ತುಮಕೂರು: ಶಿವಕುಮಾರ ಸ್ವಾಮೀಜಿ ಶಿವೈಕ್ಯರಾಗಿ ಒಂದು ವರ್ಷವಾಗಿದೆ. ಸ್ವಾಮೀಜಿ ಅವರ ಬಳಿ 20ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಮಲ್ಲಾರಾಧ್ಯ ಅವರಲ್ಲಿ ಶಿವಕುಮಾರ ಶ್ರೀ ‘ನಮ್ಮ ನಡುವೆಯೇ ಇನ್ನೂ ಇದ್ದಾರೆ’ ಎನ್ನುವ ಭಾವ ಇದೆ. ಸ್ವಾಮೀಜಿ ಅವರ ನಿತ್ಯ ಚಟುವಟಿಕೆಗಳಲ್ಲಿ ಹೆಚ್ಚು ಜತೆಯಲ್ಲಿ ಇರುತ್ತಿದ್ದು ಇದೇ ಮಲ್ಲಾರಾಧ್ಯ.
ಸ್ವಾಮೀಜಿ ಅವರ ಸೇವೆಯೇ ಪರಮಸುಖ ಎಂದುಕೊಂಡಿದ್ದ ಮಲ್ಲಾರಾಧ್ಯ ಅವರು ಈ ಒಂದು ವರ್ಷ ಅನುಭವಿಸಿದ ನಿರ್ವಾತ ಹೇಗಿದೆ? ಅವರಿಂದಲೇ ಕೇಳೋಣ.
‘ನನ್ನ ತಂದೆ, ತಾಯಿ ಮಾಡಿದ ಫಲದ ಪರವಾಗಿ ನಾನು ಸ್ವಾಮೀಜಿ ಅವರ ಸೇವೆಗೆ ಸೇರಿಕೊಂಡೆ. 1988ರಿಂದ ಮಠಕ್ಕೆ ಬಂದೆ. 97ರಿಂದ 98ರಿಂದ ಸ್ವಾಮೀಜಿ ಬಳಿ ಸೇರಿದೆ. ಸ್ವಾಮೀಜಿ ಅವರ ದಿನಚರಿ ಆರಂಭವೇ ನಡುರಾತ್ರಿ 2.30ಕ್ಕೆ. ಎಷ್ಟೋ ಸಮಯ ಅವರು ಎದ್ದು ನಮ್ಮನ್ನು ನಿದ್ದೆಯಿಂದ ಎಚ್ಚರಿಸುತ್ತಿದ್ದರು.
ಈಗ ಶಿವಕುಮಾರ ಸ್ವಾಮೀಜಿ ಅವರ ಹಾದಿಯಲ್ಲಿಯೇ ಸಿದ್ದಲಿಂಗ ಸ್ವಾಮೀಜಿ ನಡೆಯುತ್ತಿದ್ದಾರೆ. ಅವರು ಸಹ ಇದೇ ಸಮಯಕ್ಕೆ ಎದ್ದು ಶಿವಪೂಜೆಗೆನಿರತರಾಗುತ್ತಿದ್ದಾರೆ.
ಶಿವಕುಮಾರ ಸ್ವಾಮೀಜಿ ಇಲ್ಲದ್ದು ನನ್ನಲ್ಲಿ ಕೆಲವು ವೇಳೆ ‘ಶೂನ್ಯ’ ಎನ್ನುವ ಭಾವ ಮೂಡಿಸಿದರೆ ಮತ್ತೆ ಬಹುತೇಕ ಸಮಯ ನಮ್ಮ ನಡುವೆಯೇ ಇದ್ದಾರೆ. ಅವರ ಕೆಲಸ ಕಾರ್ಯಗಳ ಮೂಲಕ ಎನಿಸುತ್ತದೆ.
ಅವರು ಹಾಕಿಕೊಟ್ಟ ಹಾದಿಯಲ್ಲಿ ನಮ್ಮ ಚಟುವಟಿಕೆಗಳು ನಡೆಯುತ್ತಿವೆ. ನಮಗೆ ಯಾವ ರೀತಿ ಸೇವೆ ಮಾಡಿದ್ದೀಯಾ ಚಿಕ್ಕ ಬುದ್ದಿಯವರಿಗೂ ಸೇವೆ ಮಾಡಬೇಕು ಎಂದು ದಿನಕ್ಕೆ ಎಂಟತ್ತು ಸಲ ಹೇಳುತ್ತಿದ್ದರು.