ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಸಲೇಖ ಅಪಸ್ವರ ಸರಿಯಲ್ಲ: ಪೇಜಾವರ ಸ್ವಾಮೀಜಿ

Last Updated 15 ನವೆಂಬರ್ 2021, 8:03 IST
ಅಕ್ಷರ ಗಾತ್ರ

ಉಡುಪಿ: ವಿಶ್ವೇಶ ತೀರ್ಥ ಶ್ರೀಗಳ ವಿರುದ್ಧ ಹಂಸಲೇಖ ಅಪಸ್ವರ ಎತ್ತಿರುವುದು ಸರಿಯಲ್ಲ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಮಾಜದಲ್ಲಿ ಗಣ್ಯ ವ್ಯಕ್ತಿ ಎಂದು ಕರೆಸಿಕೊಂಡಿರುವವರ ಬಾಯಿಂದ ಇಂತಹ ಮಾತುಗಳು ಬರಬಾರದಿತ್ತು. ಹಂಸಲೇಖ ಹೇಳಿಕೆಯಿಂದ ಸಮಾಜ ತುಂಬಾ ನೊಂದಿದ್ದು, ಪ್ರತ್ಯುತ್ತರವಾಗಿ ಪ್ರತಿಭಟನೆಯನ್ನೂ ಮಾಡಿದೆ. ಹಂಸಲೇಖ ನಾಲಗೆಯನ್ನು ಹರಿಬಿಡಬಾರದಾಗಿತ್ತು ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಶ್ವೇಶ ತೀರ್ಥ ಶ್ರೀಗಳು ಯಾರನ್ನೋ ಓಲೈಸುವುದಕ್ಕಾಗಲಿ, ತೆಗಳುತ್ತಾರೆ ಎಂಬ ಕಾರಣಕ್ಕಾಗಲಿ ದಲಿತರ ಮನೆಗಳಿಗೆ ಪ್ರವೇಶ ಮಾಡಲಿಲ್ಲ. ಅವರ ಗುರಿ ನೇರವಾಗಿತ್ತು ಎಂದು ಸ್ವಾಮೀಜಿ ತಿರುಗೇಟು ನೀಡಿದ್ದಾರೆ.

ಕೃಷ್ಣನಿಗೆ ಅಗ್ರಪೂಜೆ ನೀಡುವಾಗ ಶಿಶುಪಾಲನು ಇದೇ ರೀತಿ ವಿರೋಧ ಮಾಡಿದ್ದ. ಶಿಶುಪಾಲನಿಗೆ ಕೃಷ್ಣನೇ ತಕ್ಕಶಾಸ್ತಿ ಕೂಡ ಮಾಡಿದ್ದ. ಗುರುಗಳು ಸಮಾಜದ ಎಲ್ಲರ ಹೃದಯದಲ್ಲಿ ಕಷ್ಣನನ್ನು ಕಂಡವರು. ಹಾಗಾಗಿ ಅವರು, ದಲಿತರ ಕೇರಿಗೂ ಹೋಗುತ್ತಿದ್ದರು. ನೆರೆ ಹಾವಳಿ, ಭೂಕಂಪ ಆದಾಗಲೂ ಅಲ್ಲಿಗೆ ಭೇಟಿ ನೀಡುತ್ತಿದ್ದರು. ಸಮಾಜದ ಎಲ್ಲರ ಉದ್ಧಾರವನ್ನು ಬಯಸಿದ್ದರು. ನಮ್ಮ ಉದ್ದೇಶ ಪ್ರಾಮಾಣಿಕವಾಗಿದ್ದು, ಯಾರೋ ಏನೋ ಹೇಳಿದ ಮಾತ್ರಕ್ಕೆ ಕೆಲಸ ನಿಲ್ಲಿಸುವುದಿಲ್ಲ. ದಲಿತರ ಜೊತೆ ನಾವಿದ್ದೇವೆ, ದಲಿತರು ನಮ್ಮಿಂದ ಹೊರತಾಗಿಲ್ಲ‌. ಈ ಐಕ್ಯ ಸಂದೇಶ ನೀಡುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಹಂಸಲೇಖ ಹೇಳಿಕೆಗೆ ಪ್ರತಿಭಟನೆ ಮಾಡುವುದಿಲ್ಲ ಎಂದು ತಿಳಿಸಿದರು.

ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದು...

ಹಂಸಲೇಖ ಅವರು ಈಚೆಗೆ ಮೈಸೂರಿನಲ್ಲಿ, ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಬಹುದಷ್ಟೆ, ಅವರು ಕೊಟ್ಟ ಮಾಂಸ ತಿನ್ನಲು ಸಾಧ್ಯವಿಲ್ಲ. ದಲಿತರ ಮನೆಗೆ ಬಲಿತರು ಬರುವುದು ದೊಡ್ಡ ವಿಷಯವಲ್ಲ ಎಂದು ಹೇಳಿಕೆ ನೀಡಿದ್ದರು.

ಅವರ ಹೇಳಿಕೆ ವಿವಾದಕ್ಕೆ ಗುರಿಯಾಗುತ್ತಿದ್ದಂತೆ, ತಮ್ಮ ಫೇಸ್‌ಬುಕ್ ಪುಟದಲ್ಲಿ ಕ್ಷಮೆಯಾಚನೆಯ ವಿಡಿಯೊ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT