ತುಮಕೂರು: ಸರ್ಕಾರ ಕಲಾವಿದರಿಗೆ ಎಷ್ಟೇ ಅನುದಾನ ನೀಡಿ ಸಹಕಾರ ನೀಡಬಹುದು ಆದರೆ ಅವರನ್ನು ಹುಟ್ಟು ಹಾಕುವುದು ಸಮಾಜ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಭೀಮಸೇನ ತಿಳಿಸಿದರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಕಲಾವಿದರನ್ನು ಸಮಾಜ ಗೌರವಿಸುತ್ತದೆ. ಸಮಾಜ ಅವರನ್ನು ಬೆಳೆಸಬೇಕು ಎಂದರು.
ಸಂಸದ ಜಿ.ಎಸ್.ಬಸವರಾಜ್ ಮಾತನಾಡಿ, ಜಿಲ್ಲೆಯ ಗುಬ್ಬಿ ವೀರಣ್ಣ ಅವರನ್ನು ಇಡೀ ನಾಡೇ ನೆನಪಿಸಿಕೊಳ್ಳುತ್ತದೆ. ಅವರು ಇಂಗ್ಲೆಂಡ್ ನಲ್ಲಿ ಅಥವಾ ಬೇರೆ ದೇಶಗಳಲ್ಲಿ ಇದಿದ್ದರೆ ಇಡೀ ದೇಶವೇ ಅಂತಹವರ ಸಾಧನೆಯನ್ನು ಕೊಂಡಾಡುತ್ತಿತ್ತು. ಆದರೆ ನಮ್ಮಲ್ಲಿ ವೀರಣ್ಣ ಅವರ ಸಾಧನೆ ರಾಜ್ಯದ ಗಡಿ ದಾಟಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಪ್ರಭುತ್ವದಿಂದ ಹಿಡಿದು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯವರೆಗೂ ಸರ್ಕಾರಗಳು ಕಲಾವಿದರನ್ನು ಗೌರವಿಸುತ್ತಿವೆ.
ಮಳವಳ್ಳಿ ಸುಂದರಮ್ಮ, ರಾಜಮ್ಮ, ನಾಗೇಂದ್ರ ರಾಯರು, ಡಿ.ದುರ್ಗಾದಾಸ್, ಮಾಸ್ಟರ್ ಹಿರಣ್ಣಯ್ಯ, ಸಿ.ಆರ್.ಸಿಂಹ, ಮಾಲತಮ್ಮ ಅವರು ಹೀಗೆ ಹಲವರು ರಂಗ ಕಲಾವಿದರಿಗೆ ನಾಡು ಗೌರವ ಸಲ್ಲಿಸಿದೆ. ಅವರ ಸಾಧನೆಯನ್ನು ಕೊಂಡಾಡಿದೆ ಎಂದರು.
ಜೀವನದ ಸಾಧನೆಗಾಗಿ 2019-20ನೇ ಸಾಲಿನ ರಂಗಗೌರವ ಪ್ರಶಸ್ತಿಯನ್ನು ಜಿ.ವಿ.ಶಾರದ ಅವರಿಗೆ ಪ್ರದಾನ ಮಾಡಲಾಯಿತು
ಜೀವಮಾನ ಸಾಧನೆಯ ಪ್ರಶಸ್ತಿ, ದತ್ತಿ ಪ್ರಶಸ್ತಿಗಳನ್ನು ಕಲಾವಿದರಿಗೆ ನೀಡಲಾಗುತ್ತಿದೆ. ಈ ಮೂಲಕ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ನಾಟಕ ಅಕಾಡೆಮಿ ಮಾಡುತ್ತಿದೆ ಎಂದರು.
ಈ ಪ್ರಶಸ್ತಿಗಳ ಮೂಲಕ ಅವರ ಕಲಾ ಸೇವೆಯನ್ನು ಗುರುತಿಸುತ್ತಿರುವುದು ಒಳ್ಳೆಯ ಬೆಳವಣಿಗೆ.
ವೀರಣ್ಣ ಅವರು ನಮ್ಮ ಮನೆಗೆ ಬಂದರೆ ಎರಡು ಮೂರು ದಿನ ಉಳಿಯುತ್ತಿದ್ದರು. ನಮ್ಮ ತಾತನಿಗೆ ವೀರಣ್ಣ ಆತ್ಮೀಯರು ಎಂದು ಸ್ಮರಿಸಿದರು.
ಸಣ್ಣ ಹುಡುಗನಿದ್ದ ಸಮಯದಿಂದಲೂ ವೀರಣ್ಣ ಅವರನ್ನು ನಾನು ಬಲ್ಲೆ ಎಂದರು.