ತುಮಕೂರು: ಕಲೆಗಳು ಜೀವನ ಉತ್ಸಾಹ ತುಂಬುವ ಔಷಧಿಗಳು ಎಂದು ರಂಗಾಸಕ್ತ ಗೋವಿಂದೇಗೌಡ ಹೇಳಿದರು.
ಚಿಕ್ಕದಾಳವಟ್ಟದ ಲೋಕಚರಿತ ರಂಗ ಕೇಂದ್ರ, ತುಮಕೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಮೈಸೂರು ರಂಗಾಯಣದ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿರುವ ‘ಮೂರು ದಿನಗಳ ನಾಟಕೋತ್ಸವ–ಬಕಾಲ ಕವಿ ಕೆ.ವಿ.ಸಿದ್ಧಯ್ಯ ಅವರಿಗೆ ರಂಗನಮನ’ ಉದ್ಘಾಟಿಸಿ ಅವರು ಮಾತನಾಡಿದರು.
ನಾಟಕ, ಸಂಗೀತ, ಕ್ರೀಡೆಗಳು ಉತ್ತಮ ಜೀವನಕ್ಕೆ ಪ್ರೋತ್ಸಾಹ ನೀಡುತ್ತವೆ. ನಮ್ಮನ್ನು ಆರೋಗ್ಯವಂತರನ್ನಾಗಿ ಇಡುತ್ತವೆ. ಅಂತಹ ಕಲೆಗಳನ್ನು ಉಳಿಸಿ, ಬೆಳೆಸುವುದರಲ್ಲಿ ತುಮಕೂರು ಜಿಲ್ಲೆ ಮುಂದಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಸವರಾಜು ಅಪ್ಪಿನಕಟ್ಟೆ ಮಾತನಾಡಿ, ಕೆ.ಬಿ. ಅವರ ನೆನಪುಗಳನ್ನು ಮರುಕಳಿಸುವ ನಿಟ್ಟಿನಲ್ಲಿ ರಾಜ್ಯದ ಆದ್ಯಂತ ಕಾರ್ಯಕ್ರಮಗಳು ನಡೆದಿವೆ. ಮೈಸೂರಿನ ರಂಗಾಯಣದ ರಂಗಸಂಚಾರ ತಂಡದ ಯುವ ಕಲಾವಿದರು ಈ ನಾಟಕೋತ್ಸವದಲ್ಲಿ ರಂಗಪ್ರಯೋಗಗಳನ್ನು ಮಾಡುತ್ತಿದ್ದಾರೆ. ಆಸಕ್ತರು ಈ ಪ್ರದರ್ಶನಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಚಮಾರಯ್ಯ, ಜಿಲ್ಲೆಯಲ್ಲಿ ರಂಗಭೂಮಿಯನ್ನು ಮತ್ತಷ್ಟು ಬೆಳೆಸಲು ಲಕ್ಷ್ಮಣದಾಸ್, ಕಾಮರಾಜ್ ಶ್ರಮಿಸುತ್ತಿದ್ದಾರೆ. ಯುವ ಕಲಾವಿದರ ಈ ನಾಟಕೋತ್ಸವವನ್ನು ಸದಭಿರುಚಿಯ ಪ್ರೇಕ್ಷಕರು ಬಂದು ಯಶಸ್ವಿಗೊಳಿಸಬೇಕು ಎಂದು ಬಯಸಿದರು.
ಯುವ ಮುಖಂಡ ಕೊಟ್ಟ ಶಂಕರ್, ಕೆ.ಬಿ. ನಾಡಿನ ಹೆಮ್ಮೆಯ ಕವಿ. ಬೀದರ್ನಿಂದ–ಚಾಮರಾಜನಗರದ ವರೆಗಿನ ಹಲವಾರು ಊರುಗಳಲ್ಲಿ ಅವರ ಸ್ಮರಣೆಯಲ್ಲಿ ವಿಚಾರ ಸಂಕಿರಣ, ಸ್ಮರಣಾ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ವಿಚಾರ ಎಂದರು.