ತುಮಕೂರು: ಗ್ರಾಮದ ಕೆಎಸ್ಆರ್ಟಿಸಿ ಬಸ್ ಚಾಲಕರೊಬ್ಬರಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಬೆಳ್ಳಾವಿ ಸಮೀಪದ ಮಾವಿನಕುಂಟೆ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದೆ.
ಶಾಸಕ ಡಿ.ಸಿ.ಗೌರಿಶಂಕರ್ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಸ್ಥರಿಗೆ ಧೈರ್ಯ ತುಂಬಿದರು. 80ಕ್ಕೂ ಹೆಚ್ಚು ಮನೆಗಳಿಗೆ 20 ಕೆ.ಜಿ ದಿನಸಿ ಪದಾರ್ಥಗಳ ಕಿಟ್ ಮತ್ತು ತರಕಾರಿ, ಸ್ಯಾನಿಟೈಸರ್, ಮಾಸ್ಕ್ಗಳನ್ನು ವಿತರಿಸಿದರು.
ಸೋಂಕು ತಗುಲಿರುವ ವ್ಯಕ್ತಿ ಬಗ್ಗೆ ಪೂರ್ಣ ಮಾಹಿತಿ ಕಲೆಹಾಕಿ. ಕ್ವಾರಂಟೈನ್ ಮಾಡಿರುವವರನ್ನು ಒಂದೇ ಕೊಠಡಿಯಲ್ಲಿ ಕೂಡಿ ಹಾಕದೆ ಬೇರೆ ಬೇರೆ ದೊಡ್ಡ ಕೊಠಡಿಗಳಲ್ಲಿ ಕ್ವಾರಂಟೈನ್ ಮಾಡಬೇಕು. ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ಮಾಡಿದರು.
ಗ್ರಾಮದಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ರೋಗ ನಿವಾರಕ ಔಷಧಿ ಸಿಂಪಡಿಸಬೇಕು. ಕೊರೊನಾ ಯಾರಿಗೆ ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಕ್ವಾರಂಟೈನ್ನಲ್ಲಿರುವ ಬಗ್ಗೆ ಪ್ರೀತಿ, ವಿಶ್ವಾಸ ತೋರಬೇಕು ಎಂದು ಹೇಳಿದರು.