ಕೆಡಿಪಿ ಸಭೆಯಲ್ಲಿ ಶಾಸಕರಾದ ಬಿ.ಸುರೇಶ್ಗೌಡ ಹಾಗೂ ಡಾ.ಎಚ್.ಡಿ.ರಂಗನಾಥ್ ನಡುವೆ ವಾಗ್ದಾದ ನಡೆಯಿತು
ಮಾಗಡಿಗೆ ನೀರು ಕೊಡಲ್ಲ
ಹೇಮಾವತಿ ನೀರಿನ ವಿಚಾರದಲ್ಲಿ ಗ್ರಾಮಾಂತರ ಶಾಸಕ ಬಿ.ಸುರೇಶ್ಗೌಡ ಹಾಗೂ ಕುಣಿಗಲ್ ಶಾಸಕ ಕೆ.ಎಚ್.ರಂಗನಾಥ್ ನಡುವೆ ಜಟಾಪಟಿ ನಡೆಯಿತು. ವಿಷಯ ಪ್ರಸ್ತಾಪಿಸಿದ ರಂಗನಾಥ್ ‘ನಮ್ಮ ತಾಲ್ಲೂಕಿಗೆ ಹಂಚಿಕೆ ಆಗಿರುವಷ್ಟು ನೀರು ಬರುತ್ತಿಲ್ಲ. ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ. ನಮ್ಮ ಪಾಲಿನ ನೀರು ನಮಗೆ ಹರಿಸಬೇಕು’ ಎಂದು ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಸುರೇಶ್ಗೌಡ ‘ಗ್ರಾಮಾಂತರ ಕ್ಷೇತ್ರದಲ್ಲಿ ₹60 ಕೋಟಿ ವೆಚ್ಚದಲ್ಲಿ ಏತ ನೀರಾವರಿ ₹120 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ. ಆದರೆ ಕೆರೆಗಳಿಗೆ ನೀರು ತುಂಬಿಸದೆ ಸಮಸ್ಯೆಯಾಗುತ್ತಿದೆ. ನಮಗೆ ನೀರು ಇಲ್ಲದಿರುವಾಗ ಮಾಗಡಿ ತಾಲ್ಲೂಕಿಗೆ ನೀರು ತೆಗೆದುಕೊಂಡು ಹೋಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಹೋರಾಟ ಮಾಡುತ್ತೇನೆ’ ಎಂದರು. ಈ ಸಮಯದಲ್ಲಿ ಇಬ್ಬರು ಶಾಸಕರ ನಡುವೆ ವಾಗ್ವಾದ ನಡೆಯಿತು. ‘ನಾನು ನಿಮ್ಮಂತಹವರ ಸಾಕಷ್ಟು ಹೋರಾಟ ನೋಡಿದ್ದೇನೆ. ಮಾಗಡಿಗೆ ನೀರು ಕೊಡಿ ಎಂದು ಹೇಳಿಲ್ಲ. ನಮ್ಮ ಪಾಲಿನ ನೀರು ನಮಗೆ ಬೇಕು’ ಎಂದು ರಂಗನಾಥ್ ಒತ್ತಾಯಿಸಿದರು. ‘ನಿಮ್ಮ ಸರ್ಕಾರ ಇಟ್ಟುಕೊಂಡು ಈ ರೀತಿ ಕೇಳುವುದು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ’ ಎಂದು ಸುರೇಶ್ಗೌಡ ಕಾಲೆಳೆದರು. ಈ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸೋಣ ಎಂದು ಪರಮೇಶ್ವರ ವಿವಾದಕ್ಕೆ ತೆರೆ ಎಳೆದರು.
ಆಸ್ಪತ್ರೆ ಅವ್ಯವಸ್ಥೆ
ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಮಧ್ಯಾಹ್ನವಾದರೂ ವೈದ್ಯರು ಬರುವುದಿಲ್ಲ ಎಂದು ಸಿ.ಬಿ.ಸುರೇಶ್ಬಾಬು ಹೇಳಿದರು. ಡಾ.ಎಚ್.ಡಿ.ರಂಗನಾಥ್ ಕೆ.ಷಡಾಕ್ಷರಿ ಸಹ ವೈದ್ಯರ ಕಾರ್ಯ ನಿರ್ವಹಣೆ ಬಗ್ಗೆ ಆಕ್ಷೇಪಿಸಿದರು. ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಸಹ ಶಿರಾ ಆಸ್ಪತ್ರೆ ಅವ್ಯವಸ್ಥೆ ಬಿಚ್ಚಿಟ್ಟರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ತಮ್ಮ ಕೆಲಸ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಯಾವ ಸಮಸ್ಯೆಯನ್ನು ಸರಿಪಡಿಸುತ್ತಿಲ್ಲ. ಆಸ್ಪತ್ರೆಗಳಿಗೆ ಭೇಟಿ ನೀಡಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಾಸಕರು ಒಮ್ಮೆಲೆ ತರಾಟೆಗೆ ತೆಗೆದುಕೊಂಡರು. ಟಿ.ಬಿ.ಜಯಚಂದ್ರ ಸಹ ಇದಕ್ಕೆ ಧ್ವನಿಗೂಡಿಸಿ ಶಿರಾ ಆಸ್ಪತ್ರೆಯಲ್ಲಿ ಗುಂಪುಗಾರಿಕೆ ಜಾಸ್ತಿಯಾಗಿದೆ. ರಾತ್ರಿ ವೇಳೆ ವೈದ್ಯರೇ ಇರುವುದಿಲ್ಲ. ನೀವೇನು ಕೆಲಸ ಮಾಡುತ್ತಿದ್ದೀರಿ ಎಂದು ಡಿಎಚ್ಒ ಪ್ರಶ್ನಿಸಿದರು. ಡಿಎಚ್ಒ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಪರಮೇಶ್ವರ ‘ಪ್ರತಿ ತಾಲ್ಲೂಕು ಆಸ್ಪತ್ರೆ ಆರೋಗ್ಯ ಕೇಂದ್ರಗಳಿಗೂ ಭೇಟಿನೀಡಿ ಸರಿಪಡಿಸಬೇಕು. ಪ್ರತಿ ಆಸ್ಪತ್ರೆಯಲ್ಲೂ ಸಂದರ್ಶಕರ ಪುಸ್ತಕ ಇಡಬೇಕು. ಆಸ್ಪತ್ರೆಗೆ ಅಧಿಕಾರಿಗಳು ಭೇಟಿ ನೀಡಿದ ಸಮಯದಲ್ಲಿ ವಿವರಗಳನ್ನು ದಾಖಲಿಸುತ್ತಾರೆ. ಇದರಿಂದ ಸಮಸ್ಯೆ ಸರಿಪಡಿಸಬಹುದು ಎಂದು ಸೂಚಿಸಿದರು.
ಶಾಲೆಗೆ ಕಾಯಕಲ್ಪ
ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಎರಡು ವರ್ಷಗಳಲ್ಲಿ ಸುಸಜ್ಜಿತ ಕೊಠಡಿ ಆಟದ ಮೈದಾನ ಕಾಂಪೌಂಡ್ ಅಂಗನವಾಡಿಗಳಿಗೆ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಪರಮೇಶ್ವರ ತಿಳಿಸಿದರು. ಕಾರ್ಪೋರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ (ಸಿಎಸ್ಆರ್) ಸುಮಾರು ₹135 ಕೋಟಿ ಹಣ ಬರಲಿದ್ದು ಇದರಲ್ಲಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು. ಸಿಎಸ್ಆರ್ ನಿಧಿಯ ನೆರವನ್ನು ನಾವು ಪಡೆದುಕೊಳ್ಳುವುದಿಲ್ಲ. ಅವರೇ ತಮ್ಮ ಹಣದಲ್ಲಿ ಶಾಲೆಗಳಿಗೆ ಮೂಲ ಸೌಕರ್ಯ ನಿರ್ಮಿಸಲಿದ್ದಾರೆ. ಎರಡು ವರ್ಷಗಳಲ್ಲಿ ಸುಸಜ್ಜಿತ ಶಾಲೆಗಳು ನಿರ್ಮಾಣವಾಗಲಿವೆ ಎಂದರು.