ಉಡುಪಿ: ನವರಾತ್ರಿ ಹಬ್ಬಕ್ಕೂ ಮುನ್ನವೇ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಮೀನಿಗಿಂತಲೂ ತರಕಾರಿ ದರವೇ ಹೆಚ್ಚಾಗಿರುವುದು ಗ್ರಾಹಕರನ್ನು ಚಿಂತೆಗೀಡುಮಾಡಿದೆ. ಹಬ್ಬದ ಸಂದರ್ಭ ಬೆಲೆ ಮತ್ತಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.
ಕೊತ್ತಮರಿ ಸೊಪ್ಪಿನ ದರದಲ್ಲಿ ಭಾರಿ ಏರಿಕೆಯಾಗಿದ್ದು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 200 ರಿಂದ ₹ 220 ದರ ಇದೆ. ತಿಂಗಳ ಹಿಂದೆ ಕೆ.ಜಿಗೆ ₹ 50 ಇದ್ದ ದರ ನಾಲ್ಕು ಪಟ್ಟು ಹೆಚ್ಚಾಗಿದೆ. ಕೊತ್ತಮರಿ ಹೆಚ್ಚಾಗಿ ಬೆಳೆಯುವ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಈಚೆಗೆ ಸುರಿದ ಭಾರಿ ಮಳೆಗೆ ಬೆಳೆ ನಾಶವಾಗಿರುವುದು ದರ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ವ್ಯಾಪಾರಿ ಶಫೀಕ್.
ನವರಾತ್ರಿ ಹಬ್ಬಕ್ಕೆ ಪಲ್ಯ, ಸಾಂಬಾರ್, ಕೊಸಂಬರಿ, ವಡೆ ಸೇರಿದಂತೆ ಇತರ ಖಾದ್ಯಗಳ ತಯಾರಿಕೆಗೆ ಕೊತ್ತಮರಿ ಬಳಕೆ ಪ್ರದಾನವಾಗಿರುವುದರಿಂದ ಸದ್ಯ ದರ ಇಳಿಕೆಯಾಗುವುದಿಲ್ಲ. ಹಬ್ಬದ ನಂತರ ಕಡಿಮೆಯಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು.
ಮೆಂತೆ, ಪಾಲಕ್, ಅರಿವೆ, ದಂಟು, ಸಬ್ಬಸ್ಸಿಗೆ ಸೊಪ್ಪಿನ ದರವೂ ದುಪ್ಪಟ್ಟಾಗಿದೆ. 15 ದಿನಗಳ ಹಿಂದೆ ಕಟ್ಟಿಗೆ ₹ 5 ರಿಂದ ₹ 8 ದರ ಇತ್ತು. ಈಗ ಕಟ್ಟಿಗೆ ₹ 15 ಇದೆ. ಬೆಲೆ ಹೆಚ್ಚಾದರೂ ಗುಣಮಟ್ಟದ ಸೊಪ್ಪು ದೊರೆಯುತ್ತಿಲ್ಲ.
ಕಳೆದ ವಾರಕ್ಕೆ ಹೋಲಿಸಿದರೆ ಟೊಮೆಟೊ ದರ ಸ್ಥಿರತೆ ಕಾಯ್ದುಕೊಂಡಿದ್ದು ಕೆ.ಜಿಗೆ ₹ 40 ರಿಂದ ₹ 45ಕ್ಕೆ ಮಾರಾಟವಾಗುತ್ತಿದೆ. ಹೋಲ್ಸೇಲ್ನಲ್ಲಿ ₹ 35 ದರ ಇದೆ. ತಿಂಗಳ ಹಿಂದೆ ತೀರಾ ಅಗ್ಗವಾಗಿ, ಕಳೆದ ವಾರ ಗಗನಕ್ಕೇರಿದ್ದ ನುಗ್ಗೆಯ ದರ ಸ್ವಲ್ಪ ಕುಸಿದಿದೆ. ವಾರದ ಹಿಂದೆ ಕೆ.ಜಿಗೆ ₹ 150 ಇದ್ದ ದರ ಸದ್ಯ ₹ 100ಕ್ಕೆ ಇಳಿಕೆಯಾಗಿದೆ.
ಶತಕದ ಗಡಿ ದಾಟಿದ್ದ ಕ್ಯಾರೆಟ್ ಕೆ.ಜಿಗೆ ₹ 80ಕ್ಕೆ ಇಳಿದಿದೆ. ಬೀನ್ಸ್ ದರ ಮಾತ್ರ ₹ 100 ರಿಂದ ₹ 120 ರವರೆಗೂ ಮಾರಾಟವಾಗುತ್ತಿವೆ. ಹೂಕೋಸು ₹ 60 ರಿಂದ ₹ 80ಕ್ಕೆ ಜಿಗಿದರೆ, ಎಲೆಕೋಸು ₹ 30ರಿಂದ ₹ 40, ಸಾಂಬಾರ್ ಸೌತೆ ₹ 40 ರಿಂದ ₹ 55, ಬದನೆಕಾಯಿ ₹ 60 ರಿಂದ ₹ 70, ಬೆಂಡೆಕಾಯಿ ₹ 40 ರಿಂದ ₹ 60, ಮೂಲಂಗಿ ₹ 50ರಿಂದ ₹ 70, ಗೆಡ್ಡೆಕೋಸು 45 ರಿಂದ 70ಕ್ಕೆ ಏರಿಕೆಯಾಗಿದೆ.
ಕಳೆದ ವಾರಕ್ಕೆ ಹೋಲಿಸಿದರೆ ತರಕಾರಿಗಳ ದರ ಸ್ವಲ್ಪ ಹೆಚ್ಚು, ಸ್ವಲ್ಪ ಕಡಿಮೆಯಾಗಿದೆ. ಹೀರೇಕಾಯಿ ಕೆ.ಜಿಗೆ ₹ 80, ಬೀಟ್ರೂಟ್ ₹60, ಈರುಳ್ಳಿ 30, ಮೆಣಸಿಕಾಯಿ ₹ 45, ಕ್ಯಾಪ್ಸಿಕಂ ₹80, ಹಾಗಲಕಾಯಿ ₹ 80, ಆಲೂಗಡ್ಡೆ ₹35, ನಿಂಬೆಹಣ್ಣು 10ಕ್ಕೆ ಮೂರು, ಚವಳಿಕಾಯಿ ₹ 60, ಬೆಳ್ಳುಳ್ಳಿ ₹80 ದರ ಇದೆ.
ಹಣ್ಣಿನ ದರ ಕೂಡ ಗಗನಮುಖಿಯಾಗಿದೆ. ಸಪೋಟ ಕೆ.ಜಿಗೆ 120, ಸೇಬಿಗೆ ಗುಣಮಟ್ಟದ ಆಧಾರದ ಮೇಲೆ 120 ರಿಂದ ₹ 250ರವರೆಗೆ ದರ ಇದೆ. ಬಾಳೆಹಣ್ಣು ಶತಕದ ಗಡಿ ಮುಟ್ಟಿದೆ. ದಾಳಿಂಬೆ ₹ 200, ಮೋಸಂಬಿ ₹ 70, ಕಿತ್ತಳೆ 80 ದರ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.