ಉಡುಪಿ: ಕೋವಿಡ್–19 ಸೋಂಕನಿಂದ ಬಳಲುತ್ತಿದ್ದ ತುಳು ವಿದ್ವಾಂಸ ಹಾಗೂ ತುಳು ಭಾಷಾ ನಿಘಂಟು ತಜ್ಞ ಉಳಿಯಾರು ಪದ್ಮನಾಭ ಉಪಾಧ್ಯಾಯ (88) ಅವರು ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.
ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಈಚೆಗೆ ಸೋಂಕು ದೃಢಪಟ್ಟಿತ್ತು. ಮೃತರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.
ಕಾಪು ತಾಲ್ಲೂಕಿನ ಉಳಿಯಾರಿನ ಡಾ.ಯು.ಪಿ. ಉಪಾಧ್ಯಾಯ ಅವರು 3,400 ಪುಟಗಳ 6 ಸಂಪುಟಗಳನ್ನೊಳಗೊಂಡ ಬೃಹತ್ ತುಳು ನಿಘಂಟು ರಚಿಸಿದ್ದಾರೆ.
ತುಳು ಭಾಷಾ ಅಧ್ಯಯನ ಹಾಗೂ ತುಳು ಮೌಖಿಕ ಸಾಹಿತ್ಯದ ದಾಖಲೀಕರಣದಲ್ಲಿ ಶ್ರಮಿಸಿದ್ದಾರೆ. ‘ಭೂತ ವರ್ಷಿಪ್’, ‘ಫೋಕ್ ರಿಚುವಲ್ಸ್’, ‘ಫೋಕ್ ಎಪಿಕ್ಸ್ ಆಫ್ ತುಳುನಾಡು’, ‘ಕಾನ್ವರ್ಸೇಷನಲ್ ಕನ್ನಡ’ ಸೇರಿದಂತೆ ಹಲವು ಸಂಶೋಧನಾ ಕೃತಿಗಳನ್ನು ಅವರು ರಚಿಸಿದ್ದಾರೆ.