ಉಡುಪಿ: ರಾಜಸ್ತಾನದ ಉದಯಪುರದಲ್ಲಿ ಈಚೆಗೆ ನಡೆದ ಕನ್ನಯ್ಯ ಲಾಲ್ ಕೊಲೆಯಿಂದಲಾದರೂ ಹಿಂದೂ ಸಮಾಜ ಜಾಗೃತವಾಗಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಹ ಸಂಯೋಜಕ ಸತೀಶ್ ಕರೆ ನೀಡಿದರು.
ಗುರುವಾರ ನಗರದ ಅಜ್ಜರಕಾಡು ಹುತಾತ್ಮ ಸ್ಮಾರಕದ ಮುಂಭಾಗ ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ನೂಪುರ್ ಶರ್ಮಾ ಹೇಳಿರುವ ಸತ್ಯವನ್ನು ಅರಗಿಸಿಕೊಳ್ಳಲಾಗದವರು, ಒಪ್ಪದವರು ಸತ್ಯ ಹೊರಗೆ ಬರುವ ಭಯದಿಂದ ಹಿಂದೂಗಳ ಹತ್ಯೆ ಮಾಡುತ್ತಿದ್ದಾರೆ. ಸಂಚಿನ ಭಾಗವಾಗಿ ಕನ್ನಯ್ಯಲಾಲ್ ಕೊಲೆಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿಗಳನ್ನು ರಸ್ತೆಗೆ ಎಸೆದಾಗ ಬೊಬ್ಬೆ ಹಾಕಿದವರಿಗೆ ಕನ್ನಯ್ಯನ ಕೊಲೆಯಾದಾಗ ನೋವಾಗಲಿಲ್ಲವೇ ಎಂದು ಪ್ರಶ್ನಿಸಿದ ಸತೀಶ್, ಕಲ್ಲಂಗಡಿಗೆ ಇರುವ ಬೆಲೆ ಕನ್ನಯ್ಯನಿಗೆ ಇಲ್ಲವಾಯ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕನ್ನಯ್ಯನ ಸಾವಿಗೆ ಪ್ರತ್ಯುತ್ತರ ಕೊಡುವ ಶಕ್ತಿ ಹಿಂದೂ ಸಮಾಜಕ್ಕೆ ಇದೆ. ಆದರೆ, ಕಾನೂನಾತ್ಮಕವಾಗಿ ಉತ್ತರ ನೀಡುತ್ತೇವೆ ಎಂದರು.
ಪ್ರತಿಭಟನೆಗೂ ಮುನ್ನ ಮಳೆಯಲ್ಲಿಯೇ ಉಡುಪಿ ನಗರದಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಪ್ರತಿಭಟನೆ ನಡೆಸಿದರು.
ಹಿಂದೂ ಜಾಗರಣಾ ವೇದಿಕೆ ಮುಖಂಡರಾದ ಪ್ರಕಾಶ್ ಕುಕ್ಕೇಹಳ್ಳಿ, ಮಹೇಶ್ ಬೈಲೂರು, ರಿಕೇಶ್ ಪಾಲನ್, ದಿನೇಶ್ ಹೆಬ್ರಿ, ಗುರುಪ್ರಸಾದ್ ನಾರಾವಿ ಸೇಇದಂತೆ ಹಲವರು ಪ್ರತಿಭಟನೆಯಲ್ಲಿ ಇದ್ದರು.
ವಿಎಚ್ಪಿ ಪ್ರತಿಭಟನೆ
ಕನ್ನಯ್ಯ ಲಾಲ್ ಹತ್ಯೆಖಂಡಿಸಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹಿಂದೂ ಸಮಾಜ ಸಂಘಟಿತವಾದರೆ ಮಾತ್ರ ಹಿಂದೂಗಳ ಹತ್ಯೆಗೆ ಉತ್ತರ ನೀಡಲು ಸಾದ್ಯ. ಜಿಹಾದಿ ಮನಸ್ಥಿತಿಗಳನ್ನು ಬುಡಸಮೇತ ಕಿತ್ತು ಹಾಕಬೇಕು ಎಂದು ಬಜರಂಗದಳದ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಆಕ್ರೋಶ ವ್ಯಕ್ತಪಡಿಸಿದರು. ಕನ್ನಯ್ಯ ಲಾಲ್ ಹತ್ಯೆೆ ಮಾಡಿದ ಕ್ರೂರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಶ್ರೀಧರ್ ಬಿಜೂರು, ಶ್ಯಾಮಲಾ ಕುಂದರ್, ಪೂರ್ಣಿಮಾ ಸುರೇಶ್, ರಾಘವೇಂದ್ರ ಕುಂದರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.