ಉಡುಪಿ: ಜಿಲ್ಲೆಯಲ್ಲಿ ಬುಧವಾರ ಮತ್ತೆ ಐವರು ಶಂಕಿತ ಕೊರೊನಾ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಮೂವರು, ಮಣಿಪಾಲದ ಕೆಎಂಸಿ ಹಾಗೂ ಕುಂದಾಪುರದ ತಾಲ್ಲೂಕು ಆಸ್ಪತ್ರೆಯಲ್ಲಿ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಐವರಲ್ಲಿ ಇಬ್ಬರು ದುಬೈ, ತಲಾ ಒಬ್ಬರು ಕತಾರ್, ಅಬುದಾಬಿ ಹಾಗೂ ಬಹರೈನ್ ದೇಶದಿಂದ ಈಚೆಗೆ ಮರಳಿದ್ದರು. ಅವರಲ್ಲಿ ಶಂಕಿತ ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್ಒ ಸುಧೀರ್ ಚಂದ್ರ ಸೂಡ ತಿಳಿಸಿದರು.
ಐವರ ಗಂಟಲು ದ್ರವದ ಮಾದರಿಯನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮಂಗಳವಾರ ಕಳಿಸಿದ್ದ ಐವರ ಪರೀಕ್ಷಾ ವರದಿ ಇನ್ನೂ ಕೈಸೇರಿಲ್ಲ. ಮೂರು ದಿನಗಳ ಹಿಂದೆ ಕೆಎಂಸಿಗೆ ದಾಖಲಾಗಿದ್ದ ಗರ್ಭಿಣಿಯ ಪರೀಕ್ಷಾ ವರದಿ ಬಂದಿದ್ದು, ಕೋವಿಡ್ ಸೋಂಕು ಇಲ್ಲ ಎಂದು ಡಿಎಚ್ಒ ಸ್ಪಷ್ಟಪಡಿಸಿದರು