್ಯಾಪ್ತಿಗೆ ವಹಿಸಿಕೊಳ್ಳುವ ಕೆಲಸ ಪೂರ್ಣಗೊಂಡ ನಂತರ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಲಾಗುವುದು. ಇನ್ನು ಮುಂದೆ ಘಟಕ ಸ್ಥಾಪಿಸುವ ಮುನ್ನ ಜಿ.ಪಂ ಅನುಮತಿ ಪಡೆಯಬೇಕು. ನಂತರ ಕಡ್ಡಾಯವಾಗಿ ಇಲಾಖೆಗೆ ವರ್ಗಾವಣೆ ಮಾಡುವಂತೆ ನಿರ್ದೇಶಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಬೋರ್‌ವೆಲ್: ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಶಾಸಕರ ನೇತೃತ್ವದ ಕಾರ್ಯಪಡೆಯಲ್ಲಿ ನಿರ್ಧಾರ ತೆಗೆದುಕೊಂಡು ತಕ್ಷಣವೇ ಕೊಳವೆ ಬಾವಿ ಕೊರೆಸಲಾಗುತಿತ್ತು. ಈಗ ನಿರ್ಧಾರ ತೆಗೆದುಕೊಂಡು ಜಿಲ್ಲಾ ಆಡಳಿತಕ್ಕೆ ವರದಿ ಕಳುಹಿಸಬೇಕು. ಅಧಿಕಾರಿಗಳು ಒಪ್ಪಿಗೆ ನೀಡಿದ ನಂತರ ಕೊರೆಸಬೇಕಿದೆ. ಇದರಿಂದ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದು, ಹಿಂದಿನಂತೆ ಅವಕಾಶ ನೀಡಬೇಕು ಎಂದು ಶಾಸಕರು ಒತ್ತಾಯಿಸಿದರು. ಇದಕ್ಕೆ ಸಚಿವರು ಒಪ್ಪಿಗೆ ಸೂಚಿಸಲಿಲ್ಲ. ನಿಯಮ ರೂಪಿಸಿದ್ದು, ಅದರಂತೆ ನಡೆದುಕೊಳ್ಳಬೇಕು. ಕಾರ್ಯಪಡೆಯಿಂದ ವರದಿ ಬಂದ ಅರ್ಧ ಗಂಟೆಯಲ್ಲಿ ಒಪ್ಪಿಗೆ ನೀಡಲಾಗುತ್ತದೆ ಎಂದರು.

ಹೇಮೆ ನೀರು: ಮುಂಗಾರು ಮಳೆ ಆರಂಭದವರೆಗೂ ಕುಡಿಯುವ ನೀರು ಕೊಡಬೇಕಾಗಿದೆ. ಅದಕ್ಕಾಗಿ ಕೆರೆಗಳನ್ನು ತುಂಬಿಸಿ, ಕುಡಿಯಲು ಮಾತ್ರ ಬಳಕೆ ಮಾಡಲಾಗುತ್ತಿದೆ. ಬೆಳೆಗೆ ನೀರು ಕೊಡುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಕೆಡಿಪಿ ಸಭೆಯಲ್ಲಿ ಶಾಸಕರಾದ ಬಿ.ಸುರೇಶ್‌ಗೌಡ ಹಾಗೂ ಡಾ.ಎಚ್.ಡಿ.ರಂಗನಾಥ್ ನಡುವೆ ವಾಗ್ದಾದ ನಡೆಯಿತು
ಕೆಡಿಪಿ ಸಭೆಯಲ್ಲಿ ಶಾಸಕರಾದ ಬಿ.ಸುರೇಶ್‌ಗೌಡ ಹಾಗೂ ಡಾ.ಎಚ್.ಡಿ.ರಂಗನಾಥ್ ನಡುವೆ ವಾಗ್ದಾದ ನಡೆಯಿತು
ಮಾಗಡಿಗೆ ನೀರು ಕೊಡಲ್ಲ
ಹೇಮಾವತಿ ನೀರಿನ ವಿಚಾರದಲ್ಲಿ ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ಹಾಗೂ ಕುಣಿಗಲ್ ಶಾಸಕ ಕೆ.ಎಚ್.ರಂಗನಾಥ್ ನಡುವೆ ಜಟಾಪಟಿ ನಡೆಯಿತು. ವಿಷಯ ಪ್ರಸ್ತಾಪಿಸಿದ ರಂಗನಾಥ್ ‘ನಮ್ಮ ತಾಲ್ಲೂಕಿಗೆ ಹಂಚಿಕೆ ಆಗಿರುವಷ್ಟು ನೀರು ಬರುತ್ತಿಲ್ಲ. ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ. ನಮ್ಮ ಪಾಲಿನ ನೀರು ನಮಗೆ ಹರಿಸಬೇಕು’ ಎಂದು ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಸುರೇಶ್‌ಗೌಡ ‘ಗ್ರಾಮಾಂತರ ಕ್ಷೇತ್ರದಲ್ಲಿ ₹60 ಕೋಟಿ ವೆಚ್ಚದಲ್ಲಿ ಏತ ನೀರಾವರಿ ₹120 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ. ಆದರೆ ಕೆರೆಗಳಿಗೆ ನೀರು ತುಂಬಿಸದೆ ಸಮಸ್ಯೆಯಾಗುತ್ತಿದೆ. ನಮಗೆ ನೀರು ಇಲ್ಲದಿರುವಾಗ ಮಾಗಡಿ ತಾಲ್ಲೂಕಿಗೆ ನೀರು ತೆಗೆದುಕೊಂಡು ಹೋಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಹೋರಾಟ ಮಾಡುತ್ತೇನೆ’ ಎಂದರು. ಈ ಸಮಯದಲ್ಲಿ ಇಬ್ಬರು ಶಾಸಕರ ನಡುವೆ ವಾಗ್ವಾದ ನಡೆಯಿತು. ‘ನಾನು ನಿಮ್ಮಂತಹವರ ಸಾಕಷ್ಟು ಹೋರಾಟ ನೋಡಿದ್ದೇನೆ. ಮಾಗಡಿಗೆ ನೀರು ಕೊಡಿ ಎಂದು ಹೇಳಿಲ್ಲ. ನಮ್ಮ ಪಾಲಿನ ನೀರು ನಮಗೆ ಬೇಕು’ ಎಂದು ರಂಗನಾಥ್ ಒತ್ತಾಯಿಸಿದರು. ‘ನಿಮ್ಮ ಸರ್ಕಾರ ಇಟ್ಟುಕೊಂಡು ಈ ರೀತಿ ಕೇಳುವುದು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ’ ಎಂದು ಸುರೇಶ್‌ಗೌಡ ಕಾಲೆಳೆದರು. ಈ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸೋಣ ಎಂದು ಪರಮೇಶ್ವರ ವಿವಾದಕ್ಕೆ ತೆರೆ ಎಳೆದರು.
ಆಸ್ಪತ್ರೆ ಅವ್ಯವಸ್ಥೆ
ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಮಧ್ಯಾಹ್ನವಾದರೂ ವೈದ್ಯರು ಬರುವುದಿಲ್ಲ ಎಂದು ಸಿ.ಬಿ.ಸುರೇಶ್‌ಬಾಬು ಹೇಳಿದರು. ಡಾ.ಎಚ್.ಡಿ.ರಂಗನಾಥ್ ಕೆ.ಷಡಾಕ್ಷರಿ ಸಹ ವೈದ್ಯರ ಕಾರ್ಯ ನಿರ್ವಹಣೆ ಬಗ್ಗೆ ಆಕ್ಷೇಪಿಸಿದರು. ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಸಹ ಶಿರಾ ಆಸ್ಪತ್ರೆ ಅವ್ಯವಸ್ಥೆ ಬಿಚ್ಚಿಟ್ಟರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ತಮ್ಮ ಕೆಲಸ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಯಾವ ಸಮಸ್ಯೆಯನ್ನು ಸರಿಪಡಿಸುತ್ತಿಲ್ಲ. ಆಸ್ಪತ್ರೆಗಳಿಗೆ ಭೇಟಿ ನೀಡಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಾಸಕರು ಒಮ್ಮೆಲೆ ತರಾಟೆಗೆ ತೆಗೆದುಕೊಂಡರು. ಟಿ.ಬಿ.ಜಯಚಂದ್ರ ಸಹ ಇದಕ್ಕೆ ಧ್ವನಿಗೂಡಿಸಿ ಶಿರಾ ಆಸ್ಪತ್ರೆಯಲ್ಲಿ ಗುಂಪುಗಾರಿಕೆ ಜಾಸ್ತಿಯಾಗಿದೆ. ರಾತ್ರಿ ವೇಳೆ ವೈದ್ಯರೇ ಇರುವುದಿಲ್ಲ. ನೀವೇನು ಕೆಲಸ ಮಾಡುತ್ತಿದ್ದೀರಿ ಎಂದು ಡಿಎಚ್‌ಒ ಪ್ರಶ್ನಿಸಿದರು. ಡಿಎಚ್‌ಒ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಪರಮೇಶ್ವರ ‘ಪ್ರತಿ ತಾಲ್ಲೂಕು ಆಸ್ಪತ್ರೆ ಆರೋಗ್ಯ ಕೇಂದ್ರಗಳಿಗೂ ಭೇಟಿನೀಡಿ ಸರಿಪಡಿಸಬೇಕು. ಪ್ರತಿ ಆಸ್ಪತ್ರೆಯಲ್ಲೂ ಸಂದರ್ಶಕರ ಪುಸ್ತಕ ಇಡಬೇಕು. ಆಸ್ಪತ್ರೆಗೆ ಅಧಿಕಾರಿಗಳು ಭೇಟಿ ನೀಡಿದ ಸಮಯದಲ್ಲಿ ವಿವರಗಳನ್ನು ದಾಖಲಿಸುತ್ತಾರೆ. ಇದರಿಂದ ಸಮಸ್ಯೆ ಸರಿಪಡಿಸಬಹುದು ಎಂದು ಸೂಚಿಸಿದರು.
ಶಾಲೆಗೆ ಕಾಯಕಲ್ಪ
ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಎರಡು ವರ್ಷಗಳಲ್ಲಿ ಸುಸಜ್ಜಿತ ಕೊಠಡಿ ಆಟದ ಮೈದಾನ ಕಾಂಪೌಂಡ್ ಅಂಗನವಾಡಿಗಳಿಗೆ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಪರಮೇಶ್ವರ ತಿಳಿಸಿದರು. ಕಾರ್ಪೋರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ (ಸಿಎಸ್ಆರ್) ಸುಮಾರು ₹135 ಕೋಟಿ ಹಣ ಬರಲಿದ್ದು ಇದರಲ್ಲಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು. ಸಿಎಸ್‌ಆರ್ ನಿಧಿಯ ನೆರವನ್ನು ನಾವು ಪಡೆದುಕೊಳ್ಳುವುದಿಲ್ಲ. ಅವರೇ ತಮ್ಮ ಹಣದಲ್ಲಿ ಶಾಲೆಗಳಿಗೆ ಮೂಲ ಸೌಕರ್ಯ ನಿರ್ಮಿಸಲಿದ್ದಾರೆ. ಎರಡು ವರ್ಷಗಳಲ್ಲಿ ಸುಸಜ್ಜಿತ ಶಾಲೆಗಳು ನಿರ್ಮಾಣವಾಗಲಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT